ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ.
ಲಂಡನ್ (ಜು.01) ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಆರಂಭಗೊಂಡಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಎಲ್ಲರ ಕುತೂಹಲವಿದ್ದ ವೈಭವ್ ಸೂರ್ಯವಂಶಿ ಮತ್ತೆ ಅವಕಾಶಕ್ಕಾಗಿ ಬೆಂಚ್ ಕಾಯಬೇಕಿದೆ. ವೈಭವ್ ಸೂರ್ಯವಂಶಿಗೆ ಸ್ಥಾನ ನೀಡದಿರುವ ಕುರಿತು ಆಕ್ರೋಶಗಳು ಹೆಚ್ಚಾಗುತ್ತಿದೆ. ಐರ್ಲೆಂಡ್ ವಿರುದ್ದದ ಸೋಲಿನ ಬಳಿಕವೂ ಟೀಂ ಇಂಡಿಯಾ ಪಾಠ ಕಲಿತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ವರುಣಚಕ್ರವರ್ತಿ ಕಮ್ಬ್ಯಾಕ್ , ಸೂರ್ಯವಂಶಿಗೆ ನಿರಾಸೆ
ಟೀಂ ಇಂಡಿಯಾ ಟಿ20 ತಂಡಕ್ಕೆ ವರುಣ್ ಚಕ್ರವರ್ತಿ ಮರಳಿದ್ದಾರೆ. ಈ ಮೂಲಕ ಮೊದಲ ಪಂದ್ಯಕ್ಕೆ ಭಾರತ ಮೂವರು ಸ್ಪಿನ್ನರ್, ಆಲ್ರೌಂಡರ್ ಸ್ಥಾನದಲ್ಲಿ ಅಕ್ಸರ್ ಪಟೇಲ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ. ಈ ಮಹತ್ತರ ಬದಲಾವಣೆಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಹೇಳದಂತೆ ವೈಭವ್ ಅವಕಾಶಕ್ಕಾಗಿ ಕಾಯಬೇಕಿದೆ.
ಭಾರತದ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ
ಇಂಗ್ಲೆಂಡ್ ಪ್ಲೇಯಿಂಗ್ 11
ಫಿಲಪ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ (ನಾಯಕ), ಜೆಕಬ್ ಬೆಥಲ್, ಟಾಮ್ ಬ್ಯಾಂಟನ್, ಸ್ಯಾಮ್ ಕುರನ್, ವಿಲ್ ಜ್ಯಾಕ್ಸ್, ಲಿಯಾಮ್ ಡವ್ಸನ್, ಸಕೀಬ್ ಮೊಹಮ್ಮದ್, ಅದಿಲ್ ರಶೀದ್, ಲ್ಯೂಕ್ ವೂಡ್
ವೈಭವ್ ಕುರಿತು ಸಾಲು ಸಾಲು ಪ್ರಶ್ನೆ
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕಿತ್ತು. ಅದು ಉತ್ತಮ ವೇದಿಕೆಯಾಗಿತ್ತು. ಅಲ್ಲಿ ಅವಕಾಶ ನೀಡಲಿಲ್ಲ, ಇದೀಗ ಇಂಗ್ಲೆಂಡ್ ವಿರುದ್ಧವೂ ಅವಕಾಶ ನೀಡಲಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಕ್ರಿಕೆಟಿಗನ ಆಯ್ಕೆ ಮಾಡಿ ಬೆಂಚ್ ಕಾಯಿಸುವುದು ಸರಿಯಲ್ಲ ಅನ್ನೋ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗರು , ಮಾಜಿ ಆಯ್ಕೆ ಸಮಿತಿ ಸದಸ್ಯರು ಸೇರಿದಂತೆ ಹಲವರು ವ್ಯಕ್ತಪಡಿಸಿದ್ದಾರೆ. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರವಾಗಿ ಉತ್ತಮ ಬ್ಯಾಟಿಂಗ್ ಮಾಡಲಿದ್ದಾರೆ. ಇದರಲ್ಲಿ ಅನುಮಾನವಿಲ್ಲ ಎಂಬ ವಿಶ್ವಾಸದ ಮಾತುಗಳನ್ನು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು.


