‘‘ನಾವು ನಿಮ್‌ಗೆ ಅನ್ನ, ನೀರು ಕೊಡಿ ಅಂತ ಏನು ಕೇಳ್ತಿಲ್ಲ. ಇನ್ನೂ ಒಂದು ತಿಂಗಳು ಲಾಕ್‌ಡೌನ್‌ ಆಗಲಿ, ಬದುಕುತ್ತೇವೆ. ಆದ್ರೆ ನಮ್‌ಗೆ ಇಲ್ಲಿಯೇ ಇರಲು ಅವಕಾಶ ಕೊಡಿ. ಕುರಿಗಳ ಮೇಯಿಸಿಕೊಂಡು ನಿಮ್‌ ತಂಟೆಗೆ ಬಾರದೇ ಇರ್ತೇವೆ’’ ಬಯಲುಸೀಮೆಯ ಕುರಿಗಾಹಿಗಳು ಮಲೆನಾಡಿಗರ ಮುಂದೆ ಗೋಗರೆಯುತ್ತಿರುವ ಪರಿಯಿದು. 

ಚಿತ್ರದುರ್ಗ(ಎ.01): ‘‘ನಾವು ನಿಮ್‌ಗೆ ಅನ್ನ, ನೀರು ಕೊಡಿ ಅಂತ ಏನು ಕೇಳ್ತಿಲ್ಲ. ಇನ್ನೂ ಒಂದು ತಿಂಗಳು ಲಾಕ್‌ಡೌನ್‌ ಆಗಲಿ, ಬದುಕುತ್ತೇವೆ. ಆದ್ರೆ ನಮ್‌ಗೆ ಇಲ್ಲಿಯೇ ಇರಲು ಅವಕಾಶ ಕೊಡಿ. ಕುರಿಗಳ ಮೇಯಿಸಿಕೊಂಡು ನಿಮ್‌ ತಂಟೆಗೆ ಬಾರದೇ ಇರ್ತೇವೆ’’ ಬಯಲುಸೀಮೆಯ ಕುರಿಗಾಹಿಗಳು ಮಲೆನಾಡಿಗರ ಮುಂದೆ ಗೋಗರೆಯುತ್ತಿರುವ ಪರಿಯಿದು.

Add Asianetnews Kannada as a Preferred SourcegooglePreferred

ಪ್ರತಿ ವರ್ಷದಂತೆ ಮಲೆನಾಡಿನ ಪ್ರದೇಶಗಳಲ್ಲಿ ಕುರಿಹಿಂಡು ಮೇಯಿಸಲು ಹೋಗಿರುವ ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ಗೊಲ್ಲರಹಟ್ಟಿಯ ಕುರಿಗಾಯಿಗಳಿಗೆ ಕೊರೋನಾ ಭೀತಿ ಆವರಿಸಿದೆ. ಕುರಿಗಳಿಂದ ಕೊರೋನಾ ಸೋಂಕು ತಗುಲಬಹುದು ಎಂದು ಭಾವಿಸಿರುವ ಮಲೆನಾಡಿಗರು ಕುರಿಗಾಹಿಗಳನ್ನು ವಾಪಸ್ಸು ಕಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಒತ್ತಾಯಿಸುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ವೈರಸ್‌ ವದಂತಿ:

ಕುರಿಗಳ ಮೂಲಕ ಕೊರೋನಾ ವೈರಸ್‌ ಹರಡುತ್ತದೆ ಎಂಬ ವದಂತಿಗಳು ಹರಡಿದೆ. ಇದರಿಂದ ಈ ನೆಲ ಬಿಟ್ಟು ಹೋಗುವಂತೆ ಆಲ್ಲಿಯ ಜನ ಕುರಿಗಾಹಿಗಳಿಗೆ ಹೇಳುತ್ತಿದ್ದಾರೆ. ಮತ್ತೊಂದೆಡೆ ನೀವು ನಮ್ಮೂರಿಗೆ ವಾಪಸ್ಸು ಬರಬಾರದು. ಅಲ್ಲಿಯೇ ಇದ್ದು ಕುರಿಗಳ ಮೇಯಿಸಿರಿ ಎಂದು ಹುಟ್ಟೂರಿನಿಂದ ಕುರಿಗಾಹಿಗಳಿಗೆ ಸಂದೇಶಗಳು ರವಾನೆಯಾಗುತ್ತಿವೆ. ಇತ್ತ ಮಲೆನಾಡಿನಲ್ಲೂ ಇರೋಕೆ ಬಿಡುತ್ತಿಲ್ಲ, ಅತ್ತ ಸ್ವಂತ ಊರಿಗೂ ಹೋಗೋಕೆ ಅವಕಾಶವಿಲ್ಲದಂತಾಗಿ ಕುರಿಗಾಹಿಗಳಿಗೆ ಅಡಕತ್ತರಿಗೆ ಸಿಲುಕಿದ್ದಾರೆ. ಅಲ್ಲದೇ, ಹೊಸದುರ್ಗದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಕಿರಣ್‌ ಅವರು, ಕುರಿಗಳಿಂದ ಕೊರೋನಾ ವೈರಸ್‌ ಹರಡುವುದಿಲ್ಲ. ಇದು ಸುಳ್ಳು ಸುದ್ದಿ. ಈ ಬಗ್ಗೆ ಜನ ಗೊಂದಲ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಆದರೆ ಗ್ರಾಮೀಣರು ಒಪ್ಪುವ ಸ್ಥಿತಿಯಲ್ಲಿ ಇಲ್ಲ.

ಯಾವುದೇ ಕಾರ​ಣಕ್ಕೂ ಕೇರಳ ಗಡಿ ತೆರ​ವಿ​ಲ್ಲ: ಪ್ರತಾ​ಪ್‌​ಸಿಂಹ

ಮಲೆನಾಡಿನ ಬೆಟ್ಟದ ತಪ್ಪಲಿನಲ್ಲಿ ಕುರಿ ಮೇಯಿಸಲು ಹೋಗಿರುವ ಕುರಿಗಾಯಿಗಳಿಗೆ ಅಲ್ಲಿನ ಅಧಿಕಾರಿಗಳು ಅವರಿಗೆ ಇರಲು ಅವಕಾಶ ನೀಡಬೇಕು. ಅವರಿಗೆ ಆರೋಗ್ಯ ತಪಾಸಣೆ ಮಾಡಿಸಿದರೆ ಸಾಕು. ಯಾವುದೇ ಆಹಾರ ಪದಾರ್ಥಗಳನ್ನು ನೀಡುವುದು ಬೇಡÜ. ಅವರಲ್ಲಿಯೇ ಸಾಕಷ್ಟುಆಹಾರ ದಾಸ್ತಾನು ಇದೆ. ಈ ಭಾಗದಲ್ಲಿ ಮಳೆ ಬಂದು ಮೇವು ಬರುವವರೆಗೂ ಅಲ್ಲಿಯೇ ಇರುತ್ತಾರೆ ಎಂದು ಹೊಸದುರ್ಗ ತಾಲೂಕು ಚಿತ್ತಯ್ಯನಹಟ್ಟಿ ಲಕ್ಕಪ್ಪ ಹೇಳಿದ್ದಾರೆ.

-ವಿಶ್ವನಾಥ ಶ್ರೀರಾಂಪುರ