Asianet Suvarna News Asianet Suvarna News

ಕೊರೋನಾ ನಿರ್ಬಂಧ: ಇಂದು ಮಹತ್ವದ ಸಭೆ, ಹೊಸ ವರ್ಷಕ್ಕೆ ಅನುಮತಿಯೋ? ನಿರ್ಬಂಧವೋ?

ಬೆಳಗಾವಿಯಲ್ಲಿ ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವರ ಸಭೆ, ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ, ಹೊಸ ಮಾರ್ಗಸೂಚಿ ಪ್ರಕಟ ಸಾಧ್ಯತೆ. 

Likely New Guidelines to Karnataka Due to Coronavirus grg
Author
First Published Dec 26, 2022, 12:30 AM IST

ಬೆಂಗಳೂರು(ಡಿ.26): ವಿದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಮತ್ತಷ್ಟುಬಿಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೋಮವಾರ ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ಅಧಿಕಾರಿಗಳು, ತಜ್ಞರ ಸಭೆ ನಡೆಯಲಿದೆ. ಪ್ರಮುಖವಾಗಿ ಮುಂಬರುವ ಹೊಸ ವರ್ಷದ ಸ್ವಾಗತ ಕಾರ್ಯಕ್ರಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜನೆ ಮತ್ತು ಸಂಭ್ರಮಾಚರಣೆಗಳಗೆ ನಿರ್ಬಂಧ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್‌್ಕ ಕಡ್ಡಾಯ, ಲಸಿಕೆ ಏರಿಕೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿದೆ. ಆ ಬಳಿಕ ತೀರ್ಮಾನಗಳ ಆಧರಿಸಿ ಹೊಸ ಮಾರ್ಗಸೂಚಿ ಹೊರ ಬೀಳುವ ಸಾಧ್ಯತೆಗಳಿವೆ.

ಕೊರೋನಾ ರೂಪಾಂತರದ ಓಮಿಕ್ರೋನ್‌ ಬಿಎಫ್‌.7 ಒಬ್ಬರಿಂದ 17 ರಿಂದ 18 ಜನರಿಗೆ ಹರಡುವ ಸಾಧ್ಯತೆಗಳಿವೆ. ವಿದೇಶಗಳಲ್ಲಿ ನಿತ್ಯ 50 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸದ್ಯಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್‌ನಂತಹ ಯಾವುದೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಪಪಡಿಸಿದೆ. ಆದರೆ, ಹೊಸ ವರ್ಷ ಸಮೀಪಿಸುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ಜೋರಿರಲಿದೆ. ಅದರಲ್ಲೂ ಕಳೆದ ಎರಡು ವರ್ಷ (2021 ಹಾಗೂ 2022ರಲ್ಲಿ) ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ಭರ್ಜರಿಯಾಗಿ ಹೊಸ ವರ್ಷ ಸ್ವಾಗತಕ್ಕೆ ಜನರು ಸಜ್ಜಾಗಿದ್ದಾರೆ. ಒಂದು ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿಯೂ ಹೆಚ್ಚಳವಾಗಬಹುದು ಎಂಬ ಆತಂಕದಲ್ಲಿ ರಾಜ್ಯ ಸರ್ಕಾರವಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್‌ಗೆ ಮಿಶ್ರ ಪ್ರತಿಕ್ರಿಯೆ: ನಿಯಮವಿದ್ದೂ ಎಚೆತ್ತುಕೊಳ್ಳದ ಪ್ರಯಾಣಿಕರು

ಜನರ ನಿರ್ಲಕ್ಷ್ಯ:

ಇನ್ನೊಂದೆಡೆ ಕಳೆದ ವಾರ ಆರೋಗ್ಯ ಇಲಾಖೆಯಿಂದ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಮಾಸ್ಕ್‌ ಧರಿಸುವಂತೆ, ಸೋಂಕು ಲಕ್ಷಣ ಇದ್ದರೆ ಪರೀಕ್ಷೆಗೊಳಗಾಗುವಂತೆ, ಮೂರನೇ ಡೋಸ್‌ ಲಸಿಕೆ ಪಡೆಯುವಂತೆ ಸಲಹೆಗಳನ್ನು ನೀಡಲಾಗಿತ್ತು. ಆದರೆ, ಬಹುತೇಕರು ಈ ಸಲಹೆಗಳನ್ನು ಗಾಳಿಗೆ ತೂರಿದ್ದಾರೆ. ವರ್ಷಾಂತ್ಯದ ಪ್ರವಾಸ, ಸಭೆ ಸಮಾರಂಭಗಳ ಆಯೋಜನೆ ಎಂದಿನಂತೆ ನಡೆಯುತ್ತಿವೆ. ಪ್ರವಾಸಿ ಸ್ಥಳಗಳಲ್ಲಿ ಜನಜಂಗುಳಿ ಇದೆ. ಹೀಗಾಗಿ, ಒಂದಿಷ್ಟು ಕಠಿಣ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಸರ್ಕಾರ ಮನಗಂಡಿದೆ.

2-3 ತಿಂಗಳಲ್ಲಿ ಕರ್ನಾಟಕಕ್ಕೂ ಬಿಎಫ್‌7 ದಾಳಿ ಸಂಭವ: ಸಚಿವ ಸುಧಾಕರ್‌

ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ?:

ಬೆಂಗಳೂರು ಹಾಗೂ ಇತರೆ ಭಾಗಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಾಜ್ಯದ ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಶೇ.99 ರಷ್ಟುಬೆಂಗಳೂರಿನಲ್ಲಿವೆ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅಲ್ಲದೆ, ಬೆಂಗಳೂರಿನ ಬ್ರಿಗೇಡ್‌ ರಸ್ತೆ ಸೇರಿದಂತೆ ಹೋಟೆಲ್‌, ರೆಸ್ಟೋರೆಂಟ್‌ ಸೇರಿ ಹಲವೆಡೆ ಹೊಸ ವರ್ಷದ ಸಂಭ್ರಮಾಚರಣೆಗಳು ಜೋರಿರುತ್ತದೆ. ಮೆಟ್ರೋ, ಸಾರಿಗೆ ಬಸ್‌ಗಳಲ್ಲಿ ಮಾಸ್‌್ಕ ಕಡ್ಡಾಯ, ಲಸಿಕೆ ಪ್ರಮಾಣ ಪತ್ರ ಕಡ್ಡಾಯ, ನಿರ್ದಿಷ್ಟ ಜನ ಮಿತಿ, ಸಮಯದ ಮಿತಿ ಒಳಗೊಂಡ ನಿಯಮಗಳನ್ನು ಜಾರಿಳಿಸಬಹುದು.

ಸದ್ಯ ಕೊರೋನಾ ನಿಯಂತ್ರಣದಲ್ಲಿ: 

ಸದ್ಯ ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಸಿ ದರ ಶೇ.0.5 ರಷ್ಟಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾಗುವ 1 ಸಾವಿರ ಮಂದಿಯಲ್ಲಿ ಐದು ಮಂದಿಗೆ ಮಾತ್ರ ಸೋಂಕು ದೃಢಪಡುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ಹೊಸ ಪ್ರಕರಣಗಳು 20 ಆಸುಪಾಸಿನಲ್ಲಿದ್ದು, ಸೋಂಕಿತರ ಸಾವು ನಾಲ್ಕು ವರದಿಯಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಐದು ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, 1200 ಮಂದಿ ಮನೆ ಆರೈಕೆಯಲ್ಲಿದ್ದಾರೆ. 2020 ಮತ್ತು 2021 ಡಿಸೆಂಬರ್‌ಗೆ ಹೋಲಿಸಿದರೆ ಈ ಬಾರಿ ಬಹುತೇಕ ನಿಯಂತ್ರಣದಲ್ಲಿದೆ.

Follow Us:
Download App:
  • android
  • ios