ಇಂಗ್ಲೆಂಡ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಜಯ ಸಾಧಿಸಿ ಬೀಗುತ್ತಿದ್ದ ಭಾರತ ತಂಡಕ್ಕೆ ಬಿಗ್‌ ಶಾಕ್ ಎದುರಾಗಿದ್ದು, ಗಾಯದ ಸಮಸ್ಯೆ ಮುಂಬರುವ ಪಂದ್ಯಗಳಲ್ಲಿ ತಂಡವನ್ನು ಕಾಡುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪುಣೆ(ಮಾ.24): ಇಂಗ್ಲೆಂಡ್‌ ವಿರುದ್ದ ಮೊದಲ ಏಕದಿನ ಪಂದ್ಯ ಗೆದ್ದ ಬೀಗುತ್ತಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ತಂಡದ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎನಿಸಿದೆ. 

Add Asianetnews Kannada as a Preferred SourcegooglePreferred

ಹೌದು, ಭಾರತ ತಂಡದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನದ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದು, ಮುಂದಿನ 2 ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ. ಅಲ್ಲದೇ ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ ಐಪಿಎಲ್‌ನಿಂದಲೂ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಭಾರೀ ಆಘಾತ ಮೂಡಿಸಿದೆ. ಶ್ರೇಯಸ್‌ ಹೊರಗುಳಿದರೆ ನಾಯಕನ ಸ್ಥಾನವನ್ನು ಬೇರೊಬ್ಬ ಆಟಗಾರನಿಗೆ ನೀಡಬೇಕಾಗುತ್ತದೆ. ಮೂಲಗಳ ಪ್ರಕಾರ ಶ್ರೇಯಸ್‌ಗೆ ಕನಿಷ್ಠ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದರೆ ಇನ್ನೂ ಹೆಚ್ಚು ಸಮಯ ಬೇಕಾಗಬಹುದು ಎನ್ನಲಾಗಿದೆ.

IND vs ENG: ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾಗೆ ಇಂಜುರಿ; ಆಸ್ಪತ್ರೆಗೆ ದಾಖಲು!

ಮೊದಲ ಏಕದಿನ ಪಂದ್ಯದಲ್ಲೇ ಉಭಯ ತಂಡಗಳಿಗೆ ಗಾಯದ ಬರೆ: ಹೌದು, ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್‌ ಮಾತ್ರವಲ್ಲದೇ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ, ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌, ಸ್ಯಾಮ್ ಬಿಲ್ಲಿಂಗ್ಸ್‌ ಸಹಾ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ಆಡುವುದು ಅನುಮಾನ ಎನಿಸಿದೆ.