ರಶೀದ್ ಖಾನ್ ಹಾಗೂ ರಾಹುಲ್ ಟಿವಾಟಿಯಾ ಸ್ಫೋಟಕ ಬ್ಯಾಟಿಂಗ್‌ನಿಂದ ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಗುರಿಯಾಗಿದೆ. ಅಂತಿಮ ಎರಡು ಓವರ್‌ನಲ್ಲಿ ಪಂದ್ಯದ ಚಿತ್ರಣ ಬದಲಾಗಿತ್ತು. 

ಅಹಮ್ಮದಾಬಾದ್(ಮಾ.31): ಒಮ್ಮೆ ಸಿಎಸ್‌ಕೆ, ಮತ್ತೊಮ್ಮೆ ಗುಜರಾತ್ ಟೈಟಾನ್ಸ್. ಹೀಗೆ ಪಂದ್ಯ ಕ್ಷಣಕ್ಷಣಕ್ಕೂ ಒಂದೊಂದು ಕಡೆ ವಾಲುತ್ತಿತ್ತು. ಕೊನೆಯ ಓವರ್ ವರೆಗೆ ಪಂದ್ಯದ ಗೆಲುವು ಯಾರಿಗೆ ಅನ್ನೋ ಕುತೂಹಲ ಹಾಗೇ ಉಳಿದಿತ್ತು. ಅಂತಿಮ ಎರಡು ಓವರ್‌ನಲ್ಲಿ ಗುಜರಾತ್ ಗೆಲುವಿಗೆ 23 ರನ್ ಅವಶ್ಯಕತೆ ಇತ್ತು. ಆದರೆ ರಶೀದ್ ಖಾನ್ ಬೌಂಡರಿ ಸಿಕ್ಸರ್ ಮೂಲಕ ಪಂದ್ಯದ ಗತಿ ಬದಲಿಸಿದರು. ಅಂತಿಮ ಓವರ್‌ನಲ್ಲಿ ರಾಹುಲ್ ಟಿವಾಟಿಯಾ ಅಬ್ಬರದಿಂದ ಗುಜರಾತ್ ಟೈಟಾನ್ಸ್ 4 ಎಸೆತ ಬಾಕಿ ಇರುವಂತೆ 5 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ ಗುಜರಾತ್ ಟೈಟಾನ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನೊಂದಿಗೆ 2023ರ ಐಪಿಎಲ್ ಟೂರ್ನಿ ಆರಂಭಿಸಿದೆ.

Add Asianetnews Kannada as a Preferred SourcegooglePreferred

ಐಪಿಎಲ್ 2023 ಟೂರ್ನಿಯ ಮೊದಲ ಪಂದ್ಯವೇ ರೋಚಕ ಘಟ್ಟ ತಲುಪಿತ್ತು.179 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಿತು. ಆದರೆ ವೃದ್ದಿಮಾನ್ ಸಾಹ ಹಾಗೂ ಶುಭಮನ್ ಗಿಲ್ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಸಾಹ 25 ರನ್ ಸಿಡಿಸಿ ನಿರ್ಗಮಿಸಿದರು. ಗುಜರಾತ್ ಟೈಟಾನ್ಸ್ 37 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೊತೆಯಾಟದಿಂದ ಮತ್ತೆ ಗುಜರಾತ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ಸಾಯಿ ಸುದರ್ಶನ್ 17 ಎಸೆತದಲ್ಲಿ 22 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಅಬ್ಬರಿಸಲಿಲ್ಲ. ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ದಿಟ್ಟ ಹೋರಾಟ ನಡೆಸಿದ ಶುಭಮನ್ ಗಿಲ್ 63 ರನ್ ಸಿಡಿಸಿ ಔಟದರು. ಗಿಲ್ 36 ಎಸೆತದಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 63 ರನ್ ಸಿಡಿಸಿದರು.

ವಿಜಯ್ ಶಂಕರ್ ಹಾಗೂ ರಾಹುಲ್ ಟಿವಾಟಿಯಾ ಜೊತೆಯಾಟ ಗುಜರಾತ್ ಟೈಟಾನ್ಸ್ ತಂಡದ ಗೆಲುವಿನ ಆಸೆಗೆ ಪುಷ್ಠಿ ನೀಡಿತು. ಆದರೆ ವಿಜಯ್ ಶಂಕರ್ 21 ಎಸೆತದಲ್ಲಿ 27 ರನ್ ಸಿಡಿಸಿ ನಿರ್ಗಮಿಸಿದರು. ಗುಜರಾತ್ ಟೈಟಾನ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 23 ರನ್ ಅವಶ್ಯಕತೆ ಇತ್ತು. ಅಖಾಡಕ್ಕಿಳಿದ ಸ್ಪಿನ್ನರ್ ರಶೀದ್ ಖಾನ್ ಭರ್ಜರಿ ಸಿಕ್ಸರ್ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಮೇಲಿನ ಒತ್ತಡ ಕಡಿಮೆ ಮಾಡಿದರು. ಮರು ಎಸೆತದಲ್ಲಿ ಬೌಂಡರಿ ಸಿಡಿಸಿದರು.

ಅಂತಿಮ 6 ಎಸೆತದಲ್ಲಿ ಗುಜರಾತ್ 8 ರನ್‌ಗಾಗಿ ಸಜ್ಜಾಯಿತು. ಕಟ್ಟಿಹಾಕಲು ಚೆನ್ನೈ ತಂಡ ತುಷಾರ್ ದೆೇಶಪಾಂಡೆಗೆ ಬಾಲ್ ನೀಡಿತು. ಆದರೆ ರಾಹುಲ್ ಟಿವಾಟಿಯಾ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಇನ್ನೂ 4 ಎಸೆತ ಬಾಕಿ ಇರುವಂತೆ ಗುಜರಾತ್ ಟೈಟಾನ್ಸ್ ತಂಡಕ್ಕೆ 5 ವಿಕೆಟ್ ಗೆಲುವು ತಂದುಕೊಟ್ಟರು. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಶುಭಾರಂಭ ಮಾಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಕಹಿ ಅನುಭವಿಸಿತು. 

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಸಿಎಸ್‌ಕೆ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಈ ಮೊತ್ತಕ್ಕೆ ಕಾರಣ ರುತುರಾಜ್ ಗಾಯಕ್ವಾಡ್. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ರುತುರಾಜ್ ದಿಟ್ಟ ಹೋರಾಟ ನೀಡಿದರು. ಕೇವಲ 50 ಎಸೆತದಲ್ಲಿ 92 ರನ್ ಸಿಡಿಸಿದರು. 8 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. ರುತುರಾಜ್ ಗಾಯಕ್ವಾಡ್ ಅಬ್ಬರಿಸಿದರೆ ಇತರರಿಂದ ನಿರೀಕ್ಷಿತ ಹೋರಾಟ ಮೂಡಿ ಬರಲಿಲ್ಲ. ಅಂತಿಮ ಹಂತದಲ್ಲಿ ಎಂ.ಎಸ್.ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು.

ಡೆವೋನ್ ಕಾನ್ವೋಯ್ 1 ರನ್, ಮೊಯಿನ್ ಆಲಿ 23 ರನ್, ಬೆನ್ ಸ್ಟೋಕ್ಸ್ 7, ಅಂಬಟಿ ರಾಯುಡು 12 ರನ್, ಶಿವಂ ದುಬೆ 12 ರನ್, ರವೀಂದ್ರ ಜಡೇಜಾ 1 ರನ್ ಸಿಡಿಸಿ ಔಟಾದರು. ಇತ್ತ ಎಂ.ಎಸ್.ಧೋನಿ 7 ಎಸೆತದಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಸಿಡಿಸಿದರು. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 178ರನ್ ಸಿಡಿಸಿತು.