ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ಅಭಿನಂದನೆ ಸಲ್ಲಿಸಿದ್ದು, ವಿಶೇಷವಾಗಿ ಕೋಚ್ ಗೌತಮ್ ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ. ಧೋನಿಯ ಈ ಭಾವುಕ ಪೋಸ್ಟ್‌ಗೆ ಗಂಭೀರ್ ಕೂಡ ಪ್ರೀತಿಯಿಂದ ಉತ್ತರಿಸಿದ್ದಾರೆ. 

ಮುಂಬೈ: ಎಷ್ಟೋ ವರ್ಷಗಳಿಂದ ಅಭಿಮಾನಿಗಳ ನಡುವೆ ಇದ್ದ ಮುಸುಕಿನ ಗುದ್ದಾಟಕ್ಕೆ ಸದ್ಯಕ್ಕೆ ಬ್ರೇಕ್ ಹಾಕಬಹುದು. ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಎಂ.ಎಸ್. ಧೋನಿ ಮಾಡಿದ ಅಭಿನಂದನಾ ಪೋಸ್ಟ್ ಮತ್ತು ಅದಕ್ಕೆ ಗೌತಮ್ ಗಂಭೀರ್ ಕೊಟ್ಟ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಕಪ್ ಗೆದ್ದ ಬೆನ್ನಲ್ಲೇ, ಧೋನಿ ಇನ್‌ಸ್ಟಾಗ್ರಾಂನಲ್ಲಿ ಒಂದು ಭಾವುಕ ಪೋಸ್ಟ್ ಹಾಕಿದ್ದರು. ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸಿದ ಧೋನಿ, ಗೌತಮ್ ಗಂಭೀರ್ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದರು.

ಗೌತಮ್ ಗಂಭೀರ್ ಅಭಿನಂದಿಸಿದ ಧೋನಿ

'ಅಹಮದಾಬಾದ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ತಂಡ, ಸಹಾಯಕ ಸಿಬ್ಬಂದಿ ಹಾಗೂ ವಿಶ್ವಾದ್ಯಂತ ಇರುವ ಅಭಿಮಾನಿಗಳಿಗೆ ಅಭಿನಂದನೆಗಳು. ಕೋಚ್ ಸಾಬ್ (ಗಂಭೀರ್), ನಿಮ್ಮ ನಗು ನೋಡಲು ಚೆನ್ನಾಗಿದೆ. ನಿಮ್ಮ ಆಕ್ರಮಣಕಾರಿ ಮನೋಭಾವ ಮತ್ತು ಈ ನಗು ಸೇರಿದರೆ, ಅದೊಂದು ಕಿಲ್ಲರ್ ಕಾಂಬೋ. ಚೆನ್ನಾಗಿ ಆಡಿದಿರಿ. ಎಲ್ಲರೂ ಸಂಭ್ರಮಿಸಿ' ಅಂತ ಧೋನಿ ಬರೆದುಕೊಂಡಿದ್ದರು. ಅಷ್ಟೇ ಅಲ್ಲ, ಜಸ್ಪ್ರೀತ್ ಬುಮ್ರಾರನ್ನು 'ಚಾಂಪಿಯನ್ ಬೌಲರ್' ಅಂತ ಹೊಗಳಲೂ ಧೋನಿ ಮರೆಯಲಿಲ್ಲ. ಕೆಲವೇ ಗಂಟೆಗಳಲ್ಲಿ ಧೋನಿಯ ಈ ಪೋಸ್ಟ್‌ಗೆ 80 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿತ್ತು.

View post on Instagram

ಧೋನಿಯ ಈ ಪ್ರೀತಿಯ ಪೋಸ್ಟ್‌ಗೆ ಗೌತಮ್ ಗಂಭೀರ್ ಇಂದು ಮಧ್ಯಾಹ್ನ ಉತ್ತರ ನೀಡಿದ್ದಾರೆ. 'ನಗಲಿಕ್ಕೆ ಇದಕ್ಕಿಂತ ದೊಡ್ಡ ಕಾರಣ ಬೇಕಾ! ನಿಮ್ಮನ್ನು ನೋಡಿ ಖುಷಿಯಾಯಿತು' ಎಂದು ಗಂಭೀರ್ ರಿಪ್ಲೈ ಮಾಡಿದ್ದಾರೆ. ಗಂಭೀರ್ ಅವರ ಈ ಉತ್ತರಕ್ಕೆ ಕೆಲವೇ ಕ್ಷಣಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ.

ಧೋನಿ-ಗಂಭೀರ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ

2011ರ ವಿಶ್ವಕಪ್ ನಂತರ ಧೋನಿ ಮತ್ತು ಗಂಭೀರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಹರಿದಾಡುತ್ತಿದ್ದವು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತಾನು ಟಾಪ್ ಸ್ಕೋರರ್ ಆಗಿದ್ದರೂ, ಗೆಲುವಿನ ಸಿಕ್ಸರ್ ಬಾರಿಸಿದ ಧೋನಿಗೆ ಎಲ್ಲಾ ಕ್ರೆಡಿಟ್ ಸಿಕ್ಕಿದ್ದರ ಬಗ್ಗೆ ಗಂಭೀರ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಿನ್ನೆ ವಿಶ್ವಕಪ್ ಗೆದ್ದ ನಂತರವೂ, ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವಿಗೇ ತಾನು ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ಗಂಭೀರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.