ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಪಾಕಿಸ್ತಾನ ಸೇನೆ ಕೂಡ ಭಾರತದ ಮೇಲೆ ದಾಳಿಗೆ ಯತ್ನ ನಡೆಸುತ್ತಿದೆ. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರೋದರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಇದೀಗ ಬೆಂಗಳೂರಿಗೆ ಸ್ಥಳಾಂತರವಾಗೋ ಎಲ್ಲಾ ಸಾಧ್ಯತೆ ಇದೆ.

ನವದೆಹಲಿ(ಮಾ.01): ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ವಾತಾವರಣ ಇರುವ ಕಾರಣ, ಭದ್ರತಾ ದೃಷ್ಟಿಯಿಂದ ಮೊಹಾಲಿ ಹಾಗೂ ನವದೆಹಲಿಯಲ್ಲಿ ನಡೆಯಬೇಕಿರುವ ಭಾರತ-ಆಸ್ಪ್ರೇಲಿಯಾ ಏಕದಿನ ಪಂದ್ಯಗಳನ್ನು ಬೆಂಗಳೂರು, ಕೋಲ್ಕತಾಕ್ಕೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಹೈದರಾಬಾದ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ!

ಮಾ.10ರಂದು ಮೊಹಾಲಿಯಲ್ಲಿ 4ನೇ ಹಾಗೂ ಮಾ.13ರಂದು ನವದೆಹಲಿಯಲ್ಲಿ 5ನೇ ಏಕದಿನ ಪಂದ್ಯ ನಿಗದಿಯಾಗಿದೆ. ಮೊಹಾಲಿಯ ಕ್ರೀಡಾಂಗಣದ ಪಕ್ಕದಲ್ಲೇ ಭಾರತೀಯ ವಾಯು ಸೇನೆ ನೆಲೆ ಇರುವ ಕಾರಣ, ಅಗತ್ಯ ಸಮಯದಲ್ಲಿ ಯುದ್ಧ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಪಂದ್ಯ ಸ್ಥಳಾಂತರ ಮಾಡಲು ನಿರ್ಧರಿಸಲಾಗುತ್ತಿದೆ ಎನ್ನಲಾಗಿದೆ. 

ಇದನ್ನೂ ಓದಿ: ಪಾಕ್ ಪಂದ್ಯ ಬಹಿಷ್ಕಾರ - ಮೌನ ಮುರಿದ ಕಪಿಲ್ ದೇವ್!

ನವದೆಹಲಿಯಲ್ಲಿ ದೊಡ್ಡ ಮಟ್ಟದ ಸಭೆಗಳು ನಡೆಯುವ ನಿರೀಕ್ಷೆ ಇದ್ದು, ಭದ್ರತಾ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಇಲ್ಲಿನ ಪಂದ್ಯವನ್ನೂ ಸ್ಥಳಾಂತರಿಸಲು ಚರ್ಚೆ ನಡೆಸಲಾಗುತ್ತಿದೆ. ಕೆಎಸ್‌ಸಿಎ ಹಾಗೂ ಬಂಗಾಳ ಕ್ರಿಕೆಟ್‌ ಸಂಸ್ಥೆಗಳಿಗೆ ಪಂದ್ಯ ಆತಿಥ್ಯಕ್ಕೆ ಸಿದ್ಧತೆ ನಡೆಸಿಕೊಳ್ಳಲು ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ.