17 ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ..!
ಭಾರತ ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟ
ಗ್ರೇಡ್ 'ಎ' ನಲ್ಲಿ ಮೂವರು ಆಟಗಾರ್ತಿಯರಿಗೆ ಸ್ಥಾನ
ನವದೆಹಲಿ(ಏ.28): ಭಾರತ ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಗುರುವಾರ ಬಿಸಿಸಿಐ ಪ್ರಕಟಿಸಿದ್ದು, 17 ಆಟಗಾರ್ತಿಯರಿಗೆ ಸ್ಥಾನ ದೊರೆತಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧನಾ, ದೀಪ್ತಿ ಶರ್ಮಾಗೆ ‘ಎ’ ದರ್ಜೆಯಲ್ಲಿ ಸ್ಥಾನ ಸಿಕ್ಕಿದ್ದು, ವಾರ್ಷಿಕ 50 ಲಕ್ಷ ರು. ವೇತನ ಪಡೆಯಲಿದ್ದಾರೆ.
ಇನ್ನು ಜೆಮಿಮಾ ರೋಡ್ರಿಗ್ಸ್, ರಿಚಾ ಘೋಷ್ ‘ಬಿ’ ದರ್ಜೆಗೆ ಬಡ್ತಿ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ. ಇದೇ ವೇಳೆ ಕಳೆದ ವರ್ಷ ‘ಎ’ ದರ್ಜೆಯಲ್ಲಿದ್ದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಗುತ್ತಿಗೆ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ. ‘ಬಿ’ ದರ್ಜೆಯಲ್ಲಿರುವ ಆಟಗಾರ್ತಿಯರಿಗೆ ತಲಾ 30 ಲಕ್ಷ ರು., ‘ಸಿ’ ದರ್ಜೆಯಲ್ಲಿರುವ ಆಟಗಾರ್ತಿಯರಿಗೆ ತಲಾ 10 ಲಕ್ಷ ರುಪಾಯಿ ವೇತನ ಸಿಗಲಿದೆ.
ಕೇಂದ್ರ ಗುತ್ತಿಗೆ ಪಡೆದ ಆಟಗಾರ್ತಿಯರ ವಿವರ ಹೀಗಿದೆ ನೋಡಿ:
ಗ್ರೇಡ್ ಎ: ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧನಾ ಹಾಗೂ ದೀಪ್ತಿ ಶರ್ಮಾ
ಗ್ರೇಡ್ ಬಿ: ರೇಣುಕಾ ಠಾಕೂರ್, ಜೆಮಿಯಾ ರೋಡ್ರಿಗ್ಸ್, ಶಫಾಲಿ ವರ್ಮಾ, ರಿಚಾ ಘೋಷ್, ರಾಜೇಶ್ವರಿ ಗಾಯಕ್ವಾಡ್.
ಗ್ರೇಡ್ ಸಿ: ಮೆಘನಾ ಸಿಂಗ್, ದೇವಿಕಾ ವೈದ್ಯ, ಶಬ್ಬಿನೇನಿ ಮೆಘಾನಾ, ಅಂಜಲಿ ಶರ್ವಾನಿ, ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ.
ಏಕದಿನ ವಿಶ್ವಕಪ್: ನ್ಯೂಜಿಲೆಂಡ್ ತಂಡಕ್ಕೆ ಕೇನ್ ಮೆಂಟರ್?
ವೆಲ್ಲಿಂಗ್ಟನ್: ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ವೇಳೆಗೆ ಫಿಟ್ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರು ಫಿಟ್ ಆಗದಿದ್ದರೆ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ತಂಡದ ಕೋಚ್ ಗ್ಯಾರಿ ಸ್ಟೀಡ್ ಕೂಡಾ ಸುಳಿವು ನೀಡಿದ್ದು, ಮಹತ್ವದ ಟೂರ್ನಿಯಲ್ಲಿ ಕೇನ್ರನ್ನು ತಂಡದಿಂದ ಹೊರಗಿಡಲು ಇಷ್ಟವಿಲ್ಲ ಎಂದಿದ್ದಾರೆ. ಸದ್ಯ ಕೇನ್ ಪುನಶ್ಚೇತನ ಶಿಬಿರದಲ್ಲಿದ್ದಾರೆ.
IPL 2023: ರಾಯಲ್ಸ್ ಬೋನಿಗೆ ಬಿದ್ದ ಸೂಪರ್ ಕಿಂಗ್ಸ್!
ಟೆಸ್ಟ್ ವಿಶ್ವಕಪ್ ಫೈನಲ್ಗೆ 3 ಮೀಸಲು ಆಟಗಾರರು
ನವದೆಹಲಿ: ಜೂನ್ 7ರಿಂದ ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡಲಿರುವ ಭಾರತ ತಂಡಕ್ಕೆ ಮೂವರು ಮೀಸಲು ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಋುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಹಾಗೂ ಸರ್ಫರಾಜ್ ಖಾನ್ ಮೀಸಲು ಆಟಗಾರರಾಗಿ ತಂಡದೊಂದಿಗೆ ಇಂಗ್ಲೆಂಡ್ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಚಿಕಿತ್ಸೆಗೆ ಬೆಲ್ಜಿಯಂಗೆ ಹೋಗಿ ಬಂದ ಜೋಫ್ರಾ ಆರ್ಚರ್!
ಮುಂಬೈ: ಮುಂಬೈ ಇಂಡಿಯನ್ಸ್ನ ತಾರಾ ವೇಗಿ ಜೋಫ್ರಾ ಆರ್ಚರ್ 16ನೇ ಆವೃತ್ತಿ ಐಪಿಎಲ್ ನಡುವೆಯೇ ಬೆಲ್ಜಿಯಂಗೆ ತೆರಳಿ ಮೊಣಕೈ ಗಾಯಕ್ಕೆ ಚಿಕಿತ್ಸೆ ಪಡೆದಿದ್ದು, ಈಗ ತಂಡಕ್ಕೆ ಮರಳಿದ್ದಾರೆ. ಏ.2ರಂದು ಆರ್ಸಿಬಿ ವಿರುದ್ಧ ಆಡಿದ್ದ ಆರ್ಚರ್ ಬಳಿಕ ವಿದೇಶಕ್ಕೆ ಪ್ರಯಾಣಿಸಿದ್ದರು. ಹೀಗಾಗಿ 4 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೆ ಭಾರತಕ್ಕೆ ಮರಳಿ ಪಂಜಾಬ್ ವಿರುದ್ಧದ ಏ.22ರ ಪಂದ್ಯದಲ್ಲಿ ಅವರು ಆಡಿದ್ದು, ಬಳಿಕ ಗುಜರಾತ್ ಪಂದ್ಯಕ್ಕೆ ಮತ್ತೆ ಗೈರಾಗಿದ್ದರು. ಅವರು ಆಡಲು ಇನ್ನಷ್ಟೇ ಸಂಪೂರ್ಣ ಫಿಟ್ ಆಗಬೇಕಿದ್ದು, ಏ.30ರಂದು ರಾಜಸ್ಥಾನ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ.