Asianet Suvarna News Asianet Suvarna News

ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಗೆದ್ದ ಕರ್ನಾಟಕ ಹೊಸ ಇತಿಹಾಸ ರಚಿಸಿದೆ. ವಿಜಯ್ ಹಜಾರೆ ಬಳಿಕ ಸಯ್ಯದ್ ಅಲಿ ಟ್ರೋಫಿ ಕೂಡ ಕರ್ನಾಟಕದ ಪಾಲಾಗಿದೆ. ದಾಖಲೆ ವಿವರ ಇಲ್ಲಿದೆ.

Karnataka create record in syed mushtaq ali trophy Final
Author
Bengaluru, First Published Dec 2, 2019, 10:52 AM IST

ಸೂರತ್(ಡಿ.02): ಭಾರತದ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡ ಹೊಸ ದಾಖಲೆ ಬರೆದಿದೆ. ಸತತ 2 ಬಾರಿ  ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ ಎಂಬ ದಾಖಲೆ ಬರೆದಿದೆ. 2018-19ರ ಸಾಲಿನ ಪ್ರಶಸ್ತಿ ಹಾಗೂ ಇದೀಗ 2019-20ರ ಸಾಲಿನ ಟ್ರೋಫಿಯನ್ನು ಕರ್ನಾಟಕ ವಶಪಡಿಸಿಕೊಂಡಿದೆ. ಎರಡು ಬಾರಿ ಪ್ರಶಸ್ತಿ ಗೆದ್ದ 3ನೇ ತಂಡ ಅನ್ನೋ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ. ಇದಕ್ಕೂ ಮೊಗಲು ಬರೋಡಾ ಹಾಗೂ ಗುಜರಾತ್ 2 ಬಾರಿ ಮುಷ್ತಾಕ್ ಆಲಿ ಟ್ರೋಫಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಬಿಸಿ​ಸಿಐ ಟಿ20 ನಿಯ​ಮ​ದಲ್ಲಿ ಭಾರೀ ಎಡ​ವ​ಟ್ಟು!

ಕರ್ನಾಟಕಕ್ಕೆ ಟಿ20 ಕಿರೀಟ
ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 2ನೇ ಬಾರಿ ಟ್ರೋಫಿ ಜಯಿಸಿದ್ದು, ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ಇಲ್ಲಿನ ಲಾಲ್‌ಭಾಯ್‌ ಕಂಟ್ರ್ಯಾಕ್ಟರ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ... ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ದೇಶಿ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕ ತಂಡ ತನ್ನ ಪ್ರಾಬಲ್ಯ ಮುಂದುವರಿಸಿದೆ. ಮುಂಬರುವ ರಣಜಿ ಟ್ರೋಫಿಗೆ ಸಜ್ಜಾಗಿರುವ ಸಂದೇಶವನ್ನು ಕರ್ನಾಟಕ ತಂಡ, ಇತರೆ ತಂಡಗಳಿಗೆ ರವಾನಿಸಿದೆ.

ಇತ್ತೀಚೆಗಷ್ಟೇ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲೂ ಫೈನಲ್‌ನಲ್ಲಿ ಕೂಡ ತಮಿಳುನಾಡು ತಂಡವನ್ನು ಬಗ್ಗು ಬಡಿದು 4ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಕರ್ನಾಟಕ ತಂಡ, ಇದೀಗ ರಾಷ್ಟ್ರೀಯ ಟಿ20 ಟೂರ್ನಿಯಲ್ಲೂ ಕಿರೀಟ ಮುಡಿಗೇರಿಸಿಕೊಂಡಿದೆ.

ಟೂರ್ನಿಯ ಸೂಪರ್‌ ಲೀಗ್‌ ಹಂತದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್‌ಗಳ ಗೆಲುವು ಸಾಧಿಸಿದ್ದ ಮನೀಶ್‌ ಪಾಂಡೆ ಪಡೆ, ಫೈನಲ್‌ನಲ್ಲಿ ಮತ್ತೆ ತಮಿಳರನ್ನು ಸೋಲಿಸಿ ಪ್ರಾಬಲ್ಯ ಮೆರೆಯಿತು.

ಆರಂಭಿಕ ಆಘಾತ:
ಕರ್ನಾಟಕ ನೀಡಿದ 181 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ತಮಿಳುನಾಡು ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 37 ರನ್‌ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡ ತಮಿಳುನಾಡು ಆರಂಭಿಕ ಆಘಾತ ಅನುಭವಿಸಿತು. ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಹರಿ ನಿಶಾಂತ್‌ (14) ವಿಕೆಟ್‌ ಪಡೆದ ವೇಗಿ ರೋನಿತ್‌ ಮೋರೆ, ತಮಿಳುನಾಡಿಗೆ ಶಾಕ್‌ ನೀಡಿದರು. ಶಾರೂಕ್‌ ಖಾನ್‌ (16) ನಿಶಾಂತ್‌ ಬೆನ್ನಿಗೆ ಪೆವಿಲಿಯನ್‌ ಸೇರಿದರು. ನಾಯಕ ದಿನೇಶ್‌ ಕಾರ್ತಿಕ್‌ (20), ವಾಷಿಂಗ್ಟನ್‌ ಸುಂದರ್‌ (24), ಕ್ರಮವಾಗಿ 9 ಹಾಗೂ 10ನೇ ಓವರ್‌ನಲ್ಲಿ ವಿಕೆಟ್‌ ಕೈ ಚೆಲ್ಲಿದರು.

ಅಶ್ವಿನ್‌ ಸ್ಪಿನ್‌ ಮೋಡಿ:
ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಕರ್ನಾಟಕ ದೊಡ್ಡ ಮೊತ್ತ ಪೇರಿಸುವ ಉತ್ಸಾಹದಲ್ಲಿತ್ತು. ಆದರೆ ಉತ್ತಮ ಆರಂಭ ದೊರೆಯಲಿಲ್ಲ. ಕೆ.ಎಲ್‌. ರಾಹುಲ್‌, ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರ 5ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. 2ನೇ ಎಸೆತವನ್ನು ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಚೆಲ್ಲಿದರು. 15 ಎಸೆತಗಳಲ್ಲಿ 22 ರನ್‌ಗಳಿಸಿ ರಾಹುಲ್‌ ಔಟಾದರು. ನಂತರದ ಎಸೆತದಲ್ಲಿ ಮಯಾಂಕ್‌ ಅಗರ್‌ವಾಲ್‌ (0) ಶೂನ್ಯಕ್ಕೆ ನಿರ್ಗಮಿಸಿದ್ದು ತಂಡದ ಮೇಲೆ ಹೆಚ್ಚಿನ ಹೊರೆ ಬಿದ್ದಿತು. ಕೇವಲ 39ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತು.

ಮನೀಶ್‌ ಆಸರೆ:
3ನೇ ವಿಕೆಟ್‌ಗೆ ಜೊತೆಯಾದ ನಾಯಕ ಮನೀಶ್‌ ಹಾಗೂ ದೇವದತ್‌ 48 ರನ್‌ಗಳನ್ನು ಸೇರಿಸಿ ಚೇತರಿಕೆ ನೀಡಿದರು. ದೇವದತ್‌ (32) ವಾಷಿಂಗ್ಟನ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಈ ಟೂರ್ನಿಯ 12 ಪಂದ್ಯಗಳಲ್ಲಿ ದೇವದತ್‌ 580 ರನ್‌ಗಳಿಸಿದರು. ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ದೇವದತ್‌ ಮೊದಲಿಗರಾಗಿದ್ದಾರೆ. 4ನೇ ವಿಕೆಟ್‌ಗೆ ರೋಹನ್‌ ಕದಂ ಜೊತೆಯಾದ ಮನೀಶ್‌ ಪಾಂಡೆ ತಂಡದ ಮೊತ್ತ ಹೆಚ್ಚಿಸುತ್ತಾ ಸಾಗಿದರು. ರೋಹನ್‌ ಜೊತೆ ಮನೀಶ್‌ 67 ರನ್‌ಗಳನ್ನು ಸೇರಿಸಿದ್ದರಿಂದ ಕರ್ನಾಟಕ 150ರ ಗಡಿ ದಾಟಿತು. ರೋಹನ್‌ 28 ಎಸೆತಗಳಲ್ಲಿ 5 ಬೌಂಡರಿ ಸಹಿತ 35 ರನ್‌ಗಳಿಸಿ ಔಟಾದರು. ಕರುಣ್‌ ನಾಯರ್‌ 8 ಎಸೆತ 17 ರನ್‌ಗಳಿಸಿ ಇನ್ನಿಂಗ್ಸ್‌ನ ಕೊನೆ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಮನೀಶ್‌ ಪಾಂಡೆ 45 ಎಸೆತಗಳಲ್ಲಿ 60 ರನ್‌ಗಳಿಸಿ ಅಜೇಯರಾಗುಳಿದರು. ತಮಿಳುನಾಡು ಪರ ಆರ್‌ ಅಶ್ವಿನ್‌, ಎಂ. ಅಶ್ವಿನ್‌ ತಲಾ 2 ವಿಕೆಟ್‌ ಪಡೆದರು.

ಸ್ಕೋರ್‌: ಕರ್ನಾಟಕ 180/5 (ಮನೀಶ್‌ ಪಾಂಡೆ 60*, ದೇವದತ್‌ 32, ಅಶ್ವಿನ್‌ 2-34)
ತಮಿಳುನಾಡು .../. (ವಿಜಯ್‌ ಶಂಕರ್‌ .., ಬಾಬಾ ಅಪರಾಜಿತ್‌ .., ಗೌತಮ್‌ 1-20)
 

Follow Us:
Download App:
  • android
  • ios