ಮೊದಲಿಗೆ ಕಾಶ್ಮೀರ, ಬಳಿಕ ಇಡೀ ಭಾರತದ ಮೇಲೆ ಇಸ್ಲಾಂ ಪಡೆಯಿಂದ ದಾಳಿ; ಅಖ್ತರ್ ಹೇಳಿಕೆ ವೈರಲ್
ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಹಿಂದೆ ಭಾರತ ವಿರುದ್ದ ಹೇಳಿದ್ದಾರೆ ಎನ್ನಲಾದ ಮಾತಿನ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.25): ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದೇ ಖ್ಯಾತರಾದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಅವರು ತಮ್ಮ ಇಸ್ಲಾಂ ಪಡೆಗಳು ಭಾರತವನ್ನು ಒಂದಲ್ಲಾ ಒಂದು ದಿನ ವಶಕ್ಕೆ ಪಡೆಯಲಿವೆ ಎಂದು ನೀಡಿರುವ ಹಳೇ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.
ಸಮಾ ಟೀವಿ ಎಂಬ ವಾಹಿನಿಗೆ ನೀಡಲಾದ ಸಂದರ್ಶನದಲ್ಲಿ ನಮ್ಮ ಧರ್ಮಗ್ರಂಥದಲ್ಲಿ ಘಝ್ವಾ ಇ ಹಿಂದ್(ಧರ್ಮ ಯುದ್ಧ) ನಡೆಯಲಿದೆ. ಪಾಕಿಸ್ತಾನದ ಅಟ್ಟೋಕ್ನಲ್ಲಿರುವ ನದಿಯ ನೀರು ರಕ್ತದಿಂದ ತುಂಬಿ ಹರಿಯಲಿದೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕಾರ ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ಸೇರಿದಂತೆ ಇನ್ನಿತರ ಇಸ್ಲಾಂ ದೇಶಗಳ ಪಡೆಗಳು ಅಟ್ಟೋಕ್ಗೆ ಬರಲಿವೆ. ಆ ಎಲ್ಲಾ ಪಡೆಗಳು ಒಟ್ಟುಗೂಡಿ ಮೊದಲಿಗೆ ಕಾಶ್ಮೀರವನ್ನು ಗೆಲ್ಲುತ್ತವೆ. ಕೊನೆಗೆ ಇಡೀ ಭಾರತವನ್ನು ವಶಪಡಿಸಿಕೊಳ್ಳುತ್ತವೆ ಎಂದಿದ್ದಾರೆ. ಭಾರತದಲ್ಲಿರುವ ಅಖ್ತರ್ ಅಭಿಮಾನಿಗಳಿಗೆ ಈ ಹೇಳಿಕೆ ಆಘಾತ ಮೂಡಿಸಿದೆ.
ವೇಗವಾಗಿ ಬೌಲಿಂಗ್ ಮಾಡಲು ನಾನ್ಯಾವತ್ತು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ; ಅಖ್ತರ್
ಈ ಹಿಂದೆ ದಿನೇಶ್ ಕನೇರಿಯಾ ಅವರು ಹಿಂದೂ ಎಂಬ ಕಾರಣಕ್ಕೆ ಪಾಕ್ ಆಟಗಾರರು ಅವರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ತನ್ಮೂಲಕ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಧರ್ಮಾಂಧತೆಯಲ್ಲಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದ ಅಖ್ತರ್ ಅವರಿಗೆ ಭಾರತದಲ್ಲೂ ಹಲವು ಅಭಿಮಾನಿಗಳಿದ್ದಾರೆ. ಗುರುವಾರ ವೈರಲ್ ಆಗಿರುವ ಅಖ್ತರ್ ಅವರ ಈ ವಿಡಿಯೋ ಭಾರತದಲ್ಲಿರುವ ಅವರ ಕ್ರೀಡಾಭಿಮಾನಿಗಳಿಗೆ ಆಘಾತ ಮೂಡಿಸಿದೆ.