'ಇದು ನಮ್ಮ ಪ್ಲಾನ್ ಆಗಿತ್ತು': ಚಾರ್ಲಿ ಡೀನ್ ರನೌಟ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ದೀಪ್ತಿ ಶರ್ಮಾ..!
ಇಂಗ್ಲೆಂಡ್ ಎದುರು ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗಿದ ಹರ್ಮನ್ಪ್ರೀತ್ ಕೌರ್ ಪಡೆ
ಚರ್ಚೆಗೆ ಗ್ರಾಸವಾದ ಇಂಗ್ಲೆಂಡ್ ಆಟಗಾರ್ತಿ ಚಾರ್ಲಿ ಡೀನ್ ರನೌಟ್
ರನೌಟ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ದೀಪ್ತಿ ಶರ್ಮಾ
ಲಂಡನ್(ಸೆ.26): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 16 ರನ್ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಮಾಡಿದ ರನೌಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಮೊದಲ ಬಾರಿಗೆ ದೀಪ್ತಿ ಶರ್ಮಾ ತುಟಿ ಬಿಚ್ಚಿದ್ದಾರೆ.
ದೀಪ್ತಿ ಶರ್ಮಾ ಮಾಡಿದ ಈ ರನೌಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಇದೀಗ ಈ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ದೀಪ್ತಿ ಶರ್ಮಾ, ಇದು ನಮ್ಮ ಪ್ಲಾನ್ ಆಗಿತ್ತು. ಯಾಕೆಂದರೆ ಅವರು ಪದೇ ಪದೇ ಈ ರೀತಿ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರನ್ನು ನಾವು ಈ ವಿಚಾರವಾಗಿ ಎಚ್ಚರಿಸಿದ್ದೆವು. ಇದಾದ ನಂತರವಷ್ಟೇ ನಾವು ನಿಯಮಾನುಸಾರ ರನೌಟ್ ಮಾಡಿದೆವು ಎಂದು ದೀಪ್ತಿ ಶರ್ಮಾ ಹೇಳಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?: ಶನಿವಾರ ನಡೆದ 3ನೇ ಪಂದ್ಯದಲ್ಲಿ 170 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 103 ರನ್ಗೆ 8 ವಿಕೆಟ್ ಕಳೆದುಕೊಂಡಿತ್ತು. 10ನೇ ವಿಕೆಟ್ಗೆ ಫ್ರೇಯಾ ಡೇವಿಸ್ ಜೊತೆ ಚಾರ್ಲಿ ಡೀನ್ 35 ರನ್ ಜೊತೆಯಾಟದಲ್ಲಿ ಭಾಗಿಯಾದರು. ಚಾರ್ಲಿ ಡೀನ್ ಹೋರಾಡಿ 47 ರನ್ ಗಳಿಸಿದರು. ಗೆಲುವಿನ ಹೊಸ್ತಿಲಲ್ಲಿದ್ದಾಗ ಚಾರ್ಲಿ ಡೀನ್ ರನೌಟ್ ಆದರು. ದೀಪ್ತಿ ಶರ್ಮಾ ಬೌಲಿಂಗ್ ಮಾಡುವ ಮುನ್ನವೇ ನಾನ್ ಸ್ಟ್ರೈಕರ್ನಲ್ಲಿದ್ದ ಚಾರ್ಲಿ ಡೀನ್ ಕ್ರೀಸ್ ತೊರೆದಿದ್ದರಿಂದ ನಿಯಮದನುಸಾರ ಔಟ್ ಮಾಡಿದರು. ಚಾರ್ಲಿ ಮೈದಾನದಲ್ಲೇ ಕಣ್ಣೀರಿಟ್ಟರು. ಬಳಿಕ ಭಾರತೀಯರ ಕ್ರೀಡಾ ಸ್ಫೂರ್ತಿಯನ್ನು ಇಂಗ್ಲೆಂಡ್ ತಂಡ ಪ್ರಶ್ನಿಸಿತು.
14 ಬಾರಿ ಕ್ರೀಸ್ ಬಿಟ್ಟಿದ್ದ ಚಾರ್ಲಿ!
ಚಾರ್ಲಿ ಡೀನ್ ತಮ್ಮ ಇನ್ನಿಂಗ್ಸ್ ವೇಳೆ ಪದೇ ಪದೇ ಬೌಲರ್ ಚೆಂಡು ಎಸೆಯುವ ಮೊದಲೇ ಕ್ರೀಸ್ ಬಿಟ್ಟು ಮುಂದೆ ಹೋಗುವ ಮೂಲಕ ಅನಗತ್ಯ ಲಾಭ ಪಡೆಯುತ್ತಿದ್ದರು. ಒಂದು ಅಂದಾಜಿನ ಪ್ರಕಾರ 14 ಬಾರಿ ಡೀನ್ ಈ ರೀತಿ ಮಾಡಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ದೀಪ್ತಿ, ರನೌಟ್ ಬಲೆಗೆ ಕೆಡವಿ ಭಾರತವನ್ನು ಗೆಲ್ಲಿಸಿದರು.
ದೀಪ್ತಿ ಶರ್ಮಾ ರನೌಟ್ ಬಗ್ಗೆ ಕೇಳಿದ್ದಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಹರ್ಮನ್ಪ್ರೀತ್ ಕೌರ್..!
ದೀಪ್ತಿಗೆ ಹರ್ಮನ್ಪ್ರೀತ್ ಬೆಂಬಲ
ಚಾರ್ಲಿ ಡೀನ್ರನ್ನು ರನೌಟ್ ಮಾಡಿದ್ದನ್ನು ನಾಯಕಿ ಹರ್ಮನ್ಪ್ರೀತ್ ಕೌರ್ ಸಮರ್ಥಿಸಿಕೊಂಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ‘ನಾವು ನಿಯಮದ ಪ್ರಕಾರವೇ ಆಡಿದ್ದೇವೆ. ಯಾವುದೇ ತಪ್ಪು ಮಾಡಿಲ್ಲ’ ಎಂದರು. ನಿರೂಪಕಿ ದೀಪ್ತಿ ನಡೆ ಬಗ್ಗೆ ಪ್ರಶ್ನಿಸಿದಾಗ, ‘ಇದಕ್ಕೂ ಮೊದಲು 9 ವಿಕೆಟ್ಗಳನ್ನು ನಾವು ಕಬಳಿಸಿದ್ದೆವು. ಆ ಬಗ್ಗೆಯೂ ಮಾತನಾಡಿ. ನನ್ನ ಬೌಲರ್ ಮಾಡಿದ್ದು ಸರಿಯಿದೆ. ಮುಂದೆಯೂ ಆಟದಲ್ಲಿ ಇಂತಹ ಜಾಗೃತಿಯನ್ನು ನಾನು ಪ್ರೋತ್ಸಾಹಿಸಲಿದ್ದೇನೆ’ ಎಂದು ಉತ್ತರಿಸಿದರು.