ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಫುಲ್‌ಟಾಸ್‌ ಎಸೆತಕ್ಕೆ ನೋಬಾಲ್‌ ನೀಡಿಲ್ಲ ಎಂದು ಹಸರಂಗ ಅಂಪೈರ್‌ ಜತೆ ವಾದಿಸಿದ್ದರು. ಒಟ್ಟಾರೆ 24 ತಿಂಗಳ ಅವಧಿಯಲ್ಲಿ ಅವರು 5 ಡಿಮೆರಿಟ್‌ ಅಂಕ ತಲುಪಿದ್ದರಿಂದ ಅವರಿಗೆ ನಿಷೇಧ ಹೇರಲಾಗಿದೆ.

ದುಬೈ(ಫೆ.26): ಡಾಂಬುಲಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾದ ನಾಯಕ ವನಿಂದು ಹಸರಂಗ ಅವರನ್ನು 2 ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಐಪಿಎಲ್‌ನಲ್ಲಿ ಈ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಹಸರಂಗ, ಮುಂಬರುವ 2024ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪಂದ್ಯದಲ್ಲಿ ಫುಲ್‌ಟಾಸ್‌ ಎಸೆತಕ್ಕೆ ನೋಬಾಲ್‌ ನೀಡಿಲ್ಲ ಎಂದು ಹಸರಂಗ ಅಂಪೈರ್‌ ಜತೆ ವಾದಿಸಿದ್ದರು. ಒಟ್ಟಾರೆ 24 ತಿಂಗಳ ಅವಧಿಯಲ್ಲಿ ಅವರು 5 ಡಿಮೆರಿಟ್‌ ಅಂಕ ತಲುಪಿದ್ದರಿಂದ ಅವರಿಗೆ ನಿಷೇಧ ಹೇರಲಾಗಿದೆ. ಮತ್ತೊಂದೆಡೆ ಅಂಪೈರ್‌ ಸೂಚನೆ ನಿರ್ಲಕ್ಷಿಸಿದ್ದರಿಂದ ಅಫ್ಘಾನಿಸ್ತಾನ ವಿಕೆಟ್‌ ಕೀಪರ್‌ ರಹ್ಮಾನುಲ್ಲಾ ಗುರ್ಬಾಜ್‌ ಅವರಿಗೆ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ.

Ranji Trophy ಕರ್ನಾಟಕದ ಸೆಮೀಸ್‌ ಕನಸು ಭಗ್ನ?

ಚಾಂಪಿಯನ್‌ ಮುಂಬೈಗೆ ಸತತ 2ನೇ ಗೆಲುವಿನ ಸಂಭ್ರಮ

ಬೆಂಗಳೂರು: 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈಗೆ 5 ವಿಕೆಟ್‌ ಜಯ ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 9 ವಿಕೆಟ್‌ಗೆ ಕೇವಲ 126 ರನ್‌ ಕಲೆಹಾಕಿತು. ತನುಜಾ ಕಾನ್ವಾರ್‌ 28, ಕ್ಯಾಥ್ರಿನ್‌ ಬ್ರೈಸ್‌ 25 ಹಾಗೂ ನಾಯಕಿ ಬೆಥ್‌ ಮೂನಿ 24 ರನ್‌ ಗಳಿಸಿ ತಂಡದ ಮೊತ್ತ 120 ದಾಟಲು ನೆರವಾದರು. ಅಮೇಲಿ ಕೇರ್‌ 17ಕ್ಕೆ 4, ಶಬ್ನಿಮ್‌ ಇಸ್ಮಾಯಿಲ್‌ 18ಕ್ಕೆ 3 ವಿಕೆಟ್‌ ಕಿತ್ತರು.

ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟ ರವಿಚಂದ್ರನ್ ಅಶ್ವಿನ್..!

ಸುಲಭ ಗುರಿ ಬೆನ್ನತ್ತಿದ ಮುಂಬೈ 18.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಹರ್ಮನ್‌ಪ್ರೀತ್‌ ಕೌರ್‌(ಔಟಾಗದೆ 46 ರನ್‌) ಮತ್ತೆ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಅಮೇರಲಿ ಕೇರ್‌ 31 ರನ್‌ ಸಿಡಿಸಿದರು.

ಇಂದಿನ ಪಂದ್ಯ: ಯುಪಿ ವಾರಿಯರ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌

ಜೈಪುರ ಕ್ರೀಡಾಂಗಣಕ್ಕೆ ಬೀಗ: ಐಪಿಎಲ್‌ ಪಂದ್ಯ ಸ್ಥಳಾಂತರಗೊಳ್ಳುವ ಭೀತಿ

ಜೈಪುರ: ಐಪಿಎಲ್‌ ಆರಂಭಕ್ಕೆ ತಿಂಗಳಷ್ಟೇ ಬಾಕಿ ಇರುವಾಗ ಬಾಕಿ ಪಾವತಿಸದ ಕಾರಣಕ್ಕೆ ಜೈಪುರದ ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣ ಹಾಗೂ ರಾಜಸ್ಥಾನ ಕ್ರಿಕೆಟ್‌ ಸಂಸ್ಥೆ(ಆರ್‌ಸಿಎ)ಯ ಕಚೇರಿಗೆ ರಾಜಸ್ಥಾನ ಕ್ರೀಡಾ ಇಲಾಖೆ ಬೀಗ ಜಡಿದಿದೆ. ಇದರಿಂದಾಗಿ ಐಪಿಎಲ್‌ ಪಂದ್ಯಗಳೇ ಜೈಪುರದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವ ಆತಂಕ ಎದುರಾಗಿದೆ. ತಮಗೆ ಬರಬೇಕಿರುವ ಹಣ ಪಾವತಿಸದ ಕಾರಣ ಬೀಗ ಜಡಿದಿರುವುದಾಗಿ ಇಲಾಖೆ ತಿಳಿಸಿದೆ. ಈಗಾಗಲೇ ಆರ್‌ಸಿಎಗೆ ನೋಟಿಸ್‌ ನೀಡಿದ್ದ ಇಲಾಖೆ, ಸೊತ್ತುಗಳನ್ನು ಹಸ್ತಾಂತರಿಸುವಂತೆ ತಿಳಿಸಿತ್ತು. ಆದರೆ ಇದಕ್ಕೆ ಆರ್‌ಸಿಎ ಒಪ್ಪದಿದ್ದರಿಂದ ಬೀಗ ಜಡಿಯಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.