Asianet Suvarna News Asianet Suvarna News

ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವ ಕುರಿತಂತೆ ಅಚ್ಚರಿಕೆಯ ಹೇಳಿಕೆ ನೀಡಿದ ಸೌರವ್ ಗಂಗೂಲಿ..!

* ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಕೋಚ್ ಅವಧಿ ಮುಕ್ತಾಯ

* ಹೊಸ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

* ರಾಹುಲ್ ದ್ರಾವಿಡ್ ಕೋಚ್ ಆಗುವ ಕುರಿತಂತೆ ಹರಿದಾಡುತ್ತಿದೆ ಗಾಳಿಸುದ್ದಿ

No confirmation on Rahul Dravid appointment as head coach Says BCCI President Sourav Ganguly kvn
Author
Bengaluru, First Published Oct 24, 2021, 5:52 PM IST

ನವದೆಹಲಿ(ಅ.24): ಮಾಜಿ ನಾಯಕ ರಾಹುಲ್‌ ದ್ರಾವಿಡ್‌ (Rahul Dravid) ಟೀಂ ಇಂಡಿಯಾ ಪ್ರಧಾನ ಕೋಚ್‌ ಆಗಿ ನೇಮಕಗೊಳ್ಳುವುದು ಖಚಿತ ಎಂದೇ ಹೇಳಲಾಗುತ್ತಿರುವ ನಡುವೆಯೇ ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

‘ದ್ರಾವಿಡ್‌ ಇನ್ನೂ ಟೀಂ ಇಂಡಿಯಾದ (Team India) ಕೋಚ್‌ ಆಗಲು ಒಪ್ಪಿಕೊಂಡಿಲ್ಲ. ಕೆಲ ದಿನಗಳ ಸಮಯ ಕೇಳಿದ್ದಾರೆ’ ಎಂದು ಶನಿವಾರ ಸ್ಪಷ್ಪಪಡಿಸಿದ್ದಾರೆ. ‘ದ್ರಾವಿಡ್‌ ಹೊಸ ಕೋಚ್‌ ಎನ್ನುವ ವರದಿಯನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿದರೆ, ಅವರು ಕೋಚ್‌ ಆಗಬಹುದು. ಹಿರಿಯರ ತಂಡಕ್ಕೆ ಕೋಚ್‌ ಆಗುವ ಬಗ್ಗೆ ಈ ಮೊದಲೂ ಅವರೊಂದಿಗೆ ಚರ್ಚಿಸಲಾಗಿದೆ. ಆದರೆ ಅವರು ಆಸಕ್ತಿ ಹೊಂದಿದಂತೆ ಕಾಣುತ್ತಿಲ್ಲ. ಅವರೀಗ ಸಮಯ ಕೇಳಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ’ ಎಂದಿದ್ದಾರೆ.

T20 World Cup Ind vs Pak ಟೀಂ ಇಂಡಿಯಾವನ್ನು ಗೆಲ್ಲಿಸ್ತಾರಾ ಮೆಂಟರ್ ಧೋನಿ..?

ರಾಹುಲ್‌ ದ್ರಾವಿಡ್ ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‌ (IPL 2021) ಫೈನಲ್‌ ವೇಳೆ ರಾಹುಲ್‌ ದ್ರಾವಿಡ್ ಅವರನ್ನು ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾ (Jay Shah) ಭೇಟಿಯಾಗಿ ಕೋಚ್ ಆಗಲು ಮನವೊಲಿಸಿದ್ದಾರೆ ಎಂದು ವರದಿಯಾಗಿತ್ತು.

ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐನಿಂದ ಒತ್ತಡವಿತ್ತೇ..?

ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಮುಕ್ತಾಯದ ಬಳಿಕ ಟೀಂ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ (Ravi Shastri) ಒಪ್ಪಂದಾವಧಿ ಕೂಡಾ ಮುಕ್ತಾಯವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ಇರುವವರಿಂದ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. 

ಟಿ20 ನಾಯಕತ್ವ: ಚರ್ಚೆ ಅಗತ್ಯವಿಲ್ಲ ಎಂದ ಕೊಹ್ಲಿ

ದುಬೈ: ವಿಶ್ವಕಪ್‌ ಬಳಿಕ ಟಿ20 ನಾಯಕತ್ವ ತ್ಯಜಿಸುವುದಾಗಿ ಘೋಷಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ (Virat Kohli), ಈ ವಿಚಾರದ ಬಗ್ಗೆ ಮತ್ತೊಮ್ಮೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

‘ಈ ಬಗ್ಗೆ ಈಗಾಗಲೇ ತುಂಬಾ ವಿವರಿಸಿದ್ದೇನೆ. ಅದಕ್ಕಿಂತ ಹೆಚ್ಚಿನದನ್ನು ಮತ್ತೆ ಹೇಳುವ ಅಗತ್ಯವಿಲ್ಲ. ವಿಶ್ವಕಪ್‌ನಲ್ಲಿ ಉತ್ತಮವಾಗಿ ಆಡುವುದು ಮತ್ತು ತಂಡವಾಗಿ ಏನೆಲ್ಲಾ ಮಾಡಬಹುದೆಂಬುದರ ಬಗ್ಗೆ ಮಾತ್ರ ಈಗ ನಮ್ಮ ಗಮನವಿದೆ. ಜನರು ಅಸ್ತಿತ್ವದಲ್ಲಿ ಇಲ್ಲದ ವಿಚಾರವನ್ನು ಮತ್ತೆ ಕೆದಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಮೇವು ನೀಡಲು ನಾನು ತಯಾರಿಲ್ಲ. ಈ ಬಗ್ಗೆ ಪ್ರಶ್ನಿಸುತ್ತಿರುವ ಜನರ ಬಗ್ಗೆ ನನಗೆ ಕೆಟ್ಟ ಭಾವನೆಯಿದೆ’ ಎಂದು ಕಿಡಿಕಾರಿದ್ದಾರೆ.

Team India ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ..!

ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಸೆಪ್ಟೆಂಬರ್ 16ರಂದು ಟ್ವೀಟ್ ಮೂಲಕ ಈ ವಿಚಾರ ಖಚಿತಪಡಿಸಿದ್ದ ವಿರಾಟ್ ಕೊಹ್ಲಿ, ಸಾಕಷ್ಟು ಸಮಯ ತೆಗೆದುಕೊಂಡು ನಾಯಕತ್ವದಿಂದ ಕೆಳಗಿಳಿಯುವ ತೀರ್ಮಾನ ತೆಗೆದುಕೊಂಡಿದ್ದೇನೆ. ಕೋಚ್ ರವಿಶಾಸ್ತ್ರಿ ಹಾಗೂ ಉಪನಾಯಕ ರೋಹಿತ್ ಶರ್ಮಾ (Rohit Sharma) ಜತೆ ಮಾತನಾಡಿ ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದರು. 

Follow Us:
Download App:
  • android
  • ios