ವರ​ದಕ್ಷಿಣೆ ಕಿರು​ಕುಳ ನೀಡಿ ಗೃಹಿ​ಣಿ​ಯ ಕೊಲೆ| ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದ ಘಟನೆ| ಅತ್ತೆ, ಮಾವ, ಮೈದು​ನ ಕೊಲೆಯಾದ ಗೀತಾ​ಳಿಗೆ ತವರು ಮನೆಯಿಂದ ಬಂಗಾರ ತರುವಂತೆ ಪೀಡಿ​ಸ​ಲಾ​ಗು​ತ್ತಿತ್ತು. ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದರು|

ಜಮಖಂಡಿ(ಏ.08): ವರ​ದಕ್ಷಿಣೆ ಕಿರು​ಕುಳ ನೀಡಿ ಗೃಹಿ​ಣಿ​ಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮನೆಯ ತೊಲೆಗೆ ನೇಣು ಬಿಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ತಾಲೂ​ಕಿನ ಆಲಬಾಳ ಗ್ರಾಮದ ಗೀತಾ ಉರ್ಫ ಪದ್ಮಾ ಪೂಜಾರಿ (25) ಕೊಲೆ​ಗೀ​ಡಾದ ಗೃಹಿಣಿ. ಆಲಬಾಳ ಗ್ರಾಮದ ನೇಮಿನಾಥ ಪೂಜಾರಿ, ಪತ್ನಿ ಗೀತಾ ಅವರು ಕಂಕಣವಾಡಿ ಗ್ರಾಮದ ರವೀಂದ್ರ ಯಡಹಳ್ಳಿ ಎಂಬಾತರ ತೋಟದಲ್ಲಿ ಕೂಲಿ ಕೆಲ​ಸ​ಕ್ಕಿ​ದ್ದರು. ತೋಟದ ಮನೆ​ಯಲ್ಲೇ ವಾಸ​ವಿ​ದ್ದರು. ಜತೆಗೆ ಅತ್ತೆ, ಮಾವ, ಮೈದು​ನ ಇದ್ದರು. ಗೀತಾ​ಳಿಗೆ ತವರು ಮನೆಯಿಂದ 4 ತೊಲೆ ಬಂಗಾರ ತರುವಂತೆ ಪೀಡಿ​ಸ​ಲಾ​ಗು​ತ್ತಿತ್ತು. ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ನೀಡಿ ಈಕೆಯ ಪತಿ, ಅತ್ತೆ, ಮಾವ, ಮೈದುನ ನಾಲ್ವರೂ ಸೇರಿ ಸೋಮ​ವಾರ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿ ಮನೆ​ಯ ತೊಲೆಗೆ ಹಗ್ಗ​ದಿಂದ ನೇಣು ಬಿಗಿ​ದಿ​ದ್ದಾರೆ. ಮೃತ ಗೀತಾಳಿಗೆ 7 ತಿಂಗಳ ಗಂಡು ಮಗುವಿದೆ.

ಕಳ್ಳತನ ಪ್ರಕರಣ: ಮೂವರು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಆರೋಪಿಗಳಾದ ಮೃತಳ ಪತಿ ನೇಮಿನಾಥ ಪೂಜಾರಿ, ಮಾವ ಶಂಕರ ಪೂಜಾರಿ, ಅತ್ತೆ ಶಾಂತವ್ವ ಪೂಜಾರಿ, ಮೈದುನ ವಿನಯ ಪೂಜಾರಿ ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಮೃತಳ ತಾಯಿ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗುಣದಾಳ ಗ್ರಾಮದ ಸುನಂದಾ ಸದಾಶಿವ ಕಣಬೂರ ಅವರು ನೀಡದ ದೂರಿನನ್ವಯ ಜಮಖಂಡಿ ಗ್ರಾಮೀಣ ಪೊ​ಲೀಸ್‌ ಠಾಣೆಯ ಎಸೈ ಬಸವರಾಜ ಅವಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಧರೇಗೌಡ ಪಾಟೀಲ ತನಿಖೆ ನಡೆಸಿದ್ದಾರೆ. ಡಿವೈಎಸ್ಪಿ ಆರ್‌.ಕೆ.ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿದ್ದಾರೆ.