ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕಾರು ಅಪಘಾತಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಎಡಗೈ ಬ್ಯಾಟರ್ ಪಂತ್ಪಂತ್ ಕಾರು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ವೈರಲ್

ನವದೆಹಲಿ(ಡಿ.30): ಭಾರತ ಕ್ರಿಕೆಟ್ ತಂಡದ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಕಾರು ಅಫಘಾತದ ಸಿಸಿಟಿವಿ ವಿಡಿಯೋವೀಗ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

25 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಮರ್ಸಿಡೀಸ್-ಎಎಂಜಿ ಜಿಎಲ್‌ಇ43(Mercedes-AMG GLE43) ಕಾರಿನಲ್ಲಿ ಡೆಲ್ಲಿಯಿಂದ ತಮ್ಮ ಪೋಷಕರನ್ನು ಭೇಟಿಯಾಗಲು ಉತ್ತರಖಂಡ್‌ನತ್ತ ಒಬ್ಬರೇ ಪ್ರಯಾಣ ಬೆಳೆಸುತ್ತಿದ್ದರು. ಡೆಲ್ಲಿ ಹಾಗೂ ಡೆಹ್ರಾಡೂನ್ ರಸ್ತೆಯ ಹಮ್ಮದ್‌ಪುರ್ ಝಲ್‌ನ ನರ್ಸನ್ ಬಾರ್ಡರ್‌ನ ರೋರ್ಕಿಯಲ್ಲಿ ರಸ್ತೆ ವಿಭಜಕ್ಕೆ, ರಿಷಭ್ ಪಂತ್ ಅವರ ಕಾರು ಡಿಕ್ಕಿ ಹೊಡೆದಿದೆ. ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ನಿಯಂತ್ರಣ ತಪ್ಪಿದ ಕಾರು, ರೋಡ್ ಡಿವೈಡರ್‌ಗೆ ಅಪ್ಪಳಿಸಿದೆ. ಪರಿಣಾಮ ಕಾರು ಪಲ್ಟಿಹೊಡೆದು ಬಿದ್ದಿದೆ. ಇದರ ಬೆನ್ನಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿದೆ.

ರಿಷಭ್ ಪಂತ್, ಉತ್ತರಖಂಡ್‌ನ ರೂರ್ಕಿಯಲ್ಲಿ ನೆಲೆಸಿರುವ ತಮ್ಮ ತಾಯಿ ಹಾಗೂ ಕುಟುಂಬದವರನ್ನು ಸರ್ಪ್ರೈಸ್‌ ಆಗಿ ಭೇಟಿ ಮಾಡಿ ಹೊಸ ವರ್ಷ ಆಚರಿಸಲು ಇಂದು ಮುಂಜಾನೆಯೇ ಡೆಲ್ಲಿಯಿಂದ ಉತ್ತರಖಂಡದತ್ತ ಒಬ್ಬರೇ ತಮ್ಮ ಐಶಾರಾಮಿ ಮರ್ಸಿಡೀಸ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಮನೆಗೆ ತಲುಪಬೇಕಿದ್ದ ರಿಷಭ್ ಪಂತ್, ದುರಾದೃಷ್ಟವಶಾತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೀಗಿತ್ತು ನೋಡಿ ರಿಷಭ್ ಪಂತ್ ಕಾರು ಅಪಘಾತದ ದೃಶ್ಯ:

Scroll to load tweet…

ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ಅವರಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿಗೆ ಬೆಂಕಿ ತಗುಲುತ್ತಿದ್ದಂತೆಯೇ ಪ್ರಾಣಾಪಾಯದಿಂದ ಪಾರಾಗಲು ರಿಷಭ್ ಪಂತ್, ಕಾರಿನ ಗಾಜು ಒಡೆದು ಹೊರಬಂದಿದ್ದಾರೆ. ಒಂದು ವೇಳೆ ಕಾರಿನಲ್ಲೇ ಪಂತ್ ಉಳಿದಿದ್ದರೇ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿತ್ತು. ಇದರ ಜತೆಗೆ ಮರ್ಸಿಡೀಸ್ ಕಾರು ಸಾಕಷ್ಟು ಉತ್ತಮ ಸುರಕ್ಷತಾ ಸೌಲಭ್ಯಗಳನ್ನು ಹೊಂದಿದ್ದರಿಂದ ಪಂತ್ ಬಚಾವಾಗಿದ್ದಾರೆ ಎನ್ನಲಾಗುತ್ತಿದೆ.

Rishabh Pant: ಭೀಕರ ಅಪಘಾತದ ಹೊರತಾಗಿಯೂ ವಿಕೆಟ್ ಕೀಪರ್ ಪಂತ್ ಬಚಾವಾಗಿದ್ದು ಹೇಗೆ..?

ಮೊದಲಿಗೆ ಪಂತ್ ಅವರನ್ನು ಡೆಲ್ಲಿ ರಸ್ತೆಯಲ್ಲಿರುವ ಸಕ್ಷಮ್‌ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಥಮಿಕ ವರದಿಯ ಪ್ರಕಾರ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಂಕಾ ಎದುರಿನ ಸರಣಿಯಿಂದ ಹೊರಗುಳಿದಿದ್ದ ರಿಷಭ್ ಪಂತ್:

ಜನವರಿ 03ರಿಂದ ತವರಿನಲ್ಲಿ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಟಿ20 ಸರಣಿಯಿಂದ ರಿಷಭ್ ಪಂತ್ ಅವರು ಹೊರಗುಳಿದಿದ್ದರು. 3 ಪಂದ್ಯಗಳ ಟಿ20 ಸರಣಿಯು ಜನವರಿ 3, 5, 7ಕ್ಕೆ ನಡೆಯಲಿದ್ದು, ಏಕದಿನ ಸರಣಿಯ 3 ಪಂದ್ಯಗಳು 10, 12, 15ಕ್ಕೆ ನಿಗದಿಯಾಗಿದೆ. ಲಂಕಾ ಎದುರಿನ ಸರಣಿಗೆ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದೆಯೇ, ಗಾಯಗೊಂಡಿದ್ದಾರೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎನ್ನುವುದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ಡೆಲ್ಲಿ ಮೂಲದ ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್, ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆದರೆ ಇದಾದ ಬಳಿಕ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ತಂಡ ಕೂಡಿಕೊಂಡಿದ್ದರು.