ಕಳೆದ ಜೂನ್ 4ರಂದು ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಬಲಿಯಾದ ದುರ್ಘಟನೆ ಬಳಿಕ ಇದೇ ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ವಾಪಸಾಗುವ ಸಮಯ ಸನ್ನಿಹಿತಗೊಂಡಿದೆ.
ಬೆಂಗಳೂರು (ಡಿ.14): ಕಳೆದ ಜೂನ್ 4ರಂದು ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಬಲಿಯಾದ ದುರ್ಘಟನೆ ಬಳಿಕ ಇದೇ ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ವಾಪಸಾಗುವ ಸಮಯ ಸನ್ನಿಹಿತಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್ ವಾಪಸ್ ತರುವುದಾಗಿ ಭರವಸೆ ನೀಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿರುವ ವೆಂಕಟೇಶ್ ಪ್ರಸಾದ್, ಕ್ರಿಕೆಟ್ ಪುನಾರಂಭಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಡಿ.24ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕೆಲ ಗುಂಪುಗಳ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ದೆಹಲಿ ತಂಡ ಸಹ ತನ್ನ ಪಂದ್ಯಗಳನ್ನು ಬೆಂಗಳೂರಲ್ಲಿ ಆಡಲಿದ್ದು, ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣ ಸಹಜವಾಗಿಯೇ ಎಲ್ಲರ ಕಣ್ಣು ದೆಹಲಿ ಪಂದ್ಯಗಳ ಮೇಲಿದೆ. ಬಿಸಿಸಿಐ ವೇಳಾಪಟ್ಟಿ ಪ್ರಕಾರ, ದೆಹಲಿ ತಂಡದ ಬಹುತೇಕ ಪಂದ್ಯಗಳು ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆಯಬೇಕಿದೆ. ಆದರೆ, ಆ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಕೆಎಸ್ಸಿಎ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿಯ ಆಟವನ್ನು ವೀಕ್ಷಿಸಲು ಕ್ರೀಡಾಂಗಣದ ಒಂದೆರಡು ಸ್ಟ್ಯಾಂಡ್ಗಳನ್ನೂ ತೆರೆಯಲು ಕೆಎಸ್ಸಿಎ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತಿ ಪಂದ್ಯಕ್ಕೂ 2500-3000 ಮಂದಿಗೆ ಆಸನ ವ್ಯವಸ್ಥೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವಿಜಯ್ ಹಜಾರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದರೆ, ಜೂ.4ರ ಕಾಲ್ತುಳಿತ ದುರ್ಘಟನೆ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಪಂದ್ಯವೊಂದು ಆಯೋಜನೆಗೊಂಡಂತಾಗಲಿದೆ. ಆ ಘಟನೆ ಬಳಿಕ ಬೆಂಗಳೂರಿಂದ ಮಹಾರಾಜ ಟ್ರೋಫಿ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ 5 ಪಂದ್ಯಗಳು ಸೇರಿ ಹಲವು ಪ್ರತಿಷ್ಠಿತ ಟೂರ್ನಿಗಳ ಆತಿಥ್ಯ ಕೈತಪ್ಪಿದೆ.
ಐಪಿಎಲ್ ಸಹ ಆಯೋಜನೆ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಕಳೆದ ವಾರವಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್ ಸ್ಥಳಾಂತರಗೊಳ್ಳಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಬಳಿಕ ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್ಸಿಎ ನಿಯೋಗ ಬೆಳಗಾವಿಗೆ ತೆರಳಿ ಸಿಎಂ, ಡಿಸಿಎಂರನ್ನು ಭೇಟಿ ಮಾಡಿ ಕ್ರಿಕೆಟ್ ಮರಳಿ ಆಯೋಜನೆ ಮಾಡಲು ಅನುಮತಿ ಕೋರಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪುನಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಕೆಎಸ್ಸಿಎ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದೆ.


