ಟಿ20 ವಿಶ್ವಕಪ್‌ನ ಭಾರತ-ಯುಎಸ್‌ಎ ಪಂದ್ಯದಲ್ಲಿ, ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಜ್ವರದಿಂದ ಬುಮ್ರಾ ಹೊರಗುಳಿದಿದ್ದು, ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಮತ್ತು ಮೊಹಮ್ಮದ್ ಸಿರಾಜ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಭಾರತ ಹಾಗೂ ಯುನೇಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಯುಎಸ್‌ಎ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಭಾರತ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿವೆ.

ಭಾರತ-ಯುಎಸ್‌ಎ ನಡುವಿನ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಸ್ಟೇಡಿಯಂ ಆತಿಥ್ಯ ವಹಿಸಿದೆ. ಭಾರತ ಈ ಪಂದ್ಯವನ್ನು ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಇನ್ನೊಂದೆಡೆ ಬಹುತೇಕ ಭಾರತೀಯ ಮೂಲದ ಆಟಗಾರರನ್ನೇ ಒಳಗೊಂಡಿರುವ ಯುಎಸ್‌ಎ ತಂಡವು ಭಾರತಕ್ಕೆ ಶಾಕ್ ನೀಡಲು ಎದುರು ನೋಡುತ್ತಿದೆ.

ಭಾರತ ತಂಡದಲ್ಲಿ ಎರಡು ಮೇಜರ್ ಚೇಂಜ್:

ಹೌದು, ಯುಎಸ್‌ಎ ಎದುರಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಮೇಲ್ನೋಟಕ್ಕೆ ಎರಡು ಮಹತ್ವದ ಬದಲಾವಣೆಗಳಾಗಿವೆ. ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಘೋಷಿಸಿದಾಗ ಸಂಜು ಸ್ಯಾಮ್ಸನ್ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು. ಆದರೆ ಕಿವೀಸ್ ಎದುರಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗಿಂತ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ತೋರಿದ್ದರು. ಹೀಗಾಗಿ ಸಂಜು ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದಿದ್ದು, ಇಶಾನ್ ಕಿಶನ್ ತಂಡ ಕೂಡಿಕೊಂಡಿದ್ದಾರೆ.

ಇನ್ನು ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದು ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹರ್ಷಿತ್ ರಾಣಾ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರಿಂದ ಅವರ ಬದಲಿಗೆ ಡಿಎಸ್‌ಪಿ ಮೊಹಮ್ಮದ್ ಸಿರಾಜ್ ಭಾರತ ತಂಡವನ್ನು ಕೊನೆಯ ಕ್ಷಣದಲ್ಲಿ ಕೂಡಿಕೊಂಡಿದ್ದರು. ಇದೀಗ ಸಿರಾಜ್ ಡೈರೆಕ್ಟ್ ಆಡುವ ಹನ್ನೊಂದರ ಬಳಗಕ್ಕೆ ಎಂಟ್ರಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಸಿರಾಜ್ 2024ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಉಭಯ ತಂಡದ ಆಟಗಾರರ ಪಟ್ಟಿ ಹೀಗಿದೆ ನೋಡಿ:

ಭಾರತ: ಅಭಿಷೇಕ್‌ ಶರ್ಮಾ, ಇಶಾನ್ ಕಿಶನ್‌, ತಿಲಕ್‌ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್‌ ಪಟೇಲ್, ಅರ್ಶ್‌ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್‌ ಚಕ್ರವರ್ತಿ.

ಅಮೆರಿಕ: ಸಾಯಿತೇಜ, ಆ್ಯಂಡ್ರೆಯೆಸ್‌ ಗುಸ್, ಮೊನಾಂಕ್‌ ಪಟೇಲ್(ನಾಯಕ್‌), ಮಿಲಿಂದ್‌ ಕುಮಾರ್, ಸಂಜಯ್ ಕೃಷ್ಣಮೂರ್ತಿ ಹರ್ಮೀತ್‌ ಸಿಂಗ್, ಶುಭಂ ರಂಜನೆ, ಮೊಹ್ಸಿನ್‌, ಶ್ಯಾಡ್ಲೆ, ಸೌರಭ್‌ ನೇತ್ರಾವಲ್ಕರ್, ಶ್ಯಾಡ್ಲಿ ವ್ಯಾನ್, ಅಲಿ ಖಾನ್‌.