ಯಾರಿಗೂ ಬೇಡವಾಗಿದ್ದ ಟಿ20 ನಾಯಕತ್ವ ವಹಿಸಿಕೊಂಡಿದ್ದ ಧೋನಿ..!
2007ರಲ್ಲಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದು ಹೇಗೆ ಎನ್ನುವುದರ ರೋಚಕ ಸಂಗತಿ ಇಲ್ಲಿದೆ ನೋಡಿ.
ಬೆಂಗಳೂರು(ಆ.16): ಅದು 2007ರ ಚೊಚ್ಚಲ ಟಿ20 ವಿಶ್ವಕಪ್ ಸಮಯ. ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿತ್ತು. ಭಾರತ ಕ್ರಿಕೆಟ್ನ ನಾಯಕತ್ವ ವಹಿಸಿಕೊಳ್ಳುವುದು ತಂಡದ ಯಾರೊಬ್ಬ ಹಿರಿಯ ಆಟಗಾರರಿಗೂ ಸುತರಾಂ ಇಷ್ಟವಿರಲಿಲ್ಲ.
ಆಗಿನ ಭಾರತ ತಂಡದ ದಿಗ್ಗಜ ಆಟಗಾರರು ಎನಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ತಂಡದ ನಾಯಕತ್ವ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆ ಸಮಯದಲ್ಲಿ ತಂಡದ ನಾಯಕತ್ವಕ್ಕೆ ಸೂಕ್ತ ಆಟಗಾರನನ್ನು ಸೂಚಿಸುವುದು ಆಯ್ಕೆ ಸಮಿತಿಗೂ ಕಷ್ಟವಾಗಿತ್ತು.
ಧೋನಿ ಬಗ್ಗೆ ಸಚಿನ್ ಸಲಹೆ: ಭಾರತ ತಂಡದ ನಾಯಕನ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿದ್ದ ಆಯ್ಕೆ ಸಮಿತಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ತಂಡದಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದ ಧೋನಿಗೆ ನಾಯಕತ್ವದ ಹೊಣೆ ಹೊರಿಸಿ ಎಂದು ಸಲಹೆ ನೀಡಿದ್ದರು. ಸಚಿನ್ ಸಲಹೆಯಂತೆ ಧೋನಿಗೆ ನಾಯಕತ್ವದ ಹೊಣೆ ನೀಡಲಾಗಿತ್ತು. ಕೆಲ ಪಂದ್ಯಗಳಲ್ಲಿ ಧೋನಿ ಅವರ ನಾಯಕತ್ವ ಗುಣಗಳನ್ನು ಸಚಿನ್ ಗಮನಿಸಿದ್ದರಂತೆ. ಹಾಗಾಗಿ ಧೋನಿಗೆ ನಾಯಕತ್ವ ವಹಿಸಲು ಸಚಿನ್ ಆಯ್ಕೆ ಸಮಿತಿಗೆ ಸಲಹೆ ನೀಡಿದ್ದರು.
ವಿಶ್ವಕಪ್, ನಂ.1 ಪಟ್ಟ ಭಾರತಕ್ಕೆ ಎಲ್ಲವನ್ನೂ ಗೆದ್ದು ಕೊಟ್ಟ ಸಾಧಕ ನಮ್ಮ ಮಹಿ..!
ಹೀಗೆ ಅಯಾಚಿತವಾಗಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ಧೋನಿ ಹೆಗಲೇರಿತು. ಆಕಸ್ಮಿಕವಾಗಿ ಒಲಿದ ನಾಯಕತ್ವವನ್ನು ಮುಂದುವರಿಸಿ ದೇಶಕ್ಕೆ ಯಾರೂ ನೀಡದ ಕೊಡುಗೆ ಕೊಡಿಸುತ್ತೇನೆ ಎಂದು ಪ್ರಾಯಶಃ ಆಗಿನ ಕಾಲಕ್ಕೆ ಸ್ವತಃ ಕೂಲ್ ಕ್ಯಾಪ್ಟನ್ ಕಲ್ಪಿಸಿಕೊಂಡಿರಲಿಕ್ಕಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ತಂಡ, ಮಹತ್ವದ ಟ್ರೋಫಿಗಳನ್ನು ಜಯಿಸಿತು. ಇದರಲ್ಲಿ ಐಸಿಸಿ ಟೂರ್ನಿ, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಪ್ರಮುಖವಾಗಿವೆ.
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಧೋನಿ, 3 ವರ್ಷಗಳ ಬಳಿಕ ರಾಷ್ಟ್ರೀಯ ತಂಡದ ನಾಯಕರಾದರು. ಇದಕ್ಕೂ ಮುನ್ನ 2005ರಲ್ಲಿ ಧೋನಿ, ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ಏಕದಿನ ಸರಣಿ ವೇಳೆ ಉಪನಾಯಕರಾಗಿದ್ದರು
"