ಕೊರೋನಾ ಆತಂಕ: ಮಸೀದಿಗಳಲ್ಲಿ ಇನ್ನೂ ನಿಲ್ಲದ ಸಾಮೂಹಿಕ ಪ್ರಾರ್ಥನೆ!
ಕೊರೋನಾ ಇಲ್ಲವೆಂಬ ನಿರ್ಲಕ್ಷ್ಯದಲ್ಲಿ ಜನತೆ| ಹಾವೇರಿ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಕೇಸ್ ಇಲ್ಲ ಎಂಬ ಧೈರ್ಯ| ಲಾಕ್ಡೌನ್ ಆದೇಶ ಉಲ್ಲಂಘಿಸುತ್ತಿರುವ ಜನರು| ಕೊರೋನಾ ಪ್ರಕರಣವಿಲ್ಲ ಎಂಬ ಉಡಾಫೆ ಉತ್ತರ|
ಹಾವೇರಿ(ಏ.04): ಕೊರೋನಾ ಸೋಂಕು ಹರಡದಂತೆ ದೇಶವೇ ಲಾಕ್ಡೌನ್ ಆಗಿದೆ. ಆದರೆ, ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಒಂದೂ ಇಲ್ಲ ಎನ್ನುವ ಕಾರಣಕ್ಕೆ ರಸ್ತೆಗಿಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ ಕಂಡುಬರುತ್ತಿರುವ ವಾಸ್ತವ ಚಿತ್ರಣವಿದು!
ದೇಶಾದ್ಯಂತ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚುತ್ತಿದ್ದರೂ ಇನ್ನೂ ಅನೇಕರು ಜಿಲ್ಲೆಯಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸುತ್ತಲೇ ಇದ್ದಾರೆ. ಒಂದು ವಾರ ಕಾಲ ಮನೆಯಲ್ಲೇ ಇದ್ದವರು ಈಗ ನಿಧಾನವಾಗಿ ಹೊರಬೀಳುತ್ತಿದ್ದಾರೆ. ಆರಂಭದಲ್ಲಿ ಪೊಲೀಸರು ವಹಿಸಿದ ಕಟ್ಟುನಿಟ್ಟಿನ ಕ್ರಮಕ್ಕೆ ಯಾರೂ ಮನೆಯಿಂದ ಹೊರಬೀಳುವ ಧೈರ್ಯ ತೋರುತ್ತಿರಲಿಲ್ಲ. ಆರಂಭದಲ್ಲಿ ಲಾಠಿ ರುಚಿ, ದಂಡ ವಸೂಲಿಯಂಥ ಬಿಗು ಕ್ರಮ ಕೈಗೊಂಡಿದ್ದ ಪೊಲೀಸರೂ ಈಗ ಲಾಠಿ ಜಳಪಿಸುತ್ತಿಲ್ಲ. ಇದರಿಂದ ದಿನಸಿ, ಔಷಧಿ, ತರಕಾರಿ ಎಂಬ ಕಾರಣ ನೀಡುತ್ತ ಅಡ್ಡಾಡುವವರ ಸಂಖ್ಯೆ ಹೆಚ್ಚುತ್ತಿದೆ.
ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೊಶ
ಮಸೀದಿಗಳಲ್ಲಿ ಪ್ರಾರ್ಥನೆ:
ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಬದಲಾಗಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಕೆಲವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಜಿಲ್ಲೆ ವ್ಯಾಪ್ತಿಯ ಎಲ್ಲ ಮಸೀದಿಗಳಿಗೆ ಭೇಟಿ ನೀಡಿ ಸಮುದಾಯದ ಮುಖಂಡರನ್ನು ಮನವೊಲಿಸುವಂತೆ ಆಯಾ ತಾಲೂಕು ತಹಸೀಲ್ದಾರರಿಗೆ ಉಪವಿಭಾಗಾಧಿಕಾರಿ ದಿಲಿಷ್ ಶಶಿ ಸೂಚಿಸಿದ್ದಾರೆ. ಎಲ್ಲ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರತಿ ದಿನ ಮುಂಜಾಗ್ರತಾ ಕ್ರಮಗಳನ್ನು ಪ್ರಕಟಿಸಲು ತಿಳಿಸಿದರೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವುದು ಕಂಡುಬರುತ್ತಿದೆ. ಕೊರೋನಾ ವೈರಸ್ ಧರ್ಮ ಕೇಳಿ ಬರುವುದಿಲ್ಲ, ಮುನ್ನೆಚ್ಚರಿಕೆ ವಹಿಸಿ ಎಂದರೂ ಕೇಳುತ್ತಿಲ್ಲ.
ಜಿಲ್ಲೆಯಲ್ಲಿಲ್ಲ ಪಾಸಿಟಿವ್:
ಜಿಲ್ಲೆಯಲ್ಲಿ ವಿದೇಶದಿಂದ ಬಂದವರು, ದಿಲ್ಲಿಗೆ ಹೋಗಿ ಬಂದವರು ಸೇರಿದಂತೆ ಇದುವರೆಗೆ 191 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ನಿಗಾ ವಹಿಸಿ ಅವರಲ್ಲಿ 72 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಈ ವರೆಗೆ 8 ಜನರ ಗಂಟಲು ದ್ರವ ಮತ್ತು ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರಲ್ಲಿ ಎಲ್ಲವೂ ನೆಗೆಟಿವ್ ಬಂದಿದೆ.
ದೆಹಲಿಗೆ ಹೋಗಿ ಬಂದ 14 ಜನರ ಸ್ವಾಬ್ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದ್ದು, ವರದಿ ಕೈ ಸೇರಿಲ್ಲ. ಇದರಿಂದ ಅನೇಕರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣವಿಲ್ಲ ಎಂಬ ಉಡಾಫೆ ಉತ್ತರ ಹೇಳುತ್ತ ರಸ್ತೆಗಿಳಿಯುತ್ತಿದ್ದಾರೆ. ಇದು ನಿಯಮ ಪಾಲಿಸುತ್ತ ಮನೆಯಲ್ಲೇ ಇರುವವರಿಗೆ ಹಾಗೂ ದಿನಸಿ, ಔಷಧಿ ಖರೀದಿಗೆ ಹೋಗುವ ಅಮಾಯಕರ ಆತಂಕಕ್ಕೆ ಕಾರಣವಾಗಿದೆ.