Ind vs SA: ಸರಣಿ ಸಮಬಲದ ಕಾತರದಲ್ಲಿ ಟೀಂ ಇಂಡಿಯಾ...!
* ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ ಟೀಂ ಇಂಡಿಯಾ
* ತವರಿನಲ್ಲಿ ಸತತ 8ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ
ರಾಜ್ಕೋಟ್(ಜೂ.17): ಸರಣಿ ಸೋಲು ತಪ್ಪಿಸುವುದರ ಜೊತೆಗೆ ನಾಯಕತ್ವದ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಲು ಎದುರು ನೋಡುತ್ತಿರುವ ರಿಷಭ್ ಪಂತ್ (Rishabh Pant) ಮತ್ತೊಂದು ಸವಾಲಿಗೆ ಸಜ್ಜಾಗಿದ್ದು, ಶುಕ್ರವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕಾತರದಲ್ಲಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಒಂದರಲ್ಲಿ ಗೆದ್ದಿದ್ದು, 1-2ರಿಂದ ಹಿನ್ನಡೆಯಲ್ಲಿದೆ. ತವರಿನಲ್ಲಿ ಸತತ 8ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾಕ್ಕೆ (Team India) ಇದು ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಭಾರತ ಇನ್ನೊಂದು ಪಂದ್ಯವಿರುವಾಗಲೇ ಸರಣಿ ಕಳೆದುಕೊಳ್ಳಲಿದೆ. ಶುಕ್ರವಾರದ ಪಂದ್ಯಕ್ಕೆ ಗುಜರಾತ್ನ ರಾಜ್ಕೋಟ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಭಾರತದ ಬ್ಯಾಟಿಂಗ್ ಪಡೆ 2 ಸೋಲಿನ ಹೊರತಾಗಿಯೂ ಬಲಿಷ್ಠವಾಗಿ ತೋರುತ್ತಿದ್ದು, ಇಶಾನ್ ಕಿಶಾನ್ (Ishan Kishan), ಋುತುರಾಜ್ ಗಾಯಕ್ವಾಡ್ ಮಿಂಚುತ್ತಿದ್ದಾರೆ. ಶ್ರೇಯಸ್ ಅಯ್ಯರ್ (Shreyas Iyer) ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ರಿಷಭ್ ಪಂತ್ ನಾಯಕತ್ವದ ಒತ್ತಡಕ್ಕೆ ಒಳಗಾದಂತೆ ಆಡುತ್ತಿದ್ದು, ದೊಡ್ಡ ಇನ್ನಿಂಗ್್ಸ ಕಂಡು ಬರುತ್ತಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಡೆತ್ ಓವರ್ಗಳಲ್ಲಿ ತಂಡದ ರನ್ ಏರಿಸುತ್ತಿದ್ದು, ಮತ್ತೊಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ತುಂಬಾ ಸಮಯದ ಬಳಿಕ ತಂಡಕ್ಕೆ ಮರಳಿರುವ ದಿನೇಶ್ ಕಾರ್ತಿಕ್ (Dinesh Karthik) ಇನ್ನಷ್ಟೇ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಅಕ್ಷರ್ ಪಟೇಲ್ (Axar Patel) ಆಲ್ರೌಂಡರ್ ಹೊಣೆ ಸೂಕ್ತವಾಗಿ ನಿಭಾಯಿಸಲು ವಿಫಲರಾಗುತ್ತಿದ್ದು, ಅವರ ಬದಲು ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರೆ ಅಚ್ಚರಿಯಿಲ್ಲ.
ಅನುಭವಿ ವೇಗಿ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಇತರರಿಂದ ಸೂಕ್ತ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. 3 ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯದ ಆವೇಶ್ ಖಾನ್ ಪಂದ್ಯದಿಂದ ಹೊರಗುಳಿಯಬಹುದು. ಅವರ ಬದಲು ಉಮ್ರಾನ್ ಖಾನ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. ಹರ್ಷಲ್ ಪಟೇಲ್ (Harshal Patel), ಚಹಲ್ ಲಯ ಮುಂದುವರಿಸಲು ಎದುರು ನೋಡುತ್ತಿದ್ದಾರೆ.
6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!
ಮತ್ತೊಂದೆಡೆ, ದ.ಆಫ್ರಿಕಾ ಆರಂಭಿಕ ಬ್ಯಾಟರ್ಗಳ ವೈಫಲ್ಯಕ್ಕೆ ಒಳಗಾಗಿದ್ದು, ಮಧ್ಯಮ ಕ್ರಮಾಂಕವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಡಿ ಕಾಕ್ ಅನುಪಸ್ಥಿತಿಯಲ್ಲಿ ತೆಂಬ ಬವುಮಾ ಮತ್ತು ಹೆಂಡ್ರಿಕ್ಸ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ಇನ್ನಷ್ಟೇ ದೊಡ್ಡ ಇನ್ನಿಂಗ್್ಸ ಕಂಡುಬರಬೇಕಿದೆ. ಡೇವಿಡ್ ಮಿಲ್ಲರ್, ವ್ಯಾನ್ ಡೆರ್ ಡುಸೆನ್, ಕ್ಲಾಸೆನ್ ಅಬ್ಬರಕ್ಕೆ ಕಡಿವಾಣ ಹಾಕಿದರೆ ಭಾರತಕ್ಕೆ ಗೆಲುವು ಸುಲಭವಾಗಿ ಒಲಿಯಲಿದೆ. ಇನ್ನು ಭಾರತೀಯ ಬ್ಯಾಟರ್ಗಳ ಅಬ್ಬರವನ್ನು ನಿಯಂತ್ರಿಸುವ ಹೊಣೆ ವೇಗಿಗಳಾದ ಏನ್ರಿಚ್ ನೋಕಿಯಾ, ರಬಾಡ, ಪಾರ್ನೆಲ್ ಜೊತೆ ತಬ್ರೇಜ್ ಶಮ್ಸಿ ಹಾಗೂ ಕೇಶವ್ ಮಹಾರಾಜ್ ಮೇಲಿದೆ.
ಪಿಚ್ ರಿಪೋರ್ಚ್
ರಾಜ್ಕೋಟ್ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಇಲ್ಲಿ ನಡೆದ 3 ಟಿ20 ಪಂದ್ಯಗಳಲ್ಲಿ 2ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 190+ ರನ್ ಕಲೆ ಹಾಕಿದೆ. ದೊಡ್ಡ ಬೌಂಡರಿಗಳಿರುವ ಕಾರಣ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಮೊದಲು ಬ್ಯಾಟ್ ಮಾಡುವ ತಂಡ 190-200+ ಗಳಿಸಿದರಷ್ಟೇ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಮತ್ತೆ ಟಾಸ್ ಪ್ರಮುಖ ಪಾತ್ರ ವಹಿಸಬಹುದು.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಇಶಾನ್ ಕಿಶನ್, ಋುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಕಾರ್ತಿಕ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜುವೇಂದ್ರ ಚಹಲ್.
ದಕ್ಷಿಣ ಅಫ್ರಿಕಾ: ತೆಂಬ ಬವುಮಾ(ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೇನ್ ಪ್ರಿಟೋರಿಯಸ್, ವ್ಯಾನ್ ಡರ್ ಡುಸೆನ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ತಬ್ರೇಜ್ ಶಮ್ಸಿ, ಕಗಿಸೋ ರಬಾಡ, ಏನ್ರಿಚ್ ನೋಕಿಯ.
ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ರಾಜ್ಕೋಟ್
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್