* ಪಂಜಾಬ್‌ ಕಿಂಗ್ಸ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ* 4 ವಿಕೆಟ್ ಕಬಳಿಸಿ ಮಿಂಚಿದ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್* ವಿಶೇಷ ವ್ಯಕ್ತಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಸಿರಾಜ್

ಮೊಹಾಲಿ(ಏ.21): ಪಂಜಾಬ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 24 ರನ್ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಇನ್ನು ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್‌, ಪಂಜಾಬ್‌ ಕಿಂಗ್ಸ್ ತಂಡದ ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಸಿರಾಜ್, ಈ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಕೊನೆಯುಸಿರೆಳೆದ ಹೈದರಾಬಾದ್ ಕ್ರಿಕೆಟಿಗ ಅಬ್ದುಲ್‌ ಅಝೀಂಗೆ ಅರ್ಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಇಲ್ಲಿನ ಐಎಸ್‌ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸುವ ಮೂಲಕ ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಅಥರ್ವ ಟೈಡೆ ಹಾಗೂ ಆ ಬಳಿಕ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಡೆತ್ ಓವರ್‌ನಲ್ಲಿ ಮಹತ್ವದ ಘಟ್ಟದಲ್ಲಿ ನೇಥನ್ ಎಲ್ಲೀಸ್‌ ಹಾಗೂ ಹಪ್ರೀತ್ ಬ್ರಾರ್‌ ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು.

29 ವರ್ಷದ ಮೊಹಮ್ಮದ್ ಸಿರಾಜ್, ಪಂಜಾಬ್ ಕಿಂಗ್ಸ್ ಎದುರು 4 ಓವರ್ ಬೌಲಿಂಗ್ ಮಾಡಿ ಕೇವಲ 21 ರನ್ ನೀಡಿ 4 ವಿಕೆಟ್‌ ಕಬಳಿಸಿದರು. ಈ ಮೂಲಕ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 12 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಈ ಪ್ರಶಸ್ತಿಯನ್ನು ಅಬ್ದುಲ್‌ ಅಝೀಂ ಗೆ ಅರ್ಪಿಸಿದ್ದಾರೆ.

IPL 2023 ಸಿರಾಜ್ ಬೆಂಕಿ ಬೌಲಿಂಗ್‌, ಪಂಜಾಬ್‌ ಬಗ್ಗುಬಡಿದ ಆರ್‌ಸಿಬಿ..!

" ಪ್ರೀತಿಯ ಅಝೀಂ ಸರ್, ನೀವು ನನಗೆ ಹಾಗೂ ನನ್ನಂಥವರಿಗೆ ನೀವು ಏನೆಲ್ಲಾ ಮಾಡಿದ್ದೀರೋ ಆ ಬಗ್ಗೆ ನಿಮ್ಮನ್ನು ಯಾವಾಗಲೂ ಗೌರವದಿಂದ ಕಾಣುತ್ತೇನೆ. ನೀವೊಬ್ಬ ಕರುಣಾಮಯಿ ಹಾಗೂ ಸದಾ ನೆರವಿಗೆ ನಿಲ್ಲುತ್ತಿದ್ದ ವ್ಯಕ್ತಿಯಾಗಿದ್ರಿ. ನೀವು ನನಗೆ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ. ಕೊನೆಯ ಬಾರಿಗೆ ನಿಮ್ಮನ್ನು ಭೇಟಿಯಾಗಬೇಕಿತ್ತು. ಆದರೆ ಅದು ಸಾಧ್ಯವಿಲ್ಲವೀಗ. ನನಗೆ ಸಿಕ್ಕ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಿಮಗೆ ಅರ್ಪಿಸುತ್ತೇನೆ ಎಂದು ಹೈದರಾಬಾದ್ ಮೂಲದ ಆರ್‌ಸಿಬಿ ವೇಗಿ ಸಿರಾಜ್ ತಿಳಿಸಿದ್ದಾರೆ.

Scroll to load tweet…

ಅಬ್ದುಲ್ ಅಝೀ, ದೇಶಿ ಕ್ರಿಕೆಟ್‌ನಲ್ಲಿ ಹೈದರಾಬಾದ್‌ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಸಾಕಷ್ಟು ಸಮಯದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಅವರು ಇತ್ತೀಚೆಗಷ್ಟೇ ಕೊನೆಯುಸಿರೆಳೆದಿದ್ದರು. ಅಬ್ದುಲ್ ಅಝೀಂ 1980ರಿಂದ 1995ರ ಅವಧಿಯಲ್ಲಿ 73 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 12 ಶತಕ ಹಾಗೂ 18 ಅರ್ಧಶತಕ ಸಿಡಿಸಿ ಮಿಂಚಿದ್ದರು.

2021ರ ಬಳಿಕ ಆರ್‌ಸಿಬಿ ಮುನ್ನಡೆಸಿದ ಕೊಹ್ಲಿ!

2021ರಲ್ಲಿ ಆರ್‌​ಸಿಬಿ ನಾಯ​ಕತ್ವ ತ್ಯಜಿ​ಸಿದ್ದ ವಿರಾಟ್‌ ಕೊಹ್ಲಿ ಗುರು​ವಾ​ರದ ಪಂದ್ಯ​ದಲ್ಲಿ ಮತ್ತೆ ತಂಡ​ದ ನಾಯ​ಕತ್ವ ವಹಿ​ಸಿ​ದರು. ಕಾಯಂ ನಾಯಕ ಡು ಪ್ಲೆಸಿ ಸಿಎಸ್‌ಕೆ ಪಂದ್ಯದ ವೇಳೆ ಪಕ್ಕೆಲುಬಿನ ನೋವಿಗೆ ತುತ್ತಾಗಿದ್ದರಿಂದ ಈ ಪಂದ್ಯದಲ್ಲಿ ಕೊಹ್ಲಿ ತಂಡ ಮುನ್ನ​ಡೆ​ಸಿ​ದರು. 2013ರಲ್ಲಿ ತಂಡದ ನಾಯ​ಕ​ರಾಗಿ ನೇಮಕಗೊಂಡಿದ್ದ ಕೊಹ್ಲಿ 2021ರ ವ​ರೆಗೂ ತಂಡಕ್ಕೆ ನಾಯ​ಕತ್ವ ವಹಿ​ಸಿ​ದ್ದರು.