ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಕುಲ್‌ ಸೂಚನೆ| ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳು ಅಗತ್ಯವಿದ್ದಲ್ಲಿ ಬೇಡಿಕೆಯ ಪಟ್ಟಿಯನ್ನು ಕೂಡಲೇ ಸಲ್ಲಿಸಿ| ಈಗಾಗಲೇ ಕೋವಿಡ್‌ ಆಸ್ಪತ್ರೆಗೆ ಬಹುತೇಕ ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳನ್ನು ಒದಗಿಸಲಾಗಿದೆ|

ಬಳ್ಳಾರಿ(ಏ.05): ಜಿಲ್ಲೆಯಲ್ಲಿನ ಕೋವಿಡ್‌ ಆಸ್ಪತ್ರೆ, ಹೋಂ ಕ್ವಾರಂಟೈನ್‌, ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರಿಂದ ಕೌನ್ಸೆಲಿಂಗ್‌ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯಲು ಹಣ ನೀಡಲು ಪೀಡಿಸಿದ ಅಣ್ಣ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ತಮ್ಮ

ಚಿಕಿತ್ಸೆ ಪಡೆಯುತ್ತಿರುವವರಿಗೆ ಕೌನ್ಸೆಲಿಂಗ್‌ ಅಗತ್ಯವಿದೆ ಎಂದು ತಿಳಿದು ಬಂದಿದೆ. ಕೂಡಲೇ ಅವರಿಗೆ ಕೌನ್ಸೆಲಿಂಗ್‌ ಮಾಡುವುದರ ಮೂಲಕ ಕೊರೋನಾ ವೈರಸ್‌ ಭಯದಿಂದ ಹೊರಬರುವಂತೆ ನೋಡಿಕೊಳ್ಳಬೇಕು. ಪ್ರತಿನಿತ್ಯ ಒಂದು ಬಾರಿಯಂತೆ ಹೋಂ ಕ್ವಾರಂಟೈನ್‌, ಕೋವಿಡ್‌ ಆಸ್ಪತ್ರೆ, ಐಸೋಲೇಶನ್‌ ವಾರ್ಡ್‌ಗಳಿಗೆ ಭೇಟಿ ನೀಡಿ ಮನೋವೈದ್ಯರು ಹಾಗೂ ಕೌನ್ಸಿಲರ್‌ಗಳು ಕೌನ್ಸೆಲಿಂಗ್‌ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಸೂಚಿಸಿದರು.

ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳು ಅಗತ್ಯವಿದ್ದಲ್ಲಿ ಬೇಡಿಕೆಯ ಪಟ್ಟಿಯನ್ನು ಕೂಡಲೇ ಸಲ್ಲಿಸಿ. ಈಗಾಗಲೇ ಕೋವಿಡ್‌ ಆಸ್ಪತ್ರೆಗೆ ಬಹುತೇಕ ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳನ್ನು ಒದಗಿಸಲಾಗಿದೆ. ಇನ್ನೂ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್‌ ರೂಂ ಸಿಬ್ಬಂದಿಗೆ ಕೋವಿಡ್‌- 19 ಗೈಡ್‌ಲೈನ್ಸ್‌ ಕುರಿತು ಹಾಗೂ ಪೋನ್‌ ಕರೆ ಬಂದಾಗ ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ಕೂಡಲೇ ಮಾಡಿ ಎಂದು ಅವರು ಸೂಚಿಸಿದರು.

ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್‌, ವಿಮ್ಸ್‌ ನಿರ್ದೇಶಕ ಬಿ. ದೇವಾನಂದ್‌, ಅಪರ ಜಿಲ್ಲಾಧಿಕಾರಿ ಮಂಜುನಾಥ, ಡಿಎಚ್‌ಒ ಡಾ. ಜನಾರ್ದನ ಹಾಗೂ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯರು ಇದ್ದರು.