ತಿಲಕ್ ವರ್ಮಾ ನೇತೃತ್ವದ ಹೈದರಾಬಾದ್ ತಂಡವು ಪ್ಲೇಟ್ ಗ್ರೂಪ್ನಲ್ಲಿ ಮೇಘಾಲಯ ವಿರುದ್ದ 5 ವಿಕೆಟ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂದಿನ ವರ್ಷ ಎಲೈಟ್ ಗ್ರೂಪ್ ಆಡಲು ಅರ್ಹತೆಗಿಟ್ಟಿಸಿಕೊಂಡಿದೆ.
ಹೈದರಾಬಾದ್: ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮುಂದಿನ ವರ್ಷ ಎಲೈಟ್ ಗುಂಪಿನಲ್ಲಿ ಆಡಲು ಅರ್ಹತೆ ಪಡೆದಿರುವ ಹೈದರಾಬಾದ್ ತಂಡಕ್ಕೆ ಅಲ್ಲಿನ ರಾಜ್ಯ ಕ್ರಿಕೆಟ್ ಸಂಸ್ಥೆ (ಎಚ್ಸಿಎ) ಭರ್ಜರಿ ಆಫರ್ವೊಂದನ್ನು ನೀಡಿದೆ. ಮುಂದಿನ 3 ವರ್ಷಗಳಲ್ಲಿ ರಣಜಿ ಟ್ರೋಫಿ ಗೆದ್ದರೆ ತಂಡಕ್ಕೆ 1 ಕೋಟಿ ರು., ಪ್ರತಿ ಆಟಗಾರರಿಗೂ ಬಿಎಂಡಬ್ಲ್ಯು ಕಾರು ಬಹುಮಾನ ನೀಡುವುದಾಗಿ ಎಚ್ಸಿಎ ಅಧ್ಯಕ್ಷ ಜಗನ್ ಮೋಹನ್ ಘೋಷಿಸಿದ್ದಾರೆ.
ಹೌದು, ತಿಲಕ್ ವರ್ಮಾ ನೇತೃತ್ವದ ಹೈದರಾಬಾದ್ ತಂಡವು ಪ್ಲೇಟ್ ಗ್ರೂಪ್ನಲ್ಲಿ ಮೇಘಾಲಯ ವಿರುದ್ದ 5 ವಿಕೆಟ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂದಿನ ವರ್ಷ ಎಲೈಟ್ ಗ್ರೂಪ್ ಆಡಲು ಅರ್ಹತೆಗಿಟ್ಟಿಸಿಕೊಂಡಿದೆ. ಇದರಿಂದ ಖುಷಿಯಾಗಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿರುವ ಜಗನ್ ಮೋಹನ್ ರಾವ್ ಅರಿಶಿನಾಪಲ್ಲಿ ಅವರು ಆಟಗಾರರಿಗೆ ಬಂಫರ್ ಆಫರ್ ಘೋಷಿಸಿದ್ದಾರೆ.
"ನಾನು ಈ ರೀತಿಯ ಆಫರ್ ನೀಡಿರುವುದು ಆಟಗಾರರಿಗೆ ರಣಜಿ ಟ್ರೋಫಿ ಗೆಲ್ಲಲು ಸ್ಪೂರ್ತಿ ಸಿಗುವಂತೆ ಆಗಲಿ ಎಂದುಕೊಂಡಿದ್ದೇನೆ. ಮುಂದಿನ ವರ್ಷವೇ ರಣಜಿ ಟ್ರೋಫಿ ಗೆಲ್ಲುವುದು ಮೇಲ್ನೋಟಕ್ಕೆ ಕಷ್ಟ ಸಾಧ್ಯ. ಹೀಗಾಗಿ ಮುಂದಿನ ಮೂರು ಸೀಸನ್ವರೆಗೂ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ" ಎಂದು ಜಗನ್ ಮೋಹನ್ ರಾವ್ ಹೇಳಿದ್ದಾರೆ.
ಹೈದರಾಬಾದ್ ಕ್ರಿಕೆಟ್ ತಂಡವು 1986-87ರ ಆವೃತ್ತಿಯಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಆಟಗಾರರಲ್ಲಿ ಹುರುಪು ಮೂಡಿಸುವ ಉದ್ದೇಶದಿಂದ ಈ ಆಫರ್ ನೀಡಲಾಗಿದೆ.
ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಆಸ್ಟ್ರೇಲಿಯಾ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ 3 ವಿಕೆಟ್ಗೆ 215 ರನ್ ಕಲೆಹಾಕಿತು. ತಂಡದ ಇನ್ನಿಂಗ್ಸಲ್ಲಿ 13 ಸಿಕ್ಸರ್, 10 ಬೌಂಡರಿಗಳಿದ್ದವು.
ದೊಡ್ಡ ಗುರಿ ಬೆನ್ನತ್ತಿದ ಆಸೀಸ್ಗೆ ನಾಯಕ ಮಿಚೆಲ್ ಮಾರ್ಷ್ ಆಸರೆಯಾದರು. 44 ಎಸೆತದಲ್ಲಿ 72 ರನ್ ಸಿಡಿಸಿದರು. ಆದರೂ ಕೊನೆಯ ಓವರಲ್ಲಿ ಗೆಲ್ಲಲು 16 ರನ್ ಬೇಕಿತ್ತು. ಟಿಮ್ ಡೇವಿಡ್ ತಂಡವನ್ನು ಜಯದ ದಡ ಸೇರಿಸಿದರು. ಕೊನೆಯ ಎಸೆತದಲ್ಲಿ 4 ರನ್ ಬೇಕಿದ್ದಾಗ ಡೇವಿಡ್ ಬೌಂಡರಿ ಬಾರಿಸಿದರು. ಅವರು 10 ಎಸೆತದಲ್ಲಿ 31 ರನ್ ಸಿಡಿಸಿ ಔಟಾಗದೆ ಉಳಿದರು.
ಸ್ಕೋರ್: ನ್ಯೂಜಿಲೆಂಡ್ 215/3, ಆಸ್ಟ್ರೇಲಿಯಾ 216/4
