ಯಾವುದೇ ಕಾರಣಕ್ಕೂ ಕೇರಳ ಗಡಿ ತೆರವಿಲ್ಲ: ಪ್ರತಾಪ್ಸಿಂಹ
ಯಾವುದೇ ಕಾರಣಕ್ಕೂ ಕಾಸರಗೋಡು, ಮಡಿಕೇರಿ ಗಡಿಯನ್ನು ತೆರವು ಮಾಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕಾಸರಗೋಡು ಸಂಸದನಿಗೆ ತನ್ನ ಕ್ಷೇತ್ರದ ಜನ ಎಷ್ಟುಮುಖ್ಯವೋ, ಕರ್ನಾಟಕದ ಮುಖ್ಯಮಂತ್ರಿಗೆ ತನ್ನ ರಾಜ್ಯದ ಜನರೂ ಅಷ್ಟೇ ಮುಖ್ಯ. ಹಾಗೆಯೇ ಶಾಸಕ ಬೋಪಯ್ಯ ಅವರಿಗೂ ತನ್ನ ಕ್ಷೇತ್ರದ ಜನ ಮುಖ್ಯ ಎಂದಿದ್ದಾರೆ.
ಮಡಿಕೇರಿ(ಎ.01): ಕೇರಳ ಗಡಿಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಮಂಗಳವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬೋಪಯ್ಯ, ಕೊಡಗು-ಕೇರಳ ಗಡಿಗಳಾದ ಮಾಕುಟ್ಟ, ಕುಟ್ಟಮತ್ತು ಕರಿಕೆ ಬಂದ್ ಮಾಡಿದ್ದಾರೆ.
ಒಬ್ಬ ಶಾಸಕರಾಗಿ ಬೋಪಯ್ಯ ತನ್ನ ಕ್ಷೇತ್ರದ ಜನರ ರಕ್ಷಣೆಯನ್ನು ಗಡಿ ಬಂದ್ ಮೂಲಕ ಮಾಡಿದ್ದಾರೆ. ಗಡಿ ಬಂದ್ ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕಾಸರಗೋಡು ಸಂಸದನಿಗೆ ತನ್ನ ಕ್ಷೇತ್ರದ ಜನ ಎಷ್ಟುಮುಖ್ಯವೋ, ಕರ್ನಾಟಕದ ಮುಖ್ಯಮಂತ್ರಿಗೆ ತನ್ನ ರಾಜ್ಯದ ಜನರೂ ಅಷ್ಟೇ ಮುಖ್ಯ. ಹಾಗೆಯೇ ಶಾಸಕ ಬೋಪಯ್ಯ ಅವರಿಗೂ ತನ್ನ ಕ್ಷೇತ್ರದ ಜನ ಮುಖ್ಯ ಎಂದರು.
ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್: ಮೋದಿಗೆ ಕೇರಳ ಸಿಎಂ ಪತ್ರ
ಗಡಿ ರಸ್ತೆ ತೆರೆದಿದ್ದರೆ ಸಮಸ್ಯೆಯಾಗುತ್ತಿತ್ತು. ಈಗಾಗಲೇ ಪರಿಸ್ಥಿತಿ ನಿಯಂತ್ರಣ ತಪ್ಪಿರುವ ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ಕೊಡಗಿಗೆ ಉಂಟಾಗುತ್ತಿದ್ದ ಅಪಾಯವನ್ನು ಊಹಿಸಲೂ ಕಷ್ಟ. ಕೊಡಗು ಸದ್ಯ ಸುರಕ್ಷಿತವಾಗಿದೆ. ಅಧಿಕಾರಿಗಳು ದಿಟ್ಟನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯ ಜನರ ಸಹಕಾರ ಈವರೆಗೂ ಚೆನ್ನಾಗಿದೆ. ಇನ್ನೂ 14 ದಿನ ಮನೆ ಒಳಗೇ ಇದ್ದು ಸಹಕರಿಸಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.