* ಕೊಲಂಬೊದ ಪಲ್ಲೆಕೆಲೆಯಲ್ಲಿಂದು ಭಾರತ-ನೇಪಾಳ ಮುಖಾಮುಖಿ* ಈ ಪಂದ್ಯಕ್ಕೂ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ* ಸೋಮವಾರ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ

ಪಲ್ಲಕೆಲೆ(ಸೆ.04): ಭಾರತ ಹಾಗೂ ಪಾಕಿಸ್ತಾನವನ್ನು ಬಲಿಪಡೆದ ಮಳೆ, ಸೋಮವಾರ ನಡೆಯಬೇಕಿರುವ ಭಾರತ ಹಾಗೂ ನೇಪಾಳ ಪಂದ್ಯಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ. ಪಲ್ಲೆಕೆಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದು, ಸೋಮವಾರ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ. ಪಂದ್ಯ ರದ್ದಾದರೂ ಭಾರತ ಸೂಪರ್‌-4 ಹಂತಕ್ಕೆ ಪ್ರವೇಶಿಸಲಿದೆ.

ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ವೈಫಲ್ಯ ಕಂಡ ಹೊರತಾಗಿಯೂ ಮಧ್ಯಮ ಕ್ರಮಾಂಕ ದಿಟ್ಟ ಹೋರಾಟ ಪ್ರದರ್ಶಿಸಿ ತಂಡ, ಸ್ಪಧಾತ್ಮಕ ಮೊತ್ತ ದಾಖಲಿಸಲು ನೆರವಾಗಿತ್ತು. ಸೂಪರ್‌-4ಗೂ ಮುನ್ನ ಲಯ ಕಂಡುಕೊಳ್ಳಲು ರೋಹಿತ್‌, ಗಿಲ್‌, ಕೊಹ್ಲಿ, ಶ್ರೇಯಸ್‌ ಈ ಪಂದ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇಶಾನ್‌ ಕಿಶನ್‌ ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಮತ್ತೊಂದು ಹಿನ್ನಡೆ, ತವರಿಗೆ ಮರಳಿದ ವೇಗಿ ಜಸ್ಪ್ರೀತ್ ಬುಮ್ರಾ!

ಪಾಕಿಸ್ತಾನದ ಗುಣಮಟ್ಟದ ಬ್ಯಾಟಿಂಗ್‌ ಪಡೆಯ ಎದುರು ಬೌಲ್‌ ಮಾಡುವ ಅವಕಾಶ ಭಾರತೀಯರಿಗೆ ಸಿಗಲಿಲ್ಲ. ಈ ಪಂದ್ಯ ನಡದರೆ ಭಾರತೀಯ ಬೌಲರ್‌ಗಳಿಗೆ ಸೂಪರ್‌-4ಗೂ ಮುನ್ನ ಕೆಲ ಓವರ್‌ಗಳನ್ನು ಬೌಲ್‌ ಮಾಡಿ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. ಜಸ್‌ಪ್ರೀತ್‌ ಬುಮ್ರಾ ಅಲಭ್ಯರಾಗಲಿರುವ ಕಾರಣ, ಈ ಪಂದ್ಯದಲ್ಲಿ ಮೊಹಮದ್‌ ಶಮಿ ಅಥವಾ ಪ್ರಸಿದ್ಧ್‌ ಕೃಷ್ಣ ಪೈಕಿ ಒಬ್ಬರಿಗೆ ಸ್ಥಾನ ಸಿಗಲಿದೆ.

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನದಿಂದ ಚಚ್ಚಿಸಿಕೊಂಡಿದ್ದ ನೇಪಾಳ, ಈ ಪಂದ್ಯದಲ್ಲಿ ಸುಧಾರಿತ ಆಟವಾಡಲು ಎದುರು ನೋಡುತ್ತಿದೆ.

ನೆರೆಹೊರೆಯವರನ್ನು ಪ್ರೀತಿಸಿದರೆ ತಪ್ಪೇನಲ್ಲ..! ಕೊಹ್ಲಿ ಮೇಲಿನ ಅಭಿಮಾನ ತೋರಿದ ಪಾಕ್‌ ಮಹಿಳಾ ಅಭಿಮಾನಿ

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಇಶಾನ್ ಕಿಶನ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ/ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್ ಸಿರಾಜ್‌.

ನೇಪಾಳ: ಭುರ್ಟೆಲ್‌, ಆಸಿಫ್‌, ರೋಹಿತ್‌(ನಾಯಕ), ಆರಿಫ್‌, ಸೋಮ್ಪಾಲ್‌, ದೀಪೇಂದ್ರ, ಗುಲ್ಶನ್‌, ಕುಶಾಲ್‌ ಮಲ್ಲಾ, ಕರಣ್‌, ಸಂದೀಪ್‌, ಲಲಿತ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಪಲ್ಲಕೆಲೆ ಪಿಚ್‌ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ಮಳೆ ಸುರಿಯುತ್ತಿರುವ ಕಾರಣ ಔಟ್‌ಫೀಲ್ಡ್‌ ನಿಧಾನಗೊಂಡಿರಲಿದ್ದು, ರನ್‌ ಗಳಿಸಲು ಹೆಚ್ಚು ಪರಿಶ್ರಮ ವಹಿಸಬೇಕಾಗಬಹುದು. ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ. ಮಳೆ ಮುನ್ಸೂಚನೆ ಇರುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು.

ನೇಪಾಳ ವಿರುದ್ಧ ಮೊದಲ ಪಂದ್ಯ:

ಯಾವುದೇ ಮಾದರಿಯಲ್ಲಿ ಭಾರತಕ್ಕಿದು ನೇಪಾಳ ವಿರುದ್ಧ ಮೊದಲ ಪಂದ್ಯ. ಏಕದಿನದಲ್ಲಿ ಭಾರತಕ್ಕೆ ಎದುರಾಗಲಿರುವ 20ನೇ ತಂಡ(ರಾಷ್ಟ್ರ) ನೇಪಾಳ.

ಬುಮ್ರಾ ಭಾರತಕ್ಕೆ ವಾಪಸ್‌

ವೇಗಿ ಜಸ್‌ಪ್ರೀತ್‌ ಬುಮ್ರಾ ವೈಯಕ್ತಿಕ ಕಾರಣದಿಂದಾಗಿ ಭಾನುವಾರ ಮುಂಬೈಗೆ ಪ್ರಯಾಣಿಸಿದ್ದು, ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರು ಸೂಪರ್‌-4 ಹಂತ ಆರಂಭಕ್ಕೂ ಮುನ್ನ ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಸೂಪರ್‌-4 ಪ್ರವೇಶಿಸಿದರೆ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10ರಂದು ಆಡಲಿದೆ.