ಕೊರೋನಾ ಲಾಕ್‌ಡೌನ್‌ನಿಂದ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಅದರಲ್ಲೂ ನಮ್ಮ ದೇಶದ ಬೆನ್ನೆಲುಬು ರೈತ ಸಮುದಾಯ ಅಂತ್ರೂ ಬೆಳೆದ ಬೆಳೆ ಸಾಗಿಸಲಾಗದೇ ಕೈಕಟ್ಟಿ ಕುಳಿತ್ತಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡ್ರೆ, ಇನ್ನು ಕೆಲವರು ಬೆಳೆದ ಬೆಳೆಯನ್ನ ತಾವೇ ನಾಶ ಮಾಡುತ್ತಿದ್ದಾರೆ. ಆದ್ರೆ, ಇದೀಗ ಈ ರೀತಿ ಮಾಡುವುದನ್ನು ಬಿಡಿ. ಬೆಳೆದ ಫಸಲನ್ನು ಆರಾಮಾಗಿ ಮಾರುಕಟ್ಟೆಗೆ ಸಾಗಿಸಿ.

ಬೆಂಗಳೂರು, (ಏ.01): ರೈತರು ತಾವು ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೇ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಈಗ ಈ ಬಗ್ಗೆ ಚಿಂತಿಸಬೇಡಿ. 

ಇಂದು (ಬುಧವಾರ) ರಾಜ್ಯ ಸರ್ಕಾರ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾ ರೈತ ಬಾಂಧವರೇ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. 

ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ

ಕೇಂದ್ರ ಮತ್ತು ರಾಜ್ಯ ಸರ್ಕಾರವು ಕರೋನಾ ಪರಿಣಾಮದಿಂದ ಉಂಟಾದ ಲಾಕ್ ಡೌನ್ ನಿಂದ ಕೃಷಿ ಚಟುವಟಿಕೆ ಮತ್ತು ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಸರಬರಾಜಿಗೆ ವಿನಾಯಿತಿ ನೀಡಿದೆ. 

ಕೃಷಿಕರು, ಕೃಷಿಕಾರ್ಮಿಕರು ಕೈಗೊಳ್ಳುವ ಕೃಷಿಕಾರ್ಯಕ್ಕೆ ಯಾವುದೇ ದಿಗ್ಬಂಧನ ಅನ್ವಯಿಸುವುದಿಲ್ಲ. ಬೆಳೆಕೊಯ್ಲು ಯಂತ್ರೋಪಕರಣಗಳ ಸಾಗಣೆಗೆ ಅಡಚಣೆ ಇಲ್ಲ. ಕೃಷಿ ಉತ್ಪನ್ನ ಮಾರಾಟ, ಖರೀದಿ, ಸಾಗಣೆಗೆ ನಿರ್ಬಂಧ ಇಲ್ಲ.

ರಾಜ್ಯದ ಕೃಷಿಕರಿಗೆ ಸರ್ಕಾರದ ವತಿಯಿಂದ ಕೃಷಿ ಚಟುವಟಿಕೆ, ಕೃಷಿ ಉತ್ಪನ್ನ, ಉಪಕರಣಗಳ ಸಾಗಣೆಗೆ ಪ್ರತ್ಯೇಕ ಗ್ರೀನ್ ಪಾಸ್ ನೀಡಲಾಗುವುದು.

ಪಾಸ್ ಎಲ್ಲೆಲ್ಲಿ ಸಿಗುತ್ತವೆ?
ಗ್ರೀನ್ ಪಾಸ್ ಗಳನ್ನು ಪಡೆಯಲು ರೈತರು, ಕೃಷಿ ಸಂಬಂಧಿತ ಉತ್ಪಾದಕರು ಆಯಾ ಪ್ರದೇಶಗಳಿಗೆ ಅನ್ವಹಿಸುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೃಷಿ ಅಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಬಹುದು.

 ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ ದಯವಿಟ್ಟು ರೈತರು ಆತ್ಮಹತ್ಯೆಯೇ ಒಂದೇ ಹಾದಿ ಎನ್ನುವುದನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಬೇಕು. ನಿಮ್ಮ ಕಷ್ಟಕ್ಕೆ ಸಾವು ಒಂದೇ ಪರ್ಯಾಯವಲ್ಲ. ನಿಮ್ಮನ್ನು ನಂಬಿದ ಕುಟುಂಬ ಇದೆ ಎನ್ನುವುದನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಮ್ಮೆ ಯೋಚಿಸಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred