Asianet Suvarna News Asianet Suvarna News

ಕನ್ನಡ ಬಳಸದೇ ಇರುವುದು ಅಚಾತುರ್ಯ: ಕೆಎಸ್‌ಸಿಎ ವಿಷಾದ

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಕನ್ನಡ ಕಡೆಗಣನೆ ವಿಚಾರ
ಈ ಘಟನೆಯ ಕುರಿತಂತೆ ವಿಷಾದ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಮಹಾರಾಜ ಟಿ20 ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಬಳಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕೆಎಸ್‌ಸಿಎ

KSCA regret not use Kannada in Maharaja Trophy Unveil programme kvn
Author
First Published Aug 25, 2023, 8:35 AM IST

ಬೆಂಗಳೂರು(ಆ.25): ಮಹಾರಾಜ ಟಿ20 ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಬಳಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ), ಮುಂದಿನ ದಿನಗಳಲ್ಲಿ ಇಂತಹ ಆಕ್ಷೇಪಣೆಗೆ ಕಾರಣವಾಗದಂತೆ ನಡೆದುಕೊಳ್ಳುವುದಾಗಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಕನ್ನಡ ಬಳಸದ ಬಗ್ಗೆ ಸುವರ್ಣ ನ್ಯೂಸ್‌.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ ಪ್ರಕಟಿಸಿದ ವರದಿ ಉಲ್ಲೇಖಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಾರಿ ಮಾಡಿದ್ದ ನೋಟಿಸ್‌ಗೆ ಉತ್ತರಿಸಿರುವ ಕೆಎಸ್‌ಸಿಎ, ‘ಅಚಾತುರ್ಯದಿಂದ ಕನ್ನಡ ಫಲಕವನ್ನು ಅಳವಡಿಸಲಾಗಿಲ್ಲ. ಕಾರ್ಯಕ್ರಮದ ವೇಳೆ ಇದು ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ತಪ್ಪು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಕನ್ನಡ ಬಳಸಬಾರದು ಎಂಬ ಕೆಟ್ಟ ಉದ್ದೇಶ ಖಂಡಿತವಾಗಿಯೂ ಇರಲಿಲ್ಲ. ಭವಿಷ್ಯದಲ್ಲಿ ಇಂತ ಆಕ್ಷೇಪಣೆ ಬರದಂತೆ ನೋಡಿಕೊಳ್ಳುತ್ತೇವೆ’ ಎಂದು ಸ್ಪಷ್ಟೀಕರಣ ನೀಡಿದೆ.

ಲಾಂಛನದಲ್ಲೂ ಕನ್ನಡ ಬಳಸಿ

ಈ ಸ್ಪಷ್ಟೀಕರಣಕ್ಕೆ ಉತ್ತರಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ‘ಕೆಎಸ್‌ಸಿಎ ಸಂಸ್ಥೆಯು ಅಳವಡಿಸಿಕೊಂಡಿರುವ ಲಾಂಛನವೂ ಸಂಪೂರ್ಣ ಆಂಗ್ಲಮಯವಾಗಿದೆ. ಲಾಂಛನದಲ್ಲಿ ಕನ್ನಡವನ್ನು ಬಳಸಬೇಕು. ಶೀಘ್ರವೇ ಈ ಬದಲಾವಣೆ ಮಾಡಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಕನ್ನಡದ ಬಳಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದಂತೆ ನಡೆದುಕೊಳ್ಳಬೇಕು’ ಎಂದು ಕೆಎಸ್‌ಸಿಎ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಏಷ್ಯಾಕಪ್‌ ಟೂರ್ನಿಗೆ ಶಾರ್ದೂಲ್‌ಗಿಂತ ಈ ಆಟಗಾರ ಒಳ್ಳೆಯ ಆಯ್ಕೆಯಾಗುತ್ತಿದ್ದ: ಗೌತಮ್ ಗಂಭೀರ್

ಬೆಂಗಳೂರಿಗೆ 8ನೇ ಪಂದ್ಯದಲ್ಲೂ ಸೋಲು

ಬೆಂಗಳೂರು: ಮಹಾರಾಜ ಟ್ರೋಫಿ ಟಿ20ಯಲ್ಲಿ ಬೆಂಗಳೂರು 8ನೇ ಪಂದ್ಯದಲ್ಲೂ ಸೋಲು ಕಂಡಿದೆ. ಗುರುವಾರ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಮಯಾಂಗ್‌ ಅಗರ್‌ವಾಲ್‌ ನಾಯಕತ್ವದ ಬೆಂಗಳೂರು 5 ವಿಕೆಟ್‌ ಸೋಲನುಭವಿಸಿತು. ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 19.3 ಓವರ್‌ಗಳಲ್ಲಿ 113ಕ್ಕೆ ಆಲೌಟಾಯಿತು. ಸುಲಭ ಗುರಿಯನ್ನು ಗುಲ್ಬರ್ಗ 14.5 ಓವರ್‌ಗಲ್ಲೇ ಬೆನ್ನತ್ತಿತು. 8 ಪಂದ್ಯಗಳಲ್ಲಿ 5ನೇ ಜಯ ಸಂಪಾದಿಸಿದ ತಂಡ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಚಂದ್ರಯಾನ 3 ಸಕ್ಸಸ್ ಬೆನ್ನಲ್ಲೇ ಟೀಂ ಇಂಡಿಯಾದಲ್ಲೂ ಹುಮ್ಮಸ್ಸು..! ಈ ಸಲ ಕಪ್ ನಮ್ದೇ ಬಾಸೂ..!

ಮಂಗ್ಳೂರಿಗೆ ಜಯ: ಮತ್ತೊಂದು ಪಂದ್ಯದಲ್ಲಿ ಶಿವಮೊಗ್ಗ ವಿರುದ್ಧ ಮಂಗಳೂರು 15 ರನ್‌ ಜಯಗಳಿಸಿ, ಟೂರ್ನಿಯ 4ನೇ ಜಯ ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ಮಂಗಳೂರು, ತಿಪ್ಪಾ ರೆಡ್ಡಿ(82) ಅಬ್ಬರದಿಂದಾಗಿ 7 ವಿಕೆಟ್‌ಗೆ 191 ರನ್‌ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಶಿವಮೊಗ್ಗ 9 ವಿಕೆಟ್‌ಗೆ 176 ರನ್‌ ಗಳಿಸಿತು. ತಂಡಕ್ಕಿದು ಕೊನೆ 5 ಪಂದ್ಯದಲ್ಲಿ 4ನೇ ಸೋಲು.

ಐಪಿಎಲ್‌: ಮುಂಬೈಗೆ ಮಾಲಿಂಗ ವಾಪಸ್‌!

ನವದೆಹಲಿ: 2024ರ ಐಪಿಎಲ್‌ನಲ್ಲಿ ಲಸಿತ್‌ ಮಾಲಿಂಗ ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ತಂಡದ ನೂತನ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದು, 9 ಆವೃತ್ತಿಗಳಲ್ಲಿ ಈ ಹುದ್ದೆ ನಿರ್ವಹಿಸಿದ್ದ ಶೇನ್‌ ಬಾಂಡ್‌ಗೆ ಫ್ರಾಂಚೈಸಿಯು ಹೊಸ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಮುಂಬೈ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದ ಮಾಲಿಂಗ 2021ರಲ್ಲಿ ನಿವೃತ್ತಿ ಪಡೆದಿದ್ದರು. ಆ ಬಳಿಕ ಅವರು 2022ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ಮಾಲಿಂಗ ಮುಂಬೈನ ಬೌಲಿಂಗ್‌ ಕೋಚ್‌ ಆಗುತ್ತಿರುವುದು ಇದು 2ನೇ ಬಾರಿ. ಈ ಮೊದಲು 2018ರಲ್ಲಿ ಅವರು ಈ ಹುದ್ದೆ ನಿರ್ವಹಿಸಿದ್ದರು. ಆ ಬಳಿಕ ನಿವೃತ್ತಿಯಿಂದ ಹೊರಬಂದು ಮತ್ತೆ ತಂಡದ ಪರ ಆಡಿದ್ದರು.

Follow Us:
Download App:
  • android
  • ios