ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರಾಗಿ ಗುಜರಾತ್ ಮಾಜಿ ಡಿಜಿಪಿ ನೇಮಕ
ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರನ್ನಾಗಿ ಗುಜರಾತ್ ಮಾಜಿ ಡಿಜಿಪಿಯನ್ನು ನೇಮಕ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.05): 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಗುಜರಾತ್ ಮಾಜಿ ಡಿಜಿಪಿ ಶಬೀರ್ ಹುಸೇನ್ ಶೇಕ್ದಾಮ್ ಖಂಡ್ವಾಲಾ ಅವರನ್ನು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಖಂಡ್ವಾಲಾ ಇದೀಗ ಏಪ್ರಿಲ್ 2018ರಿಂದ ಮಾರ್ಚ್ 2021ರವರೆಗೆ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರನ್ನಾಗಿ ಕಾರ್ಯನಿರ್ವಹಿಸಿದ್ದ ಅಜಿತ್ ಸಿಂಗ್ ಸ್ಥಾನವನ್ನು ತುಂಬಲಿದ್ದಾರೆ.
ಅಜಿತ್ ಸಿಂಗ್ ಇನ್ನೂ ಕೆಲವು ಕಾಲ ತಾವು ಭ್ರಷ್ಟಾಚಾರ ನಿಗ್ರಹ ಘಟಕದ ಅಧ್ಯಕ್ಷರಾಗಿ ಮುಂದುವರೆಯುತ್ತೇನೆಂದು ತಿಳಿಸಿದ್ದಾರೆಂದು ಹೇಳಲಾಗಿತ್ತು. ಆದರೆ ಇದೀಗ ಖಂಡ್ವಾಲಾ ತಮ್ಮ ನೇಮಕವನ್ನು ಖಚಿತಪಡಿಸಿದ್ದು, ಬಿಸಿಸಿಐ ಜತೆ ಕಾರ್ಯನಿರ್ವಹಿಸುವುದು ತಮಗೆ ಸಿಕ್ಕ ಗೌರವ. ಬಿಸಿಸಿಐ ಜಗತ್ತಿನ ಶ್ರೇಷ್ಠ ಕ್ರಿಕೆಟ್ ಮಂಡಳಿ ಎಂದು ಬಣ್ಣಿಸಿದ್ದಾರೆ.
IPL 2021: ಆರ್ಸಿಬಿಯ ಈ ತಂಡ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಬಹುದು..!
ಜಗತ್ತಿನ ಶ್ರೇಷ್ಠ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ ಜತೆ ಕೆಲಸ ಮಾಡುವುದು ನನಗೆ ಸಿಕ್ಕ ಅತಿದೊಡ್ಡ ಗೌರವ. ರಕ್ಷಣೆಯ ವಿಚಾರದಲ್ಲಿ ನಾನು ಎಷ್ಟೇ ಪರಿಣಿತನಾಗಿದ್ದರೂ ನನ್ನ ನೆಚ್ಚಿನ ಕ್ರೀಡೆಗೆ ನೆರವಾಗುವುದು ನನಗೆ ಖುಷಿ ನೀಡಲಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.