Asianet Suvarna News Asianet Suvarna News

ನಾವು ಬುಮ್ರಾ, ಶಮಿ, ಸಿರಾಜ್‌ ಎದುರಿಸುತ್ತಿಲ್ಲ ಎನ್ನುವುದೇ ನಮ್ಮ ಅದೃಷ್ಟ: ಶ್ರೇಯಸ್ ಅಯ್ಯರ್

ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಬೌಲಿಂಗ್ ಪಡೆಯ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, "ನಾವು ತುಂಬಾ ಅದೃಷ್ಟವಂತರು. ಯಾಕೆಂದರೆ ನಾವು ಟೀಂ ಇಂಡಿಯಾ ತ್ರಿವಳಿ ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಎದುರಿಸುತ್ತಿಲ್ಲ" ಎಂದು ಹೇಳಿದ್ದಾರೆ.

ICC World Cup 2023 Lucky we dont have to play Bumrah Shami and Siraj says Shreyas Iyer kvn
Author
First Published Nov 3, 2023, 3:33 PM IST

ಮುಂಬೈ(ಅ.11): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಗುರುವಾರ ಇಲ್ಲಿನ ವಾಂಖೇಡೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 357 ರನ್ ಕಲೆಹಾಕಿದ್ದ ಭಾರತ, ನೆರೆಯ ಲಂಕಾವನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 302 ರನ್ ಅಂತರದ ದಾಖಲೆಯ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಭಾರತ ನೀಡಿದ ಗುರಿಯನ್ನು ನೋಡೇ ದಂಗು ಬಡಿದಿದ್ದ ಲಂಕಾಕ್ಕೆ ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮದ್‌ ಸಿರಾಜ್‌ ಚಳಿ ಬಿಡಿಸಿದರು. ಇವರಿಬ್ಬರ ಆರಂಭಿಕ ಸ್ಪೆಲ್‌ ಯಾವುದೇ ಎದುರಾಳಿಯನ್ನಾದರೂ ನಡುಗಿಸುತ್ತಿತ್ತು. ಬುಮ್ರಾ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ನಿಸ್ಸಾಂಕರನ್ನು ಎಲ್‌ಬಿ ಬಲೆಗೆ ಕೆಡವಿದರೆ, 2ನೇ ಓವರಲ್ಲಿ ಸಿರಾಜ್‌, ಕರುಣರತ್ನೆ ಹಾಗೂ ಸಮರವಿಕ್ರಮ ಇಬ್ಬರನ್ನೂ ಪೆವಿಲಿಯನ್‌ಗಟ್ಟಿದರು. ನಾಯಕ ಕುಸಾಲ್‌ ಮೆಂಡಿಸ್‌ 4ನೇ ಓವರಲ್ಲಿ ಔಟಾದಾಗ ತಂಡದ ಮೊತ್ತ 3 ರನ್‌ಗೆ 4 ವಿಕೆಟ್‌.

ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್‌ಗೆ ಬಿಗ್ ಶಾಕ್‌..! ಮಾರಕ ವೇಗಿ ಟೂರ್ನಿಯಿಂದಲೇ ಔಟ್

ಹಾಗೂ ಹೀಗೂ ಬುಮ್ರಾ ಹಾಗೂ ಸಿರಾಜ್‌ರ ಆರಂಭಿಕ ಸ್ಪೆಲ್‌ ಅನ್ನು ಮುಗಿಸಿ ಆ ನಂತರ ರನ್‌ ಗಳಿಸೋಣ ಎನ್ನುವ ಲೆಕ್ಕಾಚಾರದಲ್ಲಿದ್ದ ಲಂಕಾಕ್ಕೆ ಮೊಹಮ್ಮದ್‌ ಶಮಿಯ ಕಾಟ ಕಾದಿತ್ತು. ಶಮಿ ದಾಳಿಗಿಳಿಯುತ್ತಿದ್ದಂತೆ ಅಸಲಂಕ ಹಾಗೂ ಹೇಮಂತ ಅವರುಗಳ ವಿಕೆಟ್‌ ಎಗರಿಸಿದರು. 14 ರನ್‌ಗೆ 6 ವಿಕೆಟ್‌ ಕಳೆದುಕೊಂಡ ಲಂಕಾ, ಏಷ್ಯಾಕಪ್‌ ಬಳಿಕ ಮತ್ತೊಮ್ಮೆ ಏಕದಿನದಲ್ಲಿ ಕನಿಷ್ಠ ಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತು. 29 ರನ್‌ಗೆ 8ನೇ ವಿಕೆಟ್‌ ಬಿದ್ದಾಗ, ಕನಿಷ್ಠ ಮೊತ್ತ ಹಾಗೂ ಅತಿದೊಡ್ಡ ಗೆಲುವಿನ ವಿಶ್ವ ದಾಖಲೆ ಸೃಷ್ಟಿಯಾಗಬಹುದು ಎನ್ನುವ ನಿರೀಕ್ಷೆ ಹೆಚ್ಚಾಯಿತು. ಆದರೆ ತೀಕ್ಷಣ(12) ಹಾಗೂ ರಜಿತ(14), ತಂಡವನ್ನು ಎರಡು ಅವಮಾನೀಯ ದಾಖಲೆಗಳಿಂದ ಪಾರು ಮಾಡಿದರು. ಅಂತೂ ಇಂತು 50 ರನ್‌ ದಾಟಿದ ಲಂಕಾ, 19.4 ಓವರಲ್ಲಿ 55ಕ್ಕೆ ಆಲೌಟ್‌ ಆಯಿತು. ಶಮಿ 5 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಓವರ್ ಸಹಿತ 18 ರನ್ ನೀಡಿ 5 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್‌ 3, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್‌ ಉರುಳಿಸಿದರು.

ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಬೌಲಿಂಗ್ ಪಡೆಯ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, "ನಾವು ತುಂಬಾ ಅದೃಷ್ಟವಂತರು. ಯಾಕೆಂದರೆ ನಾವು ಟೀಂ ಇಂಡಿಯಾ ತ್ರಿವಳಿ ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಎದುರಿಸುತ್ತಿಲ್ಲ" ಎಂದು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಪ್ರತಿಭೆ ಬೆಳೆಯಲು ಬಿಡಲ್ಲ, ಇದ್ರಿಂದಲೇ ವಲಸೆ ಹೋಗುತ್ತಿದ್ದಾರೆ : ರಾಬಿನ್ ಉತ್ತಪ್ಪ ಅಸಮಾಧಾನ

"ಹೌದು, ನಾವು ಇಂದಿನ ಪಂದ್ಯವನ್ನು ಹಾಗೂ ಕಳೆದ ಪಂದ್ಯವನ್ನು ಗಮನಿಸಿ ಹೇಳುವುದಾದರೇ, ಖಂಡಿತಾವಾಗಿಯೂ ನಾವು ಈ ವೇಗಿಗಳ ಎದುರು ಆಡದೇ ಇರುವುದು ನಮ್ಮ ಅದೃಷ್ಟ ಎನ್ನುತ್ತೇನೆ. ಇನ್ನು ಇದೇ ವೇಳೆ ನಾವು ನೆಟ್ಸ್‌ನಲ್ಲಿ ಇದೇ ಬೌಲರ್‌ಗಳ ಎದುರು ಅಭ್ಯಾಸ ನಡೆಸಿದ್ದೇವೆ. ಹೀಗಾಗಿ ನಾವು ಪಂದ್ಯದಲ್ಲಿ ಯಾವುದೇ ಬೌಲರ್‌ಗಳ ಎದುರು ನಿರ್ಭೀತರಾಗಿ ಬ್ಯಾಟಿಂಗ್ ಮಾಡಲು ಇದು ಪ್ರೇರಣೆ ನೀಡಲಿದೆ" ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಈ ಮೊದಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲೂ ಶ್ರೀಲಂಕಾವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಬೀಗಿತ್ತು.

Follow Us:
Download App:
  • android
  • ios