ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ರೈತರ ಬದುಕು: ಸಂಕಷ್ಟದಲ್ಲಿ ಅನ್ನದಾತ
ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ದೂಡಿದ ಕೊರೋನಾ| ರಿಲರ್ ಮೂಲಕ ಸರ್ಕಾರ ಖರೀದಿಸಲು ರೈತರ ಆಗ್ರಹ|ತರಕಾರಿ ಬೆಳೆದ ರೈತರೂ ಕಂಗಾಲು| ಕೊರೋನಾ ರೋಗದ ಭಯದಿಂದ ಮಾರುಕಟ್ಟೆ ಸ್ತಬ್ಧಗೊಂಡಿರುವ ಪರಿಣಾಮ ರೇಷ್ಮೆ ಬೆಳೆ ಮಾರಾಟ ಮಾಡದ ಸ್ಥಿತಿ ನಿರ್ಮಾಣ|
ಎಸ್.ಎಂ.ಸೈಯದ್
ಗಜೇಂದ್ರಗಡ(ಏ.02): ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಘೋಷಿಸಿದೆ. ಪರಿಣಾಮ ರೇಷ್ಮೆ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನಲ್ಲಿ ರೈತರು ಅಂದಾಜು 180 ಎಕರೆಯಲ್ಲಿ ರೇಷ್ಮೆ ಬೆಳೆದಿದ್ದು ಹುಳುಗಳು ಈಗಾಗಲೇ ಗೂಡು ಕಟ್ಟಿವೆ. ಉಳಿದ ಬೆಳೆಗಳಂತೆ ರೇಷ್ಮೆ ಸಂಗ್ರಹಿಸಲು ಅಸಾಧ್ಯ. 2-3 ದಿನಗಳಲ್ಲಿ ರೇಷ್ಮೆ ಗೂಡುಗಳನ್ನು ಮಾರಾಟ ಮಾಡದಿದ್ದರೆ ಅಪಾರ ಪ್ರಮಾಣದ ನಷ್ಟ ರೈತರಿಗಾಗುತ್ತದೆ.
ಕಾಲಕಾಲೇಶ್ವರ ಗ್ರಾಮದ ರೈತ ಕಳಕಪ್ಪ ಹೂಗಾರ ಅಂದಾಜು ಎರಡೂವರೆ ಎಕರೆ ಜಮೀನಲ್ಲಿ ರೇಷ್ಮೆ ಬೆಳೆಯಲು ಅಂದಾಜು 32 ಸಾವಿರ ಖರ್ಚು ಮಾಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 350 ಬೆಲೆಯಿದೆ. 80 ಸಾವಿರ ಲಾಭದ ನಿರೀಕ್ಷೆಲ್ಲಿದ್ದರು. ಆದರೆ, ಜಿಲ್ಲೆಯಲ್ಲಿ ಕಲಂ 144 ಜಾರಿಯಲ್ಲಿರುವುದರಿಂದ ಹೊಲಕ್ಕೆ ಕೂಲಿ ಕಾರ್ಮಿಕರು ಬಾರದ ಹಿನ್ನೆಲೆಯಲ್ಲಿ ಮನೆಯ ಎಲ್ಲ ಸದಸ್ಯರು ರೇಷ್ಮೆ ಬಿಡಿಸುತ್ತಿದ್ದಾರೆ.
ಇಂದಿನ ಕೆಟ್ಟ ಪರಿಸ್ಥಿತಿಗೆ ನಾವೇ ಕಾರಣ, ಕೊರೋನಾ ಹರಡದಂತೆ ತಡೆಯೋಣ: ದಿಂಗಾಲೇಶ್ವರ ಶ್ರೀ
ಮಾರುಕಟ್ಟೆ ಬಂದ್ ಇರುವುದರಿಂದ ರೈತ ಕಳಕಪ್ಪ ಹೂಗಾರ ಬೆಳೆದಿರುವ ಅಂದಾಜು 2 ಕ್ವಿಂಟಲ್ ರೇಷ್ಮೆ ಜೊತೆಗೆ ಉಳಿದ ರೈತರ ರೇಷ್ಮೆ ಸಂಪೂರ್ಣ ಹಾಳಾಗುವ ಸ್ಥಿತಿಗೆ ಬಂದಿದೆ. ಹೀಗಾಗಿ, ಸರ್ಕಾರ ನೇರವಾಗಿ ರಿಲರ್ ಮೂಲಕ ರೇಷ್ಮೆ ಬೆಳೆಯನ್ನು ಖರೀದಿಸಿ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕು ಎನ್ನುತ್ತಾರೆ ಸುರೇಶ ಕಿನ್ನಾಳ, ಮಲ್ಲಪ್ಪ ಮಳಗಿ, ಬಸವರಾಜ ಉಪ್ಪಲದಿನ್ನಿ, ವೀರಭದ್ರಪ್ಪ ಇಟಗಿ ಹಾಗೂ ಗೂಳಪ್ಪ ಕಮಾಟರ ರೇಷ್ಮೆ ಬೆಳೆಗಾರರು.
ತಾಲೂಕಿನ ರೇಷ್ಮೆ ಬೆಳೆಗಾರರ ಪ್ರಸ್ತುತ ಸ್ಥಿತಿಯನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇನ್ನುಳಿದ ರೈತರಿಗೆ ಕೆಲ ದಿನಗಳ ಕಾಲ ರೇಷ್ಮೆ ಬೆಳೆಯದಂತೆ ಮೌಖಿಕ ಆದೇಶ ನೀಡಲಾಗಿದೆ ಎಂದು ಗಜೇಂದ್ರಗಡ ವಲಯದ ರೇಷ್ಮೆ ಪ್ರದರ್ಶಕರು ಸುರೇಶ ಧಾನಕ ಹೇಳಿದ್ದಾರೆ.
ಹತ್ತಾರು ನಿರೀಕ್ಷೆ ಇಟ್ಟುಕೊಂಡು ರೇಷ್ಮೆ ಬೆಳೆಯಲಾಗಿತ್ತು. ಆದರೆ, ಕೊರೋನಾ ರೋಗದ ಭಯದಿಂದ ಮಾರುಕಟ್ಟೆ ಸ್ತಬ್ಧಗೊಂಡಿರುವ ಪರಿಣಾಮ ರೇಷ್ಮೆ ಬೆಳೆಯನ್ನು ಮಾರಾಟ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾಲಕಾಲೇಶ್ವರ ಗ್ರಾಮದ ರೇಷ್ಮೆ ಬೆಳೆಗಾರ ಕಳಕಪ್ಪ ಹೂಗಾರ ತಿಳಿಸಿದ್ದಾರೆ.