ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿ ವಿಕೆಟ್‌ಗೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಇದರ ನಡುವೆ ತಿಲಕ್ ವರ್ಮಾ ದಿಟ್ಟ ಹೋರಾಟ ಮುಂಬೈ ಕೈಹಿಡಿದಿದೆ.ಹೀಗಾಗಿ ಬೆಂಗಳೂರು ತಂಡ 172 ರನ್ ಟಾರ್ಗೆಟ್ ಪಡೆದಿದೆ.

ಬೆಂಗಳೂರು(ಏ.02): ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯಕ್ಕೆ ಅಭಿಮಾನಿಗಳ ಸಂಭ್ರಮ, ಚಪ್ಪಾಳೆ, ಶಿಳ್ಳೆ ಮತ್ತಷ್ಟು ಮೆರೆಗು ನೀಡಿದೆ. ಆರ್‌ಸಿಬಿ ಆಕ್ರಮಣಕಾರಿ ಬೌಲಿಂಗ್ ದಾಳಿಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಬ್ಬರಿಸಲು ಅವಾಕಾಶ ಸಿಗಲಿಲ್ಲ. ತಿಲಕ ವರ್ಮಾ ಹೊರತುಪಡಿಸಿದರೆ ಇತರರ ಬ್ಯಾಟ್ಸ್‌ಮನ್‌ಗಳಿಂದ ನೆರವು ಸಿಗಲಿಲ್ಲ. ತಿಲಕ್ ಏಕಾಂಗಿ ಹೋರಾಟದ ಪರಿಣಾಮ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗಾಗಿ 172 ರನ್ ಟಾರ್ಗೆಟ್ ಪಡೆದಿದೆ.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಆರಂಭಿಸಿದ ಬೆನ್ನಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 10 ರನ್ ಸಿಡಿಸಿ ಔಟಾದರು. ಇತ್ತ ಕ್ಯಾಮರೂನ್ ಗ್ರೀನ್ 5 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ನಾಯಕ 10 ಎಸೆತ ಎದುರಿಸಿ ಕೇವಲ 1 ರನ್ ಸಿಡಿಸಿ ಔಟಾದರು. ರೋಹಿತ್ ವಿಕೆಟ್ ಪತನ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಯಿತು. ಆದರೆ ಸೂರ್ಯಕುಮಾರ್ ಯಾದವ್ 15 ರನ್ ಸಿಡಿಸಿ ಔಟಾದರು. ಆದರೆ ತಿಲಕ್ ವರ್ಮಾ ಏಕಾಂಗಿ ಹೋರಾಟ ನೀಡಿದರು. ಇತ್ತ ನೆಹಾಲ್ ವಧೇರಾ ಜೊತೆ ಸೇರಿದ ತಿಲಕ್ ವರ್ಮಾ ತಂಡಕ್ಕೆ ಚೇತರಿಕೆ ನೀಡಿದರು. ನೆಹಾಲ್ ವಧೇರಾ 21 ರನ್ ಸಿಡಿಸಿ ಔಟಾದರು.

ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು.ಇತ್ತ ಟಿಮ್ ಡೇವಿಡ್ ಕೇವಲ 4 ರನ್ ಸಿಡಿಸಿ ಔಟಾದರು.ಹೃತಿಕ್ ಶೋಕಿನ್ 5 ರನ್ ಸಿಡಿಸಿ ನಿರ್ಗಮಿಸಿದರು.ಆದರೆ ತಿಲಕ್ ವರ್ಮಾ ಮುಂಬೈ ತಂಡದ ಕೈಹಿಡಿದರು. ಆರ್‌ಸಿಬಿ ಉತ್ತಮ ದಾಳಿ ಸಂಘಟಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ ತಿಲಕ್ ವರ್ಮಾ ಬ್ಯಾಟಿಂಗ್ ಪ್ರದರ್ಶನ ಲೆಕ್ಕಾಚಾರ ಬುಡಮೇಲು ಮಾಡಿತು.

ಅಂತಿಮ ಹಂತದಲ್ಲಿ ಅರ್ಶದ್ ಖಾನ್ ಉತ್ತಮ ಸಾಥ್ ನೀಡಿದರು. ಇತ್ತ ತಿಲಕ್ ವರ್ಮಾ 46 ಎಸೆತದಲ್ಲಿ ಅಜೇಯ 84 ರನ್ ಸಿಡಿಸಿದರೆ. ಅರ್ಶದ್ ಖಾನ್ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿತು.