ಧೋನಿ ಮೇಲೆ ದ್ರಾವಿಡ್ ಸಿಟ್ಟಾಗಿದ್ದರು: ಗುಟ್ಟು ಬಿಚ್ಚಿಟ್ಟ ವಿರೇಂದ್ರ ಸೆಹ್ವಾಗ್
ಶಾಂತ ಸ್ವಭಾವದ ರಾಹುಲ್ ದ್ರಾವಿಡ್ ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.12): ಕ್ರೆಡಿಟ್ ಕಾರ್ಡ್ವೊಂದರ ಜಾಹೀರಾತಿನಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಕ್ರಿಕೆಟ್ನಲ್ಲಿ ತಾಳ್ಮೆಗೆ ಮತ್ತೊಂದು ಹೆಸರು ಎನಿಸಿಕೊಂಡಿರುವ ದ್ರಾವಿಡ್ರನ್ನು ಆ ರೀತಿ ನೋಡಿದ ಅಭಿಮಾನಿಗಳು ಅವರಿಗೂ ಸಿಟ್ಟು ಬರುತ್ತಾ ಎಂದು ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಕ್ರಿಕೆಟ್ ವೆಬ್ಸೈಟ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದು, ತಾವು ದ್ರಾವಿಡ್ ಸಿಟ್ಟು ಮಾಡಿಕೊಂಡಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ.
ಇಂದಿರಾ ನಗರ ಗೂಂಡಾ: ದ್ರಾವಿಡ್ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!
‘2006ರ ಪಾಕಿಸ್ತಾನ ಪ್ರವಾಸದ ವೇಳೆ ಎಂ.ಎಸ್.ಧೋನಿ ಸುಲಭವಾಗಿ ಕ್ಯಾಚಿತ್ತು ಔಟಾದರು. ಪೆವಿಲಿಯನ್ಗೆ ವಾಪಸ್ ಬರುತ್ತಿದ್ದಂತೆ ಧೋನಿಗೆ ಇಂಗ್ಲಿಷ್ನಲ್ಲಿ ದ್ರಾವಿಡ್ ಹಿಗ್ಗಾಮುಗ್ಗಾ ಬೈದರು. ಅವರ ಬೈದ ಅರ್ಧಕ್ಕರ್ಧ ಪದಗಳು ಅರ್ಥವೇ ಆಗಲಿಲ್ಲ’ ಎಂದು ಸೆಹ್ವಾಗ್ ಹೇಳಿದ್ದಾರೆ. ಈ ರೀತಿನಾ ಆಡೋದು? ನೀನು ಪಂದ್ಯವನ್ನು ಫಿನಿಶ್ ಮಾಡಬೇಕಿತ್ತು ಎಂದೆಲ್ಲ ಧೋನಿ ಮೇಲೆ ರಾಹುಲ್ ದ್ರಾವಿಡ್ ಕಿಡಿಕಾರಿದ್ದರು. ದ್ರಾವಿಡ್ ಹೇಳಿದ ಅರ್ಧಕರ್ಧ ಮಾತುಗಳು ನನಗೆ ಅರ್ಥವೇ ಆಗಿರಲಿಲ್ಲ ಎಂದು ಸೆಹ್ವಾಗ್ ನಗೆ ಚಟಾಕಿ ಹಾರಿಸಿದ್ದಾರೆ.