IPL 2021: ಕಾರ್ತಿಕ್ ತ್ಯಾಗಿ ಬೌಲಿಂಗ್ ಕೊಂಡಾಡಿದ ಜಸ್ಪ್ರೀತ್ ಬುಮ್ರಾ
* ಪಂಜಾಬ್ ಕಿಂಗ್ಸ್ ಎದುರು ಮಿಂಚಿನ ಪ್ರದರ್ಶನ ತೋರಿದ ಕಾರ್ತಿಕ್ ತ್ಯಾಗಿ
* ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಹೀರೋ ತ್ಯಾಗಿ
* ತ್ಯಾಗಿ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಸ್ಪ್ರೀತ್ ಬುಮ್ರಾ
ದುಬೈ(ಸೆ.22): 14ನೇ ಆವೃತ್ತಿಯ ಐಪಿಎಲ್(IPL) ಟೂರ್ನಿಯ 32ನೇ ಪಂದ್ಯವು ಅತ್ಯಂತ ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ರಾಜಸ್ಥಾನ ರಾಯಲ್ಸ್ ವೇಗಿ ಕಾರ್ತಿಕ್ ತ್ಯಾಗಿ(Kartik Tyagi) ಪಂಜಾಬ್ ಕಿಂಗ್ಸ್ ತಂಡದ ಕೈನಲ್ಲಿದ್ದ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಯುವ ವೇಗಿ ಕಾರ್ತಿಕ್ ತ್ಯಾಗಿ ಒತ್ತಡದ ಪರಿಸ್ಥಿತಿಯಲ್ಲೂ ಮಿಂಚಿನ ದಾಳಿ ನಡೆಸಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ
ಕೊನೆಯ ಓವರ್ನಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡ ಗೆಲ್ಲಲು ಕೇವಲ ನಾಲ್ಕು ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿ ಸ್ಪೋಟಕ ಬ್ಯಾಟ್ಸ್ಮನ್ಗಳಾದ ನಿಕೋಲಸ್ ಪೂರನ್(Nicholas Pooran) ಹಾಗೂ ಏಯ್ಡನ್ ಮಾರ್ಕ್ರಮ್ ಭದ್ರವಾಗಿ ನೆಲೆಯೂರಿದ್ದರು. ಹೀಗಿದ್ದೂ ಕೊನೆಯ ಓವರ್ನಲ್ಲಿ ಕೇವಲ ಒಂದು ರನ್ ನೀಡಿ 2 ಬಲಿ ಪಡೆಯುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ 2 ರನ್ಗಳ ರೋಚಕ ಗೆಲುವು ತಂದುಕೊಟ್ಟರು.
IPL 2021:ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲಿದ ಪಂಜಾಬ್, ರಾಜಸ್ಥಾನಕ್ಕೆ 2 ರನ್ ರೋಚಕ ಗೆಲುವು!
ಕಾರ್ತಿಕ್ ತ್ಯಾಗಿ ಪ್ರದರ್ಶನಕ್ಕೆ ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ(Jasprit Bumrah) ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂಥಹ ಅದ್ಭುತ ಓವರ್..! ಈ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆಗೆಡದೇ ತಮ್ಮ ಕೆಲಸವನ್ನು ಕಾರ್ತಿಕ್ ತ್ಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದ್ಬುತ ಪ್ರದರ್ಶನ, ನಿಜಕ್ಕೂ ಇಷ್ಟವಾಯ್ತು ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
ಬುಮ್ರಾ ಟ್ವೀಟ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ರಾಯಲ್ಸ್(Rajasthan Royals) ವೇಗಿ ಕಾರ್ತಿಕ್ ತ್ಯಾಗಿ, ನನ್ನ ಹೀರೋ ಅವರಿಂದ ಇಂತಹ ಮೆಚ್ಚುಗೆ ವ್ಯಕ್ತವಾಗಿದ್ದು ನಿಜಕ್ಕೂ ಖುಷಿ ಎನಿಸುತ್ತಿದೆ ಎಂದು ತ್ಯಾಗಿ ಟ್ವೀಟ್ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 185 ರನ್ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಈ ಗುರಿಬೆನ್ನತ್ತಿದ ಪಂಜಾಬ್ ತಂಡವು ಕೊನೆಯ ಕ್ಷಣದಲ್ಲಿ ಮುಗ್ಗರಿಸುವ ನಿರಾಸೆ ಅನುಭವಿಸಿದೆ.