Ind vs Ban ಮಲೇಷ್ಯಾ ಏರ್ಲೈನ್ಸ್ ವಿರುದ್ದ ಅಸಮಾಧಾನ ಹೊರಹಾಕಿದ ಟೀಂ ಇಂಡಿಯಾ ವೇಗಿ ದೀಪಕ್ ಚಹರ್..!
ಭಾರತ-ಬಾಂಗ್ಲಾದೇಶ ತಂಡಗಳ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ
ಏಕದಿನ ಸರಣಿಗೂ ಮುನ್ನ ಮಲೇಷ್ಯಾ ಏರ್ಲೈನ್ಸ್ ವಿರುದ್ದ ದೀಪಕ್ ಚಹರ್ ಅಸಮಾಧಾನ
ಸರಿಯಾಗಿ ಊಟ ಕೊಟ್ಟಿಲ್ಲ, ಲಗೇಜ್ ಪಡೆಯಲು 24 ಗಂಟೆ ಕಾಯುತ್ತಿದ್ದೇನೆಂದು ಬೇಸರ
ಢಾಕಾ(ಡಿ.03): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಬಾಂಗ್ಲಾದೇಶಕ್ಕೆ ಮಲೇಷ್ಯಾ ಏರ್ಲೈನ್ಸ್ ಮೂಲಕ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ ವೇಗಿ ದೀಪಕ್ ಚಹರ್, ಈ ವಿಮಾನ ಸಂಸ್ಥೆಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಬೇಸರ ಹೊರಹಾಕಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 04ರಿಂದ ಆರಂಭವಾಗಲಿದೆ. ದೀಪಕ್ ಚಹರ್, ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಸರಣಿಯ ಬಳಿಕ ಡಿಸೆಂಬರ್ 14ರಿಂದ ಉಭಯ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿವೆ. ಇದೀಗ ಮಲೇಷ್ಯಾ ಏರ್ಲೈನ್ಸ್ ಸಂಸ್ಥೆಯ ವಿಮಾನಯಾನದ ಅವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನು ಟ್ವೀಟ್ ಮೂಲಕ ಹೊರಹಾಕಿದ್ದು, ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದಿದ್ದರೂ ಸೂಕ್ತ ಆಹಾರ ನೀಡಲಿಲ್ಲ. ಲಗೇಜ್ಗಾಗಿ 24 ಗಂಟೆಗಳಿಂದ ಕಾಯುತ್ತಿದ್ದೇನೆ ಎಂದು ದೀಪಕ್ ಚಹರ್ ಬೇಸರ ವ್ಯಕ್ತಪಡಿಸಿದ್ದಾರೆ.
Ind vs Ban ಬಾಂಗ್ಲಾದೇಶ ಏಕದಿನ ಸರಣಿಯಿಂದ ಹೊರಬಿದ್ದ ಶಮಿ, ಮಾರಕ ವೇಗಿ ಉಮ್ರಾನ್ ಮಲಿಕ್ಗೆ ಬುಲಾವ್..!
ಮಲೇಷ್ಯಾ ಏರ್ಲೈನ್ಸ್ ಜತೆಗಿನ ಪ್ರಯಾಣದ ಅನುಭವ ಅತ್ಯಂತ ಕೆಟ್ಟದಾಗಿತ್ತು. ಮೊದಲಿಗೆ ನಮಗೆ ತಿಳಿಸದೇ ವಿಮಾನವನ್ನು ಬದಲಿಸಿದರು. ಆಮೇಲೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಸಹಾ ಊಟವನ್ನು ನೀಡಲಿಲ್ಲ. ಇದೀಗ ಕಳೆದ 24 ಗಂಟೆಗಳಿಂದ ನಮ್ಮ ಲಗೇಜ್ಗಾಗಿ ಕಾಯುತ್ತಿದ್ದೇನೆ. ನೀವೇ ಯೋಚನೆ ಮಾಡಿ ನಾಳೆಯೇ ನಮ್ಮ ಮ್ಯಾಚ್ ಇದೆ ಎಂದು ದೀಪಕ್ ಚಹರ್ ಟ್ವೀಟ್ ಮಾಡಿದ್ದಾರೆ.
ಇನ್ನು ದೀಪಕ್ ಚಹರ್ ಟ್ವೀಟ್ ಮಾಡುತ್ತಿದ್ದಂತೆಯೇ ಮಲೇಷ್ಯಾ ಏರ್ಲೈನ್ಸ್ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಅಡಚಣೆಗೆ ಕ್ಷಮೆಯಾಚಿಸಿದ್ದಾರೆ. ಇದಷ್ಟೇ ಅಲ್ಲದೇ ನೀವೂ ಏನಾದರೂ ಸಮಸ್ಯೆಯಿದ್ದರೇ ಫೀಡ್ಬ್ಯಾಕ್ ನೀಡಿ ಎಂದು ಲಿಂಕ್ ಶೇರ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ದೀಪಕ್ ಚಹರ್, ಇದೂ ಕೂಡಾ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟ್ವೀಟ್ ಮಾಡಿ ಮಲೇಷ್ಯಾ ಏರ್ಲೈನ್ಸ್ ಕಾಲೆಳೆದಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಢಾಕಾದ ಮೀರ್ಪುರ್ ಕ್ರೀಡಾಂಗಣದಲ್ಲಿ ಡಿಸೆಂಬರ್ 4, ಡಿಸೆಂಬರ್ 7, ಡಿಸೆಂಬರ್ 10ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 14ರಿಂದ 18ರ ವರೆಗೂ ಛಟ್ಟೋಗ್ರಾಮ್ನಲ್ಲಿ ಮೊದಲ ಟೆಸ್ಟ್, ಡಿ.22ರಿಂದ 26ರ ವರೆಗೂ ಢಾಕಾದಲ್ಲಿ 2ನೇ ಟೆಸ್ಟ್ ನಡೆಯಲಿದೆ. ಟೆಸ್ಟ್ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವ್ಯಾಪ್ತಿಗೆ ಒಳಪಡಲಿದೆ.
ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್, ಶಹಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್ ಸೆನ್.