ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಯಿತು. ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಇನ್ಯಾರು ಕ್ರೀಸ್ಗೆ ಬಂದಿದ್ದೇ ಗೊತ್ತಾಗಲಿಲ್ಲ.
ಕೊಲಂಬೋ (ಫೆ.15) ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಟೂರ್ನಿ ಆರಂಭಕ್ಕೂ ಮೊದಲು ನಾವು ಭಾರತ ವಿರುದ್ಧ ಆಡಲ್ಲ ಬಹಿಷ್ಕಾರ ಎಂದಿತ್ತು. ಇದೇ ಮಾತು ನಂಬಿ ಬಾಂಗ್ಲಾದೇಶ ಕೂಡ ಕುಪ್ಪಳಿಸಿತ್ತು. ಕೊನೆಗೆ ಪಾಕಿಸ್ತಾನ ಎಂದಿನಂತೆ ವರಸೆ ಬದಲಿಸಿ ಭಾರತ ವಿರುದ್ದ ಪಂದ್ಯ ಆಡಿತು. ಆದರೆ ಕನಿಷ್ಠ ಹೋರಾಟ ಕೂಡ ನೀಡಿಲ್ಲ. ಭಾರತದ ಅಲ್ರೌಂಡರ್ ಪ್ರದರ್ಶನ ಮುಂದೆ ಪಾಕಿಸ್ತಾನ ಮತ್ತೆ ಸೋತು ಮಸಿಯಾಯಿತು. ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸ್ ಮಾಡುವ ಪ್ರಯತ್ನ ಮಾಡಿದ ಪಾಕಿಸ್ತಾನ ರನ್ಗೆ ಆಲೌಟ್ ಆಯಿತು. ಭಾರತ 61 ರನ್ ಗೆಲುವು ದಾಖಲಿಸಿತು.
ಪಾಕಿಸ್ತಾನ ಇನ್ನಿಂಗ್ಸ್
ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಪಾಕಿಸ್ತಾನ ತಂಡದಲ್ಲಿ ಯಾರೂ ಕೂಡ ಬ್ಯಾಟಿಂಗ್ ಹೋರಾಟ ನೀಡಲಿಲ್ಲ. ಯಾರಿಗೂ ಟೀಂ ಇಂಡಿಯಾ ಬೌಲರ್ ಅವಕಾಶವನ್ನೇ ನೀಡಲಿಲ್ಲ. ಕ್ರೀಸ್ಗೆ ಬಂದು ಹೋಗಲು ಕ್ರಿಕೆಟ್ ನಿಯಮದ ಪ್ರಕಾರ ಅವಕಾಶವಿತ್ತು. ಆದರೆ ಬ್ಯಾಟಿಂಗ್ ಮಾಡಲು, ಅಬ್ಬರಿಸಲು ಚಾನ್ಸೇ ಇರಲಿಲ್ಲ. ಅಷ್ಟರ ಮಟ್ಟಿಗೆ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನ ತಂಡವನ್ನು ಕಟ್ಟಿ ಹಾಕಿತು. ಉಸ್ಮಾನ್ ಖಾನ್ ಹೋರಾಟ ಸಾಕಾಗಲಿಲ್ಲ. ಶದಬ್ ಖಾನ್ ಜೊತೆ ಸೇರಿ ಉಸ್ಮಾನ್ ಖಾನ್ 44 ರನ್ ಸಿಡಿಸಿ ಔಟಾದರು. ಬಳಿಕ ಪಾಕಿಸ್ತಾನ ಕೆಲ ಹೊತ್ತು ಅಲ್ಲೊಂದು ಇಲ್ಲೊಂದು ರನ್ ಸಿಡಿಸಿತು. 18 ಓವರ್ನಲ್ಲಿ 114 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 61 ರನ್ ಭರ್ಜರಿ ಗೆಲುವು ಕಂಡಿತು.
ಸೂಪರ್ 8 ಹಂತಕ್ಕೇರಿದ ಭಾರತ
ಪಾಕಿಸ್ತಾನ ವಿರುದ್ದದ ಭರ್ಜರಿ ಗೆಲುವಿನೊಂದಿಗೆ ಭಾರತ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತಕ್ಕೇರಿದೆ. ಸದ್ಯ ಸೂಪರ್ 8 ಹಂತಕ್ಕೆ ಅದಿಕೃತವಾಗಿ ಭಾರತ ಎಂಟ್ರಿಕೊಟ್ಟಿದ್ದರೆ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್ ಪ್ರವೇಶ ಪಡೆದಿದೆ. ನಮೀಬಿಯಾ, ಓಮಾನ್ ಹಾಗೂ ನೇಪಾಳ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಭಾರತ ಇನ್ನಿಂಗ್ಸ್
ಟೀಂ ಇಂಡಿಯಾ ಟಾಸ್ ಸೋತು ಕಣಕ್ಕಿಳಿದಿತ್ತು. ಇತ್ತ ಅಭಿಷೇಕ್ ಶರ್ಮಾ ಡಕೌಟ್ ಆಗಿದ್ದರು. ಪಾಕಿಸ್ತಾನ ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಆದರೆ ಇಶಾನ್ ಕಿಶನ್ ಅಬ್ಬರಕ್ಕೆ ಪಾಕಸ್ತಾನ ಲೆಕ್ಕಾಚಾರ ಉಲ್ಟಾ ಆಯಿತು. ಇಶಾನ್ ಕಿಶನ್ 40 ಎಸೆತದಲ್ಲಿ 77 ರನ್ ಸಿಡಿಸಿದರು. ಇತ್ತ ತಿಲಕ್ ವರ್ಮಾ 25 ರನ್ ಕಾಣಿಕೆ ನೀಡಿದರು. ನಾಯಕ ಸೂರ್ಯಕುಮಾರ್ ಯಾದವ್ 32 ರನ್ ಸಿಡಿಸಿ ಅಬ್ಬರಿಸಿದರು.ಆದರೆ ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರು. ಶಿವಂ ದುಬೆ 27 ರನ್ ಸಿಡಿಸಿದರೆ, ರಿಂಗು ಸಿಂಗ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು.

