* ಬಂಗಾಳ ಕ್ರಿಕೆಟ್‌ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಪಡೆದ ವೃದ್ಧಿಮಾನ್ ಸಾಹ* ಸಿಎಬಿಯೊಂದಿಗೆ ಮುನಿಸಿಕೊಂಡಿದ್ದ ವಿಕೆಟ್‌ ಕೀಪರ್ ಬ್ಯಾಟರ್* ಬಂಗಾಳ ತಂಡ ತೊರೆದು ತ್ರಿಪುರ ತಂಡದತ್ತ ಮುಖ ಮಾಡಿದ್ರಾ ಸಾಹ?

ಕೋಲ್ಕತಾ(ಜು.03): ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ ಬಂಗಾಳ ತೊರೆದಿದ್ದು, ಬಂಗಾಳ ಕ್ರಿಕೆಟ್‌ ಸಂಸ್ಥೆ(ಸಿಎಬಿ)ಯು ಸಾಹ ಅವರಿಗೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಿದೆ. 15 ವರ್ಷಗಳ ಕಾಲ ದೇಸಿ ಕ್ರಿಕೆಟ್‌ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದ ಸಾಹ ಮುಂದೆ ತ್ರಿಪುರಾ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ(ಸಿಎಬಿ) ಮುನಿಸಿಕೊಂಡಿದ್ದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ ತ್ರಿಪುರಾ ರಾಜ್ಯದ ಪರ ಆಡಲು ತಯಾರಿ ನಡೆಸುತ್ತಿದ್ದಾರೆ. ಅವರು ತಂಡದ ಪರ ಆಡುವ ಜೊತೆ ಸಲಹೆಗಾರನ ಜವಾಬ್ದಾರಿಯನ್ನೂ ವಹಿಸಲು ಬಯಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

ಕೆಲ ತಿಂಗಳುಗಳ ಹಿಂದೆ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡದಿಂದ ಕೈಬಿಟ್ಟಾಗ ಸಿಟ್ಟಾಗಿದ್ದ ವೃದ್ಧಿಮಾನ್ ಸಾಹ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಬಿ ಕಾರ‍್ಯದರ್ಶಿ ಸಾಹ ವಿರುದ್ಧ ಕಿಡಿಕಾರಿದ್ದರು. ಇದರಿಂದ ಕೆರಳಿದ್ದ ಸಾಹ, ತಮ್ಮ ಬಳಿ ಕಾರ‍್ಯದರ್ಶಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಇತ್ತೀಚೆಗೆ ರಣಜಿ ತಂಡಕ್ಕೆ ಸಾಹ ಆಯ್ಕೆ ವಿಚಾರದಲ್ಲಿ ಸಾಹ ಹಾಗೂ ಸಿಎಬಿ ನಡುವೆ ಬಿಕ್ಕಟ್ಟು ಮೂಡಿತ್ತು. ಬಳಿಕ ಸಾಹ ತಮಗೆ ಎನ್‌ಒಸಿ ಕೊಟ್ಟರೆ ಬೇರೆ ರಾಜ್ಯಗಳ ಪರ ಆಡುತ್ತೇನೆ ಎಂದಿದ್ದರು. 

'ವೃದ್ದಿಮಾನ್ ಸಾಹ ಮನವಿ ಮಾಡಿದಂತೆ ಅವರಿಗೆ ಎನ್‌ಒಸಿ ನೀಡಲಾಗಿದೆ. ಅವರ ಭವಿಷ್ಯಕ್ಕೆ ಶುಭ ಹಾರೈಕೆಗಳು’ ಎಂದು ಸಿಎಬಿ ತಿಳಿಸಿದೆ. 2007ರಲ್ಲಿ ಬಂಗಾಳ ತಂಡ ಸೇರಿಕೊಂಡಿದ್ದ ಸಾಹ ಈವರೆಗೆ 122 ಪ್ರಥಮ ದರ್ಜೆ, 102 ಲಿಸ್ಟ್‌ ‘ಎ’ ಪಂದ್ಯಳನ್ನಾಡಿದ್ದಾರೆ.

Ranji Trophy ಅಂದು ಬೇಡವಾಗಿದ್ದ ವೃದ್ದಿಮಾನ್ ಸಾಹ ಇಂದು ಬೆಂಗಾಲ್‌ಗೆ ಬೇಕಾಗಿದ್ದೇಕೆ..?

Scroll to load tweet…

ಮಿಥಾಲಿಯನ್ನು ಅಭಿನಂದಿಸಿ ಪತ್ರ ಬರೆದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ ಅವರು ಕ್ರಿಕೆಟ್‌ಗೆ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರವನ್ನು ಮಿಥಾಲಿಗೆ ಕಳುಹಿಸಿಕೊಟ್ಟಿದ್ದು, ಪ್ರಧಾನಿಯ ಪ್ರಶಂಸೆಯ ಮಾತುಗಳನ್ನು ಕೇಳಿ ಆನಂದದಲ್ಲಿ ತೇಲಾಡುತ್ತಿದ್ದೇನೆ ಎಂದು ಮಿಥಾಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಭಾರತೀಯ ಕ್ರೀಡೆಗೆ ನನ್ನ ಕೊಡುಗೆಗಳ ಬಗ್ಗೆ ಪ್ರಧಾನಿಯ ಮಾತುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನಗೆ ಸಿಕ್ಕ ದೊಡ್ಡ ಗೌರವ’ ಎಂದಿದ್ದಾರೆ.

ಇನ್ನು ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಮಿಥಾಲಿ ರಾಜ್ ಅವರನ್ನು ಗುಣಗಾನ ಮಾಡಿದ್ದರು. ‘ಮಿಥಾಲಿ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ. ಅವರು ಭಾರತದ ಅತ್ಯಂತ ಶ್ರೇಷ್ಠ ಕ್ರಿಕೆಟರ್‌ ಆಗಿದ್ದರು. ಅವರ ನಿವೃತ್ತಿ ಎಷ್ಟೋ ಕ್ರೀಡಾಭಿಮಾನಿಗಳಿಗೆ ಭಾವನಾತ್ಮಕವಾಗಿ ನೋವು ತರಿಸಿದೆ. ಮಿಥಾಲಿ ಅದ್ಭುತ ಕ್ರಿಕೆಟರ್‌ ಮಾತ್ರವಲ್ಲ, ಸಾವಿರಾರು ಮಂದಿಗೆ ಸ್ಫೂರ್ತಿಯೂ ಆಗಿದ್ದರು’ ಎಂದು ಶ್ಲಾಘಿಸಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದರು.

ಮಿಥಾಲಿ ರಾಜ್ ಭಾರತ ಮಹಿಳಾ ಕ್ರಿಕೆಟ್ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಇನ್ನು 89 ಟಿ20 ಪಂದ್ಯಗಳಿಂದ ಮಿಥಾಲಿ ರಾಜ್ 2,364 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಭಾರತ ಪರ 12 ಟೆಸ್ಟ್ ಪಂದ್ಯಗಳನ್ನಾಡಿ 699 ರನ್ ಬಾರಿಸಿದ್ದರು. ಎರಡು ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಥಾಲಿ 7 ಏಕದಿನ ಹಾಗೂ ಒಂದು ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ.