ಪಾಕ್ ಕ್ರಿಕೆಟ್ ತಂಡಕ್ಕೆ ಭಾರತೀಯನೊಬ್ಬನಿಂದ ಬೆದರಿಕೆಯಿತ್ತು: ಶಾಹಿದ್ ಅಫ್ರಿದಿ ಅಚ್ಚರಿಯ ಹೇಳಿಕೆ
ಏಷ್ಯಾಕಪ್ ಆಡಲು ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಹಿಂದೇಟು
ಇದರ ಬೆನ್ನಲ್ಲೇ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಚ್ಚರಿಯ ಹೇಳಿಕೆ
ಭಾರತ ಪ್ರವಾಸ ಮಾಡದಂತೆ ಪಾಕ್ ತಂಡಕ್ಕೂ ಬೆದರಿಕೆ ಇತ್ತೆಂದ ಅಫ್ರಿದಿ
ದುಬೈ(ಮಾ.21): ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕೆ ಅಥವಾ ಬೇಡವೇ ಎನ್ನುವ ಕುರಿತಂತೆ ಚರ್ಚೆಗಳು ನಡೆಯುತ್ತಲೇ ಇವೆ. 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಡೆದುಕೊಂಡಿದ್ದು, ಭದ್ರತೆಯ ನೆಪವೊಡ್ಡಿ ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡುವ ಕುರಿತಂತೆ ಹಿಂದೇಟು ಹಾಕುತ್ತಿದೆ. ಇದೆಲ್ಲದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಈ ಹಿಂದೆ ಮುಂಬೈ ಮೂಲದ ವ್ಯಕ್ತಿಯೊಬ್ಬರು, ಪಾಕಿಸ್ತಾನ ತಂಡವು ಭಾರತ ಪ್ರವಾಸ ಕೈಗೊಳ್ಳದಂತೆ ಬೆದರಿಕೆಯನ್ನೊಡ್ಡಿದ್ದರು. ಹೀಗಿದ್ದೂ ಪಾಕಿಸ್ತಾನ ತಂಡವು ಕ್ರಿಕೆಟ್ ಆಡಲು ಭಾರತ ಪ್ರವಾಸವನ್ನು ಕೈಗೊಂಡಿತ್ತು ಎಂದು ಅಫ್ರಿದಿ ಹೇಳಿದ್ದಾರೆ.
ನೀವು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ, ನಾವು ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ನೋಡಿಕೊಳ್ಳುತ್ತೇವೆ. ಇದಕ್ಕಿಂತ ಮುಖ್ಯವಾದ ವಿಚಾರವನ್ನು ನಾನು ನಿಮ್ಮ ಜತೆ ಹಂಚಿಕೊಳ್ಳಲು ಬಯಸುತ್ತೇನೆ. ಮುಂಬೈ ಮೂಲದ ಭಾರತೀಯನೊಬ್ಬ, ಆತನ ಹೆಸರು ಹೇಳಲು ಬಯಸುವುದಿಲ್ಲ, ಆತ ನಿಮ್ಮನ್ನು ಭಾರತಕ್ಕೆ ಬರಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಆದರೆ ನಮ್ಮ ಸರ್ಕಾರವು, ಆ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ಪಾಕಿಸ್ತಾನ ತಂಡವು ಭಾರತೀಯ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿತ್ತು. ಬೆದರಿಕೆಗಳು ಉಭಯ ದೇಶಗಳ ಸಂಬಂಧವನ್ನು ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ಪಾಕಿಸ್ತಾನ ಸರ್ಕಾರವು ಆ ತೀರ್ಮಾನವನ್ನು ತೆಗೆದುಕೊಂಡಿತ್ತು. ಬೆದರಿಕೆಗಳು ಬೆದರಿಕೆಯಾಗಿಯೇ ಉಳಿಯಿತು ಎಂದು ಅಫ್ರಿದಿ ಹೇಳಿದ್ದಾರೆ. ಆದರೆ ಶಾಹೀದ್ ಅಫ್ರಿದಿ (Shahid Afridi), ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ ವ್ಯಕ್ತಿ ಯಾರೆಂದು ಬಹಿರಂಗಪಡಿಸಿಲ್ಲ.
ಇನ್ನು ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವಿನ ಒಡನಾಟ ಹಾಗೂ 2005ರಲ್ಲಿ ಪಾಕಿಸ್ತಾನಕ್ಕೆ ಭಾರತ ತಂಡವು ಪ್ರವಾಸ ಕೈಗೊಂಡಾಗಿನ ಒಳ್ಳೆಯ ಕ್ಷಣಗಳನ್ನು ಶಾಹಿದ್ ಅಫ್ರಿದಿ ಮೆಲುಕು ಹಾಕಿದ್ದಾರೆ.
IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡಿದ ಆರ್ ಅಶ್ವಿನ್..!
" ಒಂದು ವೇಳೆ ಭಾರತ ತಂಡವು ಏಷ್ಯಾಕಪ್ ಆಡಲು ಪಾಕಿಸ್ತಾನ ಪ್ರವಾಸ ಕೈಗೊಂಡರೆ ನಿಜಕ್ಕೂ ಚೆನ್ನಾಗಿರುತ್ತದೆ. ಹೀಗಾದಲ್ಲಿ ಭಾರತವು ಕ್ರಿಕೆಟ್ನಲ್ಲಿ ಪಾಕಿಸ್ತಾನ ಪರ ಭಾರತವು ಒಂದು ಹೆಜ್ಜೆಯಿಟ್ಟಂತೆ ಆಗುತ್ತದೆ. ಇದೇನು ಪೀಳಿಗೆಗಳ ನಡುವಿನ ಯುದ್ದವಲ್ಲ. ನಾವು ಎರಡು ದೇಶಗಳ ನಡುವಿನ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ. ನಾವು ತುಂಬಾ ಪ್ರೀತಿ ಹಾಗೂ ವಿಶ್ವಾಸದಿಂದಲೇ ಭಾರತ ಎದುರು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನಾಡಿದ್ದೇವೆ. ನಾವು ಭಾರತ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಕ್ರಿಕೆಟ್ ಅಭಿಮಾನಿಗಳ ಪ್ರತಿಕ್ರಿಯೆ ಅದ್ಭುತವಾಗಿತ್ತು. ಅದೇ ರೀತಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗಲೂ ಸಹಾ, ನಿಮಗೆಲ್ಲ ನೆನಪಿರಬಹುದು, ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಶಾಪಿಂಗ್ ಮಾಡಲು ಹೋದಾಗ, ರೆಸ್ಟೋರೆಂಟ್ಗೆ ಹೋದಾಗ ಯಾರೊಬ್ಬರು ಅವರಿಂದ ಹಣವನ್ನು ಸ್ವೀಕರಿಸಿರಲಿಲ್ಲ. ಇದೇ ಎರಡು ದೇಶಗಳ ನಡುವಿನ ನಿಜವಾದ ಸೌಂದರ್ಯ ಎಂದು ಅಫ್ರಿದಿ ಹೇಳಿದ್ದಾರೆ.
ಏಷ್ಯಾಕಪ್ ಟೂರ್ನಿ ಈ ಬಾರಿ 50 ಓವರ್ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷ ಸೆಪ್ಟಂಬರ್ನಲ್ಲ ಆಯೋಜಿಸಲಾಗುವುದು ಎಂದು ಎಸಿಸಿ ತಿಳಿಸಿತ್ತು. ಇದರ ಆತಿಥ್ಯ ಪಾಕ್ ಬಳಿ ಇದ್ದರೂ ಭದ್ರತಾ ಕಾರಣಗಳಿಂದಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾರತ ಆಡಲಿದೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.