ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ನಲ್ಲಿ ಸೆಣಸಾಡಲಿವೆ. ಈ ಬಾರಿ ರವೀಂದ್ರ ಜಡೇಜಾ ರಾಜಸ್ಥಾನ ಪರ ಆಡಿದರೆ, ಸಂಜು ಸ್ಯಾಮ್ಸನ್ ಚೆನ್ನೈ ಪರ ಕಣಕ್ಕಿಳಿಯಲಿದ್ದು, ಇದು ಕುತೂಹಲ ಕೆರಳಿಸಿದೆ. ಗಾಯದ ಸಮಸ್ಯೆಯಿಂದಾಗಿ ಎಂ.ಎಸ್.ಧೋನಿ ಹಾಗೂ ಡೆವಾಲ್ಡ್ ಬ್ರೆವಿಸ್ ಚೆನ್ನೈ ತಂಡಕ್ಕೆ ಅಲಭ್ಯರಾಗಿದ್ದಾರೆ.
ಗುವಾಹಟಿ: 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಐಪಿಎಲ್ನಲ್ಲಿ ಶುಭಾರಂಭಕ್ಕೆ ಕಾಯುತ್ತಿದ್ದು, ಸೋಮವಾರ ಪರಸ್ಪರ ಸೆಣಸಾಡಲಿವೆ. ಈ ಪಂದ್ಯ ಕೆಲ ಆಟಗಾರರ ಕಾರಣಕ್ಕೆ ಹೆಚ್ಚಿನ ಮಹತ್ವ ಸೃಷ್ಟಿಸಿದೆ.
ದಶಕಕ್ಕೂ ಹೆಚ್ಚು ಕಾಲ ರಾಜಸ್ಥಾನ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈ ಪರ ಬ್ಯಾಟ್ ಬೀಸಲಿದ್ದಾರೆ. ಈವರೆಗೂ ಚೆನ್ನೈನ ಭಾಗವಾಗಿದ್ದ, ತಂಡಕ್ಕೆ ಹಲವು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದ ರವೀಂದ್ರ ಜಡೇಜಾ ಈ ಸಲ ರಾಜಸ್ಥಾನ ಪರ ಆಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಎಲ್ಲರ ನಿಗಾ ಇದ್ದು, ತಮ್ಮ ಹಳೆ ತಂಡದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದುನೋಡಬೇಕಿದೆ.
ಇನ್ನು, ಋತುರಾಜ್ ನಾಯಕತ್ವದ ಚೆನ್ನೈ ತಂಡದಲ್ಲಿ ಆಯುಶ್ ಮ್ಹಾತ್ರೆ, ಉರ್ವಿಲ್ ಪಟೇಲ್, ಪ್ರಶಾಂತ್ ವೀರ್, ಸರ್ಫರಾಜ್ ಖಾನ್, ಕಾರ್ತಿಕ್ ಶರ್ಮಾ ಸೇರಿದಂತೆ ಭಾರತದ ಯುವ ಪ್ರತಿಭೆಗಳಿದ್ದಾರೆ. ಹೀಗಾಗಿ ತಂಡಕ್ಕೆ ಆಯ್ಕೆ ಗೊಂದಲ ಎದುರಾಗಬಹುದು. ಮತ್ತೊಂದೆಡೆ ರಾಜಸ್ಥಾನವನ್ನು ರಿಯಾನ್ ಪರಾಗ್ ಮುನ್ನಡೆಸಲಿದ್ದು, ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಹೆಟ್ಮೇಯರ್, ಜಡೇಜಾ, ಆರ್ಚರ್ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.
ಪಂದ್ಯ ಆರಂಭ: ಸಂಜೆ 7.30
ತಂಡದ ಜೊತೆ ಪ್ರಯಾಣಿಸದ ಧೋನಿ
ಸ್ನಾಯುಸೆಳೆತಕ್ಕೆ ಒಳಗಾಗಿರುವ ಚೆನ್ನೈನ ಹಿರಿಯ ಆಟಗಾರ ಎಂ.ಎಸ್.ಧೋನಿ ತಂಡದ ಜೊತೆ ಗುವಾಹಟಿಗೆ ಪ್ರಯಾಣಿಸಲಿಲ್ಲ. ಅವರು ಚೆನ್ನೈನಲ್ಲೇ ಉಳಿದುಕೊಳ್ಳಲಿದ್ದು, ಪುನಶ್ಚೇತನ ಶಿಬಿರದಲ್ಲಿರಲಿದ್ದಾರೆ. ಸಂಪೂರ್ಣ ಫಿಟ್ ಆದ ಬಳಿಕವೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಬ್ರೆವಿಸ್ಗೆ ಗಾಯ, ಸಿಎಸ್ಕೆಗೆ ಹಿನ್ನಡೆ
ದ.ಆಫ್ರಿಕಾದ ತಾರಾ ಕ್ರಿಕೆಟಿಗ ಡೆವಾಲ್ಡ್ ಬ್ರೆವಿಸ್ ಕೂಡಾ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ರಾಜಸ್ಥಾನ ಸೇರಿದಂತೆ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿಕೊಂಡಿದ್ದಾರೆ. ಅವರು ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾಗಿ ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ.

