ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಪಾರ್ಟ್ನರ್ ಮಹಿಕಾ ಶರ್ಮಾಗೆ 10 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಕಾರಿಗೆ ಮಹಿಕಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಲೇಖನವು ಕಾರಿನ ವಿಶೇಷತೆಗಳೇನು ನೋಡೋಣ ಬನ್ನಿ.
ಮುಂಬೈ: ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ, ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಪಾರ್ಟ್ನರ್ ಮಹಿಕಾ ಶರ್ಮಾಗೆ 10 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಸೂಪರ್ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಮಹಿಕಾ ಶರ್ಮಾ ಹೊಸ ಕಾರಿಗೆ ಪೂಜೆ ಮಾಡ್ತಿರೋ ವಿಡಿಯೋ ಹೊರಬಂದ ಮೇಲೆ, ಈ ಭರ್ಜರಿ ಗಿಫ್ಟ್ ಬಗ್ಗೆ ಅಭಿಮಾನಿಗಳಿಗೆ ಗೊತ್ತಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ, ಮಹಿಕಾ ಶರ್ಮಾ ಒಬ್ಬ ಪುರೋಹಿತರ ಸಮ್ಮುಖದಲ್ಲಿ ಮಂತ್ರಗಳೊಂದಿಗೆ ಹೊಸ ಕಾರಿಗೆ ಪೂಜೆ ಮಾಡ್ತಿದ್ದಾರೆ. ವೇಗ ಮತ್ತು ಐಷಾರಾಮಿತನದ ಸಂಕೇತವಾಗಿರುವ ಫೆರಾರಿ 12 ಸಿಲಿಂಡ್ರಿ ಕಾರನ್ನು ಹಾರ್ದಿಕ್ ಉಡುಗೊರೆಯಾಗಿ ನೀಡಿದ್ದಾರೆ. ಕಾರಿನೊಳಗೆ ಕುಳಿತಿದ್ದ ಹಾರ್ದಿಕ್ ಅವರೇ ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಶ್ವಕಪ್ ಗೆದ್ದ ನಂತರ ಇಬ್ಬರೂ ಮೈದಾನದಲ್ಲಿ ಒಟ್ಟಿಗೆ ಸಂಭ್ರಮಿಸುತ್ತಿದ್ದ ಫೋಟೋಗಳು ಕೂಡ ಈ ಹಿಂದೆ ವೈರಲ್ ಆಗಿದ್ದವು.
ಫೆರಾರಿ 12ಸಿಲಿಂಡ್ರಿ ವಿಶೇಷತೆಗಳು
ಭಾರತದಲ್ಲಿ ಫೆರಾರಿ 12ಸಿಲಿಂಡ್ರಿ ಮಾಡೆಲ್ನ ಎಕ್ಸ್-ಶೋರೂಂ ಬೆಲೆ 8.5 ಕೋಟಿ ರೂಪಾಯಿಯಿಂದ ಶುರುವಾಗುತ್ತೆ. ತೆರಿಗೆ ಮತ್ತು ಇತರೆ ಶುಲ್ಕಗಳೆಲ್ಲಾ ಸೇರಿದ್ರೆ, ಆನ್-ರೋಡ್ ಬೆಲೆ ಸುಮಾರು 10 ಕೋಟಿ ರೂಪಾಯಿ ಆಗುತ್ತೆ. ಈ ಐಷಾರಾಮಿ ಕಾರು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ.ಗಿಂತ ಹೆಚ್ಚು. 6.5-ಲೀಟರ್ V12 ಇಂಜಿನ್ ಈ ಕಾರಿಗೆ ಶಕ್ತಿ ನೀಡುತ್ತದೆ. ಅತ್ಯಾಧುನಿಕ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಐಷಾರಾಮಿ ಇಂಟೀರಿಯರ್ ಇದರ ಮತ್ತೊಂದು ಆಕರ್ಷಣೆ.
ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿರ್ಣಾಯಕ ಹಂತಗಳಲ್ಲಿ ಮಿಂಚಿದ್ದ ಹಾರ್ದಿಕ್, ಈಗ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಾರ್ದಿಕ್ ಬಳಿ ಈಗಾಗಲೇ ಸುಮಾರು 8 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನನ್, 5 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ, 4 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಮತ್ತು 70-80 ಲಕ್ಷ ರೂ. ಬೆಲೆಯ ಆಡಿ ಎ6 ಕಾರುಗಳಿವೆ. ಈ ಹಿಂದೆ, ಅವರು ತಮ್ಮ ಮೊದಲ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಮಗನಿಗೂ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಹಾರ್ದಿಕ್ ಪಾಂಡ್ಯ ಮುಂದಿದೆ ದೊಡ್ಡ ಸವಾಲು:
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಇದೀಗ 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗಿದ್ದಾರೆ. 2026ರ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು 2021ರ ಬಳಿಕ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಮುಂಬೈ ಇಂಡಿಯನ್ಸ್ಗೆ ಕಪ್ ಗೆಲ್ಲಿಸಿಕೊಡಬೇಕಾದ ಮಹತ್ವದ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಮುಂದಿದೆ. ಗುಜರಾತ್ ಟೈಟಾನ್ಸ್ನಿಂದ ಪಾಂಡ್ಯ ಕರೆತಂದು ರೋಹಿತ್ ಶರ್ಮಾ ಕೆಳಗಿಳಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕರನ್ನಾಗಿ ನೇಮಿಸಲಾಗಿದೆ. ಹೀಗಿದ್ದೂ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಹೊಸ ಹುರುಪಿನಲ್ಲಿರುವ ಹಾರ್ದಿಕ್ ಪಾಂಡ್ಯ, ಈ ಬಾರಿಯಾದರೂ ಮುಂಬೈ ಇಂಡಿಯನ್ಸ್ಗೆ ಟ್ರೋಫಿ ಗೆಲ್ಲಿಸಿಕೊಡುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.


