ಐಪಿಎಲ್ 2021: ಮತ್ತೆ ಮುನ್ನೆಲೆಗೆ ಬಂದ ಮಂಕಡ್ ರನೌಟ್..!
ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಧವಳ್ ಕುಲಕರ್ಣಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಉಲ್ಲಂಘಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಮೇ.02): 2019ರಲ್ಲಿ ರವಿಚಂದ್ರನ್ ಅಶ್ವಿನ್ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ರನ್ನು ಮಂಕಡಿಂಗ್ ರನೌಟ್ ಮಾಡಿದಾಗ ಸಾಕಷ್ಟು ಪರ-ವಿರೋಧದ ಚರ್ಚೆಗಳಾಗಿದ್ದವು. ಇದಾದ ಬಳಿಕವೂ ಹಲವು ಬಾರಿ ನಾನ್ ಸ್ಟ್ರೈಕರ್ನಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ ತೊರೆದು ರನ್ ಓಡುತ್ತಿರುವ ಘಟನೆಗಳಿಗೆ ಐಪಿಎಲ್ ಸಾಕ್ಷಿಯಾಗಿದೆ.
ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಯೂ ಮಂಕಡಿಂಗ್ ಯಾಕೆ ಮಾಡಬಾರದು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಕಾರಣ ಚೆನ್ನೆ ಎದುರು ಮುಂಬೈ ಇಂಡಿಯನ್ಸ್ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ಗಳ ಅವಶ್ಯಕತೆ ಇತ್ತು. ಲುಂಗಿ ಎಂಗಿಡಿ ಬೌಲಿಂಗ್ ಎದುರಿಸಲು ಕೀರನ್ ಪೊಲ್ಲಾರ್ಡ್ ಸಿದ್ದವಾಗಿದ್ದರೆ, ಧವಳ್ ಕುಲಕರ್ಣಿ ನಾನ್ ಸ್ಟ್ರೈಕರ್ನಲ್ಲಿದ್ದರು. ಪೊಲ್ಲಾರ್ಡ್ ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆ ಬಾರಿಸಿದರು. ಸ್ವತಃ ಪೊಲ್ಲಾರ್ಡ್ 2 ರನ್ ಓಡಲು ಕಷ್ಟಪಟ್ಟರೆ ನಾನ್ ಸ್ಟ್ರೈಕರ್ನಲ್ಲಿದ್ದ ಧವಳ್ ಕುಲಕರ್ಣಿ ಡೇಂಜರ್ ಎಂಡ್ನಲ್ಲಿದ್ದರೂ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ತೊರೆದಿದ್ದರಿಂದ ಅನಾಯಾಸವಾಗಿ ಎರಡು ರನ್ ಪೂರೈಸುವ ಮೂಲಕ ಮುಂಬೈ ಇಂಡಿಯನ್ಸ್ ರೋಚಕ ಗೆಲುವು ಸಾಧಿಸಲು ಸಾಧ್ಯವಾಯಿತು.
ಪೋಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್; ಮುಂಬೈಗೆ 4 ವಿಕೆಟ್ ರೋಚಕ ಗೆಲುವು
ಈ ಬಗ್ಗೆ ತುಟಿಬಿಚ್ಚಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್, ಕಳೆದ ರಾತ್ರಿ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ಗಳ ಅವಶ್ಯಕತೆಯಿತ್ತು. ಆದರೆ ನಾನ್ ಸ್ಟ್ರೈಕ್ನಲ್ಲಿದ್ದಾತ ಅಡ್ವಂಟೇಜ್ ಪಡೆದುಕೊಂಡರು. ಇದೇನಾ ಕ್ರೀಡಾ ಸ್ಪೂರ್ತಿ ಎಂದರೆ ಎಂದು ಪ್ರಶ್ನಿಸಿದ್ದಾರೆ.
ಫಲಿತಾಂಶ ನಿರ್ಧಾರವಾಗುವ ಈ ರೀತಿಯ ಕೊನೆಯ ಎಸೆತದಲ್ಲಿ ಬ್ಯಾಟ್ಸ್ಮನ್ ಅಡ್ವಂಟೇಜ್ ಪಡೆಯುವುದು ಕ್ರೀಡಾ ಸ್ಪೂರ್ತಿ ಉಲ್ಲಂಘಿಸಿದಂತೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಬೌಲರ್ ಒಂದಿಂಚು ಕಾಲು ಮುಂದೆ ಹಾಕಿದರೆ ಅಂಪೈರ್ ನೋ ಬಾಲ್ ನೀಡುತ್ತಾರೆ. ಆದರೆ ಬ್ಯಾಟ್ಸ್ಮನ್ ಈ ರೀತಿ ಅಡ್ವಂಟೇಜ್ ಪಡೆಯುವ ಬಗ್ಗೆ ನಿಯಮ ರೂಪಿಸಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.