ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಅಜಿಂಕ್ಯ ರಹಾನೆ, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲವು ಸಾಧಿಸಿದ್ದಾರೆ. ಆಸೀಸ್ ಪ್ರವಾಸ ಮುಗಿಸಿ ತವರಿಗೆ ಆಗಮಿಸಿದ ರಹಾನೆಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಇದೇ ಸಂಭ್ರಮದಲ್ಲಿ ಕೇಕ್ ಕತ್ತರಿಸಲು ಮನವಿ ಮಾಡಿದ್ದಾರೆ. ಆದರೆ ರಹಾನೆ ನಿರಾಕರಿಸಿದ್ದಾರೆ. 

ಮುಂಬೈ(ಜ.21): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಟೀಂ ಇಂಡಿಯಾ ಇತಿಹಾಸ ರಚಿಸಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ತಂಡ ಮುನ್ನಡೆಸಿದ ಅಜಿಂಕ್ಯ ರಹಾನೆ, ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದಾರೆ. ಗೆಲುವಿನ ಬಳಿಕ ತವರಿಗೆ ಆಗಮಿಸಿದ ರಹಾನೆಗೆ ಅದ್ದೂರಿ ಸ್ವಾಗತ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಕಾಂಗರೂ ಬೇಟೆಯಾಡಿದ ರಹಾನೆ ಪಡೆಗೆ ಅದ್ಧೂರಿ ಸ್ವಾಗತ..!..

ಮುಂಬೈ ಆಗಮಿಸಿದ ಅಜಿಂಕ್ಯ ರಹಾನೆಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ರಹಾನೆಗೆ ಪುಷ್ಪಗಳಿಂದ ಸ್ವಾಗತ ನೀಡಲಾಗಿತ್ತು. ವಾದ್ಯ ಘೋಷಗಳ ಮೂಲಕ ರೆಡ್ ಕಾರ್ಪೆಟ್ ವೆಲ್‌ಕಮ್ ನೀಡಲಾಗಿತ್ತು. ಬಳಿಕ ಸಣ್ಣ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ರಹಾನೆಗೆ ಹೂಗುಚ್ಚ ನೀಡಿ ಕೇಕ್ ಕತ್ತರಿಸಲು ಆಯೋಜಕರು ಮನವಿ ಮಾಡಿದ್ದಾರೆ. ಆದರೆ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದಾರೆ.

ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಕಾರಣ, ಆಸೀಸ್ ರಾಷ್ಟ್ರೀಯ ಪ್ರಾಣಿ ಕಾಂಗರೂ ಆಕೃತಿ ಇಡಲಾಗಿತ್ತು. ಎದುರಾಳಿ ಯಾರೇ ಆಗಿರಲಿ ಅವರನ್ನು ಗೌರವಿಸುವ ಅಜಿಂಕ್ಯ ರಹಾನೆ ಇಲ್ಲೂ ಕೂಡ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಕಾಂಗರೂ ಕೇಕ್ ಕತ್ತರಿಸುವುದಿಲ್ಲ ಎಂದು ರಹಾನೆ ಹೇಳಿದ್ದಾರೆ. ಬಳಿಕ ಆಯೋಜಕರು ಬೇರೆ ಕೇಕ್ ನೀಡಿದ್ದಾರೆ.