T20 World Cup ಧೋನಿಯನ್ನು ಮೆಂಟರ್ ಮಾಡಿದ್ದೇಕೆ; ಗುಟ್ಟು ಬಿಚ್ಚಿಟ್ಟ ದಾದಾ
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
* ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಮೆಂಟರ್
* ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭ
ನವದೆಹಲಿ(ಸೆ.11): 6 ಟಿ20 ವಿಶ್ವಕಪ್ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ, ಅಪಾರ ಅನುಭವ ಹೊಂದಿರುವ ಎಂ.ಎಸ್.ಧೋನಿ ಅವರ ಅನುಭವವನ್ನು ಬಳಸಿಕೊಳ್ಳುವ ಉದ್ದೇಶದಿಂದ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್(ಮಾರ್ಗದರ್ಶಕ) ಆಗಿ ನೇಮಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಬಿಸಿಸಿಐ ಪ್ರಸ್ತಾಪಕ್ಕೆ ಒಪ್ಪಿದ್ದಕ್ಕೆ ಗಂಗೂಲಿ, ಧೋನಿಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ತಾವು ಮಾಡಿದ ಮನವಿಗೆ ಧೋನಿ ಒಪ್ಪಿಕೊಂಡರು. ಧೋನಿ ನೇಮಕದ ಬಗ್ಗೆ ನಾಯಕ ಕೊಹ್ಲಿ, ಉಪನಾಯಕ ರೋಹಿತ್, ಪ್ರಧಾನ ಕೋಚ್ ರವಿಶಾಸ್ತ್ರಿ, ಆಯ್ಕೆ ಸಮಿತಿಗೆ ತಿಳಿಸಿದಾಗ ಅವರೆಲ್ಲರೂ ಯಾವುದೇ ವಿರೋಧವಿಲ್ಲದೆ ಒಪ್ಪಿಕೊಂಡರು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಧೋನಿ ವಿರುದ್ಧ ದಾಖಲಾಯ್ತು ದೂರು; ಟೀಂ ಇಂಡಿಯಾಗೆ ಮೆಂಟರ್ ಸೇವೆ ಸಿಗುವುದು ಅನುಮಾನ!
2007ರ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಟಿ20 ವಿಶ್ವಕಪ್ ಗೆಲ್ಲಲು ಭಾರತ ಕ್ರಿಕೆಟ್ ತಂಡಕ್ಕೆ ಸಾಧ್ಯವಾಗಿಲ್ಲ. ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಯುಎಇನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಬಿಸಿಸಿಐ ಆತಿಥ್ಯವನ್ನು ವಹಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.