IPL 2021: ಮಂಕಡಿಂಗ್ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್..!
ಬೌಲರ್ಗಳು ಒಂದಿಂಚು ಹೊರಗೆ ಕಾಲಿಟ್ಟರೆ ನೋ ಬಾಲ್ ನೀಡಲಾಗುತ್ತದೆ, ಆದರೆ ಬ್ಯಾಟ್ಸ್ಮನ್ಗಳನ್ನು ಮಂಕಂಡಿಗ್ ಮಾಡಿದರೆ ಕ್ರೀಡಾಸ್ಪೂರ್ತಿ ಉಲ್ಲಂಘಿಸಿದಂತೆ ಎನ್ನುವ ಮಾತು ಹಾಸ್ಯಾಸ್ಪದ ಎಂದು ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.21): 2018ರಲ್ಲಿ ನಡೆದ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿದ್ದ ರವಿಚಂದ್ರನ್ ಅಶ್ವಿನ್, ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್ಮನ್ ಜೋಸ್ ಬಟ್ಲರ್ರನ್ನು ಮಂಕಡಿಂಗ್ ರನೌಟ್ ಮಾಡಿದ್ದರು. ಈ ಕುರಿತಂತೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದವು.
ಇದೀಗ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಮಂಕಡಿಂಗ್ ಯಾಕೆ ಮಾಡಬಾರದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಬೌಲರ್ ಕ್ರೀಸ್ನಿಂದ ಒಂದು ಇಂಚು ಹೊರಗೆ ಕಾಲಿಟ್ಟರೂ ನೋಬಾಲ್ ನೀಡಲಾಗುತ್ತದೆ, ಆದರೆ ಬ್ಯಾಟ್ಸ್ಮನ್ ಬೌಲರ್ ಬೌಲ್ ಮಾಡುವ ಮೊದಲೇ ಕ್ರೀಸ್ ಬಿಟ್ಟು ಮುಂದೆ ಹೋಗಬಹುದು. ಬೌಲಿಂಗ್ ಮಾಡುವ ಮುನ್ನವೇ ಬ್ಯಾಟ್ಸ್ಮನ್ ತೊರೆದರೆ ರನೌಟ್ ಮಾಡುವ ಎಲ್ಲಾ ಹಕ್ಕು ಬೌಲರ್ಗಿದೆ. ಹೀಗೆ ರನೌಟ್ ಮಾಡುವುದು ಕ್ರೀಡಾಸ್ಪೂರ್ತಿಗೆ ವಿರುದ್ದವಾದದ್ದು ಎನ್ನುವ ಮಾತು ಹಾಸ್ಯಾಸ್ಪದ ಎಂದು ಟೀಂ ಇಂಡಿಯಾ ಮಾಜಿ ವೇಗಿ, ಹೆಮ್ಮೆಯ ಕನ್ನಡಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಐಪಿಎಲ್ 2021: ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ದಾಖಲೆ ಬರೆದ ಮಿಶ್ರಾ
ಸೋಮವಾರ ನಡೆದ ಐಪಿಎಲ್ ಪಂದ್ಯದ ವೇಳೆ ನಾನ್ ಸ್ಟ್ರೈಕರ್ ಬದಿಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ನ ಡ್ವೇನ್ ಬ್ರಾವೋ, ಬೌಲರ್ ಮುಸ್ತಾಫಿಜುರ್ ರಹಮಾನ್ ಬೌಲ್ ಮಾಡುವ ಮೊದಲೇ ಕ್ರೀಸ್ ಬಿಟ್ಟು ಬಹಳ ಮುಂದೆ ಬಂದಿದ್ದರು. ಈ ಸನ್ನಿವೇಶದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಮಂಕಡಿಂಗ್ ರನೌಟ್ನ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನಾನ್ ಸ್ಟ್ರೈಕರ್ಗಳಿಗೆ ಅನಗತ್ಯ ಲಾಭ ತಪ್ಪಿಸಲು ಐಸಿಸಿಯಿಂದ ನಿಯಮಕ್ಕೆ ತಿದ್ದುಪಡಿ ತರಲು ಅಭಿಮಾನಿಗಳು, ಕ್ರಿಕೆಟ್ ತಜ್ಞರು ಆಗ್ರಹಿಸುತ್ತಿದ್ದಾರೆ.