IPL Slapgate ನಾನು ತಪ್ಪು ಮಾಡಿದೆ, ಶ್ರೀಶಾಂತ್ ಕಪಾಳಮೊಕ್ಷ ಕುರಿತು ಮೊದಲ ಬಾರಿಗೆ ಹರ್ಭಜನ್ ಮಾತು!
- ನನ್ನಿಂದ ತಪ್ಪಾಗಿದೆ, ಕಪಾಳಮೋಕ್ಷ ಅಗತ್ಯ ಇರಲಿಲ್ಲ
- 2008ರ ಐಪಿಎಲ್ ಟೂರ್ನಿಯಲ್ಲಿ ನಡೆದ ಘಟನೆ
- ಮೈದಾನದಲ್ಲೇ ಗಳಗಳನೇ ಅತ್ತಿದ್ದ ಶ್ರೀಶಾಂತ್
ನವದೆಹಲಿ(ಜೂ.05): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬರೋಬ್ಬರಿ 14 ವರ್ಷಗಳ ಬಳಿಕ ವೇಗಿ ಶ್ರೀಶಾಂತ್ ಬಳಿ ಕ್ಷಮೇ ಕೇಳಿದ್ದಾರೆ. 2008ರ ಐಪಿಎಲ್ ಟೂರ್ನಿಯಲ್ಲಿ ನಡೆದ ಕಪಾಳಮೋಕ್ಷ ಪ್ರಕರಣ ಕುರಿತು ಇದೇ ಮೊದಲ ಬಾರಿಗೆ ಹರ್ಭಜನ್ ಸಿಂಗ್ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ತಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ.
ವಿಕ್ರಮ ಸಾಠೆ ನಿರೂಪಣೆಯ ಗ್ಲ್ಯಾನ್ಸ್ ಲೈವ್ ಕಾರ್ಯಕ್ರಮದಲ್ಲಿ ಶ್ರೀಶಾಂತ್ ಹಾಗೂ ಹರ್ಭಜನ್ ಸಿಂಗ್ ಭಾಗಿಯಾಗಿದ್ದಾರೆ. ಈ ವೇಳೆ 2008ರ ಕಪಾಳಮೋಕ್ಷ ಪ್ರಕರಣ ಕುರಿತು ಹರ್ಭಜನ್ ಮಾತನಾಡಿದ್ದಾರೆ. ಅಂದು ನನ್ನಿಂದ ತಪ್ಪಾಗಿದೆ. ನನ್ನಿಂದಾಗಿ ನನ್ನ ತಂಡದವರೂ ಕ್ರಿಕೆಟ್ ಕೂಡ ತಲೆ ತಗ್ಗಿಸಬೇಕಾಯಿತು. ನಾನು ಮಾಡಿದ ತಪ್ಪುಗಳಲ್ಲಿ ಒಂದು ತಪ್ಪು ಸರಿಪಡಿಕೊಳ್ಳುವುದಾದರೆ, 2008ರಲ್ಲಿ ಶ್ರೀಶಾಂತ್ ಎದರು ನಡೆದುಕೊಂಡ ರೀತಿ ಆಗಿದೆ. ಆ ಘಟನೆ ನಡೆಯಬಾರದಿತ್ತು. ಪ್ರತಿ ಭಾರಿ ಆ ಘಟನೆ ನೆನಪಿಸಿಕೊಂಡಾಗ ಇದು ನಡೆಯಬಾರದಿತ್ತು ಎಂದುಕೊಳ್ಳುತ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಬಿಗ್ಬಾಸ್ 12: ಶ್ರೀಶಾಂತ್ ಬಿಚ್ಚಿಟ್ಟರು ಐಪಿಎಲ್ ಕಪಾಳ ಮೋಕ್ಷ ಪ್ರಕರಣ!
ನಾನು ಅತಿರೇಖದಿಂದ ವರ್ತಿಸಿದೆ. ಇದರ ಅಗತ್ಯ ಇರಲಿಲ್ಲ ಎಂದು ಲೈವ್ ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ಹೇಳಿದ್ದಾರೆ. ಈ ಘಟನೆ ನಡೆದು 14 ವರ್ಷಗಳೇ ಉರುಳಿಸಿದೆ. ಆದರೂ ಐಪಿಎಲ್ ಕಪ್ಪು ಚುಕ್ಕೆಗಳಲ್ಲಿ ಇದು ಒಂದಾಗಿದೆ.
2008ರಲ್ಲಿ ನಡೆದ ಮೊದಲ ಐಪಿಎಲ್ ಆವೃತ್ತಿ ಟೂರ್ನಿ. ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಭಜನ್ ಸಿಂಗ್ ಮುನ್ನಡೆಸಿದ್ದರು. ಇತ್ತ ಕಿಂಗ್ಸ್ 11 ಪಂಜಾಬ್ ತಂಡದ ವೇಗಿ ಶ್ರೀಶಾಂತ್ ಹೇಳಿ ಕೇಳಿ ಮೊದಲೇ ಆಕ್ರಮಣಕಾರಿ ಆಟಗಾರ. ಪ್ರತಿ ವಿಕೆಟ್ಗೂ ತುಸು ಹೆಚ್ಚಾಗಿ ಸಂಭ್ರಮಿಸುತ್ತಾರೆ. ಸ್ಲೆಡ್ಜಿಂಗ್, ತಿರುಗೇಚು ನೀಡುವುದರಲ್ಲಿ ಶ್ರೀಶಾಂತ್ಗೆ ಮೊದಲ ಸ್ಥಾನ. ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ವಿಕೆಟ್ ಪಡೆದ ಸಂಭ್ರಮದಲ್ಲಿ ಶ್ರೀಶಾಂತ್ ಹೆಚ್ಚು ಸಂಭ್ರಮಿಸಿದ್ದಾರೆ. ಪೆವಿಲಿಯನ್ಗೆ ಹಿಂತಿರುಗುವ ವೇಳೆ ಶ್ರೀಶಾಂತ್ ವರ್ತನೆ ಹರ್ಭಜನ್ ಸಿಂಗ್ ಪಿತ್ತ ನೆತ್ತಿಗೇರಿಸಿತ್ತು.
ಒಂದೆಡೆ ಶ್ರೀಶಾಂತ್ ಸಂಭ್ರಮ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಸೋಲು ಹರ್ಭಜನ್ ಸಿಂಗ್ ತಾಳ್ಮೆ ಕೆಡಿಸಿದೆ. ಈ ಪಂದ್ಯದ ಮುಗಿದ ಬೆನ್ನಲ್ಲೇ ಉಭಯ ತಂಡದ ಆಟಗಾರರ ಹಸ್ತಲಾಘವ ಮಾಡಿಕೊಂಡಿದ್ದಾರೆ. ಈ ವೇಳೆ ಹರ್ಭಜನ್ ಸಿಂಗ್ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಶ್ರೀಶಾಂತ್ಗೆ ಕಪಾಳಕ್ಕೆ ಹೊಡೆದಿದ್ದಾರೆ. ಇದು ಮೈದಾನದಲ್ಲಿದ್ದ ಎಲ್ಲಾ ಆಟಗಾರರಿಗೆ ಆಶ್ಚರ್ಯ ಹಾಗೂ ಆಘಾತ ತಂದಿತ್ತು. ಲೈವ್ ಮ್ಯಾಚಲ್ಲೇ ಕಪಾಳ ಹೊಡೆದ ಶ್ರೀಶಾಂತ್ ಬೇಸರದಿಂದ ಗಳಗಳನೇ ಅತ್ತಿದ್ದರು.
IPL ಹರಾಜಿನಿಂದ ಹೊರಗಿಟ್ಟ ಬೆನ್ನಲ್ಲೇ 5 ವಿಕೆಟ್ ಕಬಳಿಸಿ ಫ್ರಾಂಚೈಸಿ ಗಮನಸೆಳೆದ ಶ್ರೀಶಾಂತ್!
ಈ ಘಟನೆ ಐಪಿಎಲ್ ಟೂರ್ನಿಗೆ ಕಪ್ಪು ಚುಕ್ಕೆಯಾದರೆ, ಬಿಸಿಸಿಐಗೂ ತಲೆನೋವಾಗಿತ್ತು. ಬಳಿಕ ಈ ವಿಡಿಯೋವನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿತ್ತು. ಈ ಘಟನ ಬಳಿಕ ಹಿರಿಯ ಕ್ರಿಕೆಟಿಗರು ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಸಂಧಾನ ಮಾಡಿದ್ದರು.
ಬಳಿಕ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ಜೊತೆಯಾಗಿ 2011ರ ವಿಶ್ವಕಪ್ ಟೂರ್ನಿ ಆಡಿದ್ದರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.