ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ 5ನೇ ಆವೃತ್ತಿಗೆ ಬೆಂಗಳೂರು ಸಹ ಆತಿಥ್ಯ ವಹಿಸಲಿದೆ. ಜೂ.20ರಿಂದ ಜು.12ರ ವರೆಗೂ ನಡೆಯಲಿರುವ ಪಂದ್ಯಾವಳಿಯ ಫೈನಲ್ ಸೇರಿದಂತೆ 10 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು ಮತ್ತು ಶಿವಮೊಗ್ಗ ತಂಡಗಳು ಹೊಸ ಹೆಸರುಗಳೊಂದಿಗೆ ಕಣಕ್ಕಿಳಿಯಲಿವೆ.

ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ 5ನೇ ಆವೃತ್ತಿಗೆ ಬೆಂಗಳೂರು ಸಹ ಆತಿಥ್ಯ ವಹಿಸಲಿದೆ. 10 ದಿನಗಳ ಹಿಂದೆ ಟೂರ್ನಿ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದ ಕೆಎಸ್‌ಸಿಎ, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಘೋಷಿಸಿತ್ತು. ಇದೀಗ ಬೆಂಗಳೂರಲ್ಲೂ ಪಂದ್ಯಗಳು ನಡೆಯಲಿವೆ ಎಂದು ಖಚಿತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂನ್ 20ರಿಂದ ಮಹಾರಾಜ ಟ್ರೋಫಿ ಆರಂಭ

ಜೂ.20ರಿಂದ ಜು.12ರ ವರೆಗೂ ಪಂದ್ಯಾವಳಿ ನಡೆಯಲಿದ್ದು, 6 ತಂಡಗಳು ಪ್ರಶಸ್ತಿ ಕಣದಲ್ಲಿರಲಿವೆ. ಜೂ.20-26 ಮೈಸೂರಲ್ಲಿ ಮೊದಲ ಚರಣ ನಡೆಯಲಿದ್ದು, ಜೂ.27-ಜು.3, 2ನೇ ಚರಣ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಈ ಎರಡು ನಗರಗಳು ತಲಾ 12 ಪಂದ್ಯಕ್ಕೆ ಆತಿಥ್ಯ ನೀಡಲಿವೆ. ಜು.5-12ರ ವರೆಗೂ ಬೆಂಗಳೂರಲ್ಲಿ ಫೈನಲ್‌ ಸೇರಿ 10 ಪಂದ್ಯಗಳು ನಡೆಯಲಿವೆ.

ಜೂ.20ರಂದು ಮೊದಲ ದಿನ ಬೆಂಗ್ಳೂರು ಬ್ಲಾಸ್ಟರ್ಸ್‌-ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿವೆ. 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌-ಶಿವಮೊಗ್ಗ ಯೋಧಾಸ್‌ ಮುಖಾಮುಖಿಯಾಗಲಿವೆ. ಜೂ.5ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಒಟ್ಟು 150ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಎರಡು ತಂಡಗಳಿಗೆ ಹೊಸ ಮಾಲಿಕರು

ಮಂಗಳೂರು ಹಾಗೂ ಶಿವಮೊಗ್ಗ ತಂಡಗಳ ಮಾಲಿಕರು ಬದಲಾಗಿದ್ದಾರೆ. ಮಂಗಳೂರು ತಂಡವನ್ನು ಮಾನ್ಯತಾ ಡೆವಲಪರ್ಸ್‌ ಸಂಸ್ಥೆ ಖರೀದಿಸಿದ್ದು, ಶಿವಮೊಗ್ಗ ತಂಡವನ್ನು ಐಸಿಎಸ್‌ ಮೊಬೈಲ್ಸ್‌ನ ಅನುಪಮ್‌ ಅಗರ್‌ವಾಲಾ ಖರೀದಿ ಮಾಡಿದ್ದಾರೆ. ಮಂಗಳೂರು ತಂಡ ಇನ್ಮುಂದೆ ‘ಕೋಸ್ಟಲ್‌ ಕಿಂಗ್ಸ್‌ ಮಂಗಳೂರು’ ಎಂದು, ಶಿವಮೊಗ್ಗ ತಂಡ ‘ಶಿವಮೊಗ್ಗ ಯೋಧಾಸ್‌’ ಎಂದು ಕರೆಸಿಕೊಳ್ಳಲಿದೆ.