ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸಂಕಷ್ಟದಲ್ಲಿದೆ. ಶ್ರೀಲಂಕಾ ವಿರುದ್ದದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 173 ರನ್ ಸಿಡಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಒತ್ತಡಕ್ಕೆ ಸಿಲುಕಿದೆ.

ದುಬೈ(ಸೆ.06): ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಹಾದಿ ಕಠಿಣವಾಗಿದೆ. ಸೂಪರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ ಇದೀಗ ಶ್ರೀಲಂಕಾ ವಿರುದ್ಧ ರನ್ ಸಿಡಿಸಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಏಷ್ಯಾಕಪ್ ಆಸೆ ಜೀವಂತವಾಗಿರಿಸಬೇಕಾದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಹೋರಾಟದಿಂದ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಶ್ರೀಲಂಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಕೆಎಲ್ ರಾಹುಲ್ 6 ರನ್ ಸಿಡಿಸಿ ಔಟಾದರು. ಇತ್ತ ಕೊಹ್ಲಿ ಡಕೌಟ್ ಆದರು. ಕಳಪೆ ಫಾರ್ಮ್‌ನಿಂದ ಹೊರಬಂದಿದ್ದ ಕೊಹ್ಲಿ ಶೂನ್ಯಕ್ಕೆ ಜಾರಿದ್ದಾರೆ. ಆದರೆ ರೋಹಿತ್ ಶರ್ಮಾ ಹೋರಾಟದಿಂದ ಟೀಂ ಇಂಡಿಯಾ ಮತ್ತೆ ಪುಟಿದೆದ್ದಿತು. ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. 

Add Asianetnews Kannada as a Preferred SourcegooglePreferred

ರೋಹಿತ್ ಶರ್ಮಾ(Rohti sharma) 41 ಎಸೆತದಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 72 ರನ್ ಸಿಡಿಸಿ ಔಟಾದರು. ಇತ್ತ ಸೂರ್ಯಕುಮಾರ್ ಯಾದವ್ 29 ಎಸೆತದಲ್ಲಿ 34 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರಿಷಬ್ ಪಂತ್ ಅಬ್ಬರಿಸಿದರು. ಇದರಿಂದ ಟೀಂ ಇಂಡಿಯಾ(India vs Sri Lanka) ರನ್ ಗಳಿಕೆ ವೇಗ ಹೆಚ್ಚಿಸಿತು. ಆದರೆ ಹಾರ್ದಿಕ್ ಪಾಂಡ್ಯ 17 ರನ್ ಸಿಡಿಸಿ ಔಟಾದರು.

ದೀಪಕ್ ಹೂಡ ಅಬ್ಬಪಿಸಲಿಲ್ಲ. ಹೂಡ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಪಂತ್ ಹೋರಾಟ 17 ರನ್‌ಗಳಿಗೆ ಅಂತ್ಯವಾಯಿತು.ಭುವನೇಶ್ವರ್ ಕುಮಾರ್ ಡಕೌಟ್ ಆದರು. ಆರ್ ಅಶ್ವಿನ್ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ(Asia cup 2022) 8 ವಿಕೆಟ್ ನಷ್ಟಕ್ಕೆ173 ರನ್ ಸಿಡಿಸಿತು. 

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಆರಂಭ ಪಡೆದಿತ್ತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ ರೋಚಕ ಗೆಲುವು ದಾಖಲಿಸಿತ್ತು. ಪಾಕಿಸ್ತಾನ ವಿರುದ್ದ ಶುಭಾರಂಭ ಮಾಡಿದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ 40 ರನ್ ಗೆಲುವು ದಾಖಲಿಸಿತ್ತು. ಎರಡು ಪಂದ್ಯಗಳ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಏಷ್ಯಾಕಪ್ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿತ್ತು. ಆದರೆ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಮತ್ತೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಮುಗ್ಗರಿಸಿತು. ಈ ಫಲಿತಾಂಶ ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿತ್ತು. ಹೀಗಾಗಿ ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ಸಿಲುಕಿದೆ.