ಶ್ರೀಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹರಸಾಹಸದ ಗೆಲುವು ಸಾಧಿಸಿದೆ. ಇದೀಗ 2ನೇ ಪಂದ್ಯಕ್ಕೂ ಮುನ್ನ ಹಿನ್ನಡೆ ಅನುಭವಿಸಿದೆ. ತಂಡದ ಕೀ ಪ್ಲೇಯರ್ ಸಂಜು ಸ್ಯಾಮ್ಸನ್ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ 2ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. 

ಪುಣೆ(ಜ.04): ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಮೊದಲ ಪಂದ್ಯದ ಅಂತಿಮ ಎಸೆತದಲ್ಲಿ ಭಾರತ ಗೆಲುವು ದಾಖಲಿಸಿ ನಿಟ್ಟುಸಿರು ಬಿಟ್ಟಿತ್ತು. ತವರಿನಲ್ಲೇ ಭಾರತ ಬೆವತು ಹೋಗಿತ್ತು. ಇದೀಗ ಎರಡನೇ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ತಂಡದ ಕೀ ಪ್ಲೇಯರ್ ಸಂಜು ಸ್ಯಾಮ್ಸನ್ 2ನೇ ಟಿ20 ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಡೈವಿಂಗ್ ಮೂಲಕ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಮೊಣಕಾಲಿಗೆ ಗಾಯವಾಗಿತ್ತು. ಇದೀಗ ಟೀಂ ಇಂಡಿಯಾ ಎರಡನೇ ಪಂದ್ಯಕ್ಕಾಗಿ ಮುಂಬೈನಿಂದ ಪುಣೆಗೆ ಪ್ರಯಾಣ ಮಾಡಿದೆ. ಆದರೆ ಸಂಜು ಸ್ಯಾಮ್ಸನ್ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸಂಜು ಸ್ಯಾಮ್ಸನ್ 2ನೇ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದಾರೆ.

Add Asianetnews Kannada as a Preferred SourcegooglePreferred

ಮೊದಲ ಓವರ್‌ನಲ್ಲಿ ಪಥುಮ್ ನಿಸಂಕ ಅವರ ಕ್ಯಾಚನ್ನು ಡೈವ್ ಮೂಲಕ ಹಿಡಿಯುವ ಪ್ರಯತ್ನ ಮಾಡಿದ್ದರು. ಆದರೆ ಕ್ಯಾಚ್ ಡ್ರಾಪ್ ಆಗಿತ್ತು. ಇತ್ತ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದರು. ಆದರೆ ಸಂಜು ಸ್ಯಾಮ್ಸನ್ ಕೆಲ ಹೊತ್ತು ಚೇತರಿಸಿಕೊಂಡು ಫೀಲ್ಡಿಂಗ್ ಮಾಡಿದ್ದರು. ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಸಂಪೂರ್ಣವಾಗಿ ಫೀಲ್ಡಿಂಗ್ ಮಾಡಿದ್ದರು. ಪಂದ್ಯದ ಬಳಿಕ ಹೊಟೆಲ್‌ಗೆ ತೆರಳಿದ ಸಂಜು ಸ್ಯಾಮ್ಸನ್ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. 

"ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯಗೆ ತುರ್ತಾಗಿ ಬ್ಯಾಕ್‌ ಅಪ್ ಆಲ್ರೌಂಡರ್‌ ರೆಡಿ ಮಾಡಿಕೊಳ್ಳಬೇಕು": ಗಂಭೀರ್

ಇದರಿಂದ ಬಿಸಿಸಿಐ ವೈದ್ಯಕೀಯ ತಂಡ ಸಂಜು ಸ್ಯಾಮ್ಸನ್ ಸ್ಕ್ಯಾನಿಂಗ್ ಮಾಡಿಸಲು ಮುಂದಾಗಿದೆ. ಹೀಗಾಗಿ ಟೀಂ ಇಂಡಿಯಾ ಪುಣೆಗೆ ಪ್ರಯಾಣ ಮಾಡಿದರೆ, ಸಂಜು ಸ್ಯಾಮ್ಸನ್ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಇತ್ತ ಜನವರಿ 5 ರಂದು ಸಂಜೆ 2ನೇ ಟಿ20 ಪಂದ್ಯ ನಡೆಯಲಿದೆ. ಇನ್ನೊಂದು ದಿನದಲ್ಲಿ ಸಂಜು ಸ್ಯಾಮ್ಸನ್ ಚೇತರಿಸಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ 2ನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಕೆಳ ಕ್ರಮಾಂಕದ ಸ್ಫೋಟಕ ಆಟ, ವೇಗಿಗಳ ಮಿಂಚಿನ ದಾಳಿ, ಕೊನೆ ಓವರಲ್ಲಿ ಅಕ್ಷರ್‌ ಪಟೇಲ್‌ ಸಾಹಸದಿಂದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ರನ್‌ ರೋಚಕ ಗೆಲುವು ಸಾಧಿಸಿದ ಭಾರತ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಯುವ ತಂಡದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ, ಹೊಸ ವರ್ಷವನ್ನು ಯಶಸ್ವಿಯಾಗಿ ಆರಂಭಿಸಿದೆ.

ಅಕ್ಷರ್ ಪಟೇಲ್‌ಗೆ ಕೊನೆಯ ಓವರ್‌ ನೀಡಿದ್ದೇಕೆ..? ನಾಯಕ ಹಾರ್ದಿಕ್ ಪಾಂಡ್ಯ ಅಚ್ಚರಿಯ ಪ್ರತಿಕ್ರಿಯೆ..!

ವಾಂಖೇಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಭಾರತ ಸ್ಫೋಟಕ ಆರಂಭದ ಹೊರತಾಗಿಯೂ ದಿಢೀರ್‌ ಕುಸಿತ ಕಂಡಿತು. ಆದರೆ 6ನೇ ವಿಕೆಟ್‌ಗೆ ದೀಪಕ್‌ ಹೂಡಾ ಹಾಗೂ ಅಕ್ಷರ್‌ ಪಟೇಲ್‌ ತೋರಿದ ಸಾಹಸ ಭಾರತ 20 ಓವರಲ್ಲಿ 5 ವಿಕೆಟ್‌ಗೆ 162 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು. ಮುಂಬೈನ ಪಿಚ್‌ನಲ್ಲಿ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಅಸಾಧಾರಣ ಪ್ರದರ್ಶನ ತೋರಬೇಕಿತ್ತು. ಯುವ ವೇಗಿಗಳಾದ ಶಿವಂ ಮಾವಿ, ಉಮ್ರಾನ್‌ ಮಲಿಕ್‌ ಆಕರ್ಷಕ ಪ್ರದರ್ಶನ ತೋರಿದರು.

ನಾಯಕ ದಸುನ್‌ ಶಾನಕ 27 ಎಸೆತಗಳಲ್ಲಿ 45 ರನ್‌ ಸಿಡಿಸಿ ಔಟಾದ ಬಳಿಕ ಲಂಕಾ ಸೋಲಿನತ್ತ ಮುಖ ಮಾಡಿತ್ತು. ಆದರೆ ಹರ್ಷಲ್‌ ಪಟೇಲ್‌ 19ನೇ ಓವರ್‌ನಲ್ಲಿ 16 ರನ್‌ ಬಿಟ್ಟುಕೊಟ್ಟರು. ಲಂಕಾ ಪಾಳಯದಲ್ಲಿ ಜಯದ ಆಸೆ ಚಿಗುರಿಸಿದ ಚಾಮಿಕ ಕರುಣರತ್ನೆಯನ್ನು ಅಕ್ಷರ್‌ ನಿಯಂತ್ರಿಸಿದರು. 20 ಓವರಲ್ಲಿ ಲಂಕಾ 160 ರನ್‌ಗೆ ಆಲೌಟ್‌ ಆಯಿತು.