ದೇಶದಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಏ.1ರಿಂದ ತಮಿಳುನಾಡು ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿದೆ. 

ನವದೆಹಲಿ (ಏ.01): ದೇಶದಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಏ.1ರಿಂದ ತಮಿಳುನಾಡು ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿದೆ. ಈ ನಡುವೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತುರ್ತು ಸಭೆ ನಡೆಸಿ, ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮಿಳುನಾಡಿನಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಶನಿವಾರದಿಂದ ಕಡ್ಡಾಯಗೊಳಿಸಲಾಗಿದೆ. 

ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ತಮಿಳುನಾಡಿನಲ್ಲಿ ಎಕ್ಸ್‌ಬಿಬಿ ಮತ್ತು ಬಿ.ಎ.2 ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿದೆ. ಹಾಗಾಗಿ ಮಾಸ್ಕ್‌ ಧರಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ಆರೋಗ್ಯ ಸಚಿವ ಮಾ ಸುಬ್ರಮಣಿಯನ್‌ ಕರೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ, ಟಿಕೆಟ್‌ ಹಂಚಿಕೆ: ಶೋಭಾ ಕರಂದ್ಲಾಜೆ

ಸಜ್ಜಾಗಿ- ಕೇಜ್ರಿವಾಲ್‌: ಇನ್ನು ದೆಹಲಿಯಲ್ಲಿ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಸ್ತುತ ದೆಹಲಿಯಲ್ಲಿರುವ ಪರಿಸ್ಥಿತಿ ಕಳವಳಕಾರಿಯಾಗಿಲ್ಲ. ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೂ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್‌ ಪರಿಸ್ಥಿತಿಯ ಮೇಲೆ ದೆಹಲಿ ಸರ್ಕಾರ ಕಣ್ಣಿಟ್ಟಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.'

ಈ ವರ್ಷದ ಅತ್ಯಧಿಕ ಕೊರೋನಾ ಸೋಂಕು: ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು 143 ಕೊರೋನಾ ಸೋಂಕು ದೃಢ ಪ್ರಕರಣ ಗುರುವಾರ ದಾಖಲಾಗಿವೆ. ಮಾ.8ರಂದು 101 ಪ್ರಕರಣ, ಮಾ.26ರಂದು 120 ಪ್ರಕರಣ ದಾಖಲಾಗಿತ್ತು. ಕಳೆದ ವರ್ಷದ ಸೆ.29ರಂದು 171 ಪ್ರಕರಣ ಕಾಣಿಸಿಕೊಂಡಿದ್ದವು. ಅದಾದ ಬಳಿಕ ಮಾಚ್‌ರ್‍ 8ವರೆಗೆ ನೂರಕ್ಕಿಂತ ಹೆಚ್ಚು ಪ್ರಕರಣ ಕಾಣಿಸಿಕೊಂಡಿರಲಿಲ್ಲ. ಆದರೆ, ಮಾ.8 ರಿಂದ ಮಾ.30ರ ಅವಧಿಯಲ್ಲಿ ಮೂರು ಬಾರಿ ನೂರಕ್ಕಿಂತ ಹೆಚ್ಚಿನ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡಿರುವುದು ನಗರದಲ್ಲಿ ಆತಂಕ ಹೆಚ್ಚಿಸಿದೆ.

Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ

ಇನ್ನು ಗುರುವಾರ ಪಾಸಿಟಿವಿಟಿ ದರ ಶೇ.3.09 ದಾಖಲಾಗಿದೆ. ಸೋಂಕಿನಿಂದ 43 ಜನ ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 487ಕ್ಕೆ ಏರಿಕೆಯಾಗಿದ್ದು, 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 228 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 7 ಮಂದಿ ಮೊದಲ ಡೋಸ್‌, 13 ಮಂದಿ ಎರಡನೇ ಡೋಸ್‌ ಮತ್ತು 208 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 3,609 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.