ಬಿಬಿಎಂಪಿ ಸದಸ್ಯರ ದೂರು| ಇಂದಿರಾ ಕ್ಯಾಂಟೀನ್‌ ಆಹಾರ ಹೆಚ್ಚಿಸಲು ಸಚಿವ ಅಶೋಕ್‌ಗೆ ಒತ್ತಾಯ| ನಿತ್ಯ ಪೂರೈಕೆ ವಸ್ತುಗಳಿಗೆ ಮಲ್ಲೇಶ್ವರದ ಆಟದ ಮೈದಾನದ ಸ್ಥಳವನ್ನು ಉಪಯೋಗಿಸಿಕೊಂಡು ತಾತ್ಕಾಲಿಕವಾಗಿ ಮಾರುಕಟ್ಟೆ ಸ್ಥಾಪಿಸಬೇಕು|

ಬೆಂಗಳೂರು(ಏ.03): ಕೊಳಗೇರಿ ಪ್ರದೇಶಗಳಲ್ಲಿ ಸರಿಯಾಗಿ ಆಹಾರ ಪೊಟ್ಟಣಗಳು ಪೂರೈಕೆಯಾಗುತ್ತಿಲ್ಲ, ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬೇಕು, ಇಂದಿರಾ ಕ್ಯಾಂಟೀನಲ್ಲಿ ವಿತರಿಸುತ್ತಿರುವ ಆಹಾರ ಪೊಟ್ಟಣಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಬಿಬಿಎಂಪಿ ಸದಸ್ಯರು ಒತ್ತಾಯಿಸಿದ್ದಾರೆ.

ಗುರುವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ‘ಕೊರೋನಾ ವಾರ್‌ ರೂಂ’ನಲ್ಲಿ ಕೋವಿಡ್‌-19 ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬಿಬಿಎಂಪಿ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಸದಸ್ಯರು, ನಿತ್ಯ ಪೂರೈಕೆ ವಸ್ತುಗಳಿಗೆ ಮಲ್ಲೇಶ್ವರದ ಆಟದ ಮೈದಾನದ ಸ್ಥಳವನ್ನು ಉಪಯೋಗಿಸಿಕೊಂಡು ತಾತ್ಕಾಲಿಕವಾಗಿ ಮಾರುಕಟ್ಟೆ ಸ್ಥಾಪಿಸಬೇಕು. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಸೇರಿದಂತೆ ಹಲವು ಸಲಹೆ, ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಭಾರತ್‌ ಲಾಕ್‌ಡೌನ್‌: 'ವೈದ್ಯಕೀಯ ತುರ್ತು ಸೇವೆಗೆ ಹೊಯ್ಸಳ ವಾಹನ ಬಳಸಿ'

ಈ ವೇಳೆ ಮಾತನಾಡಿದ ಸಚಿವ ಆರ್‌.ಅಶೋಕ್‌, ಕೊರೋನಾ ಸೋಂಕು ಹರಡದಿರಲು ಬಿಬಿಎಂಪಿಯ ಪ್ರತಿಯೊಬ್ಬ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ, ಶಂಕಿತರನ್ನು ಗುರುತಿಸಿ ಅವರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು, ನಾಗರಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಕೊಳಗೇರಿ ಪ್ರದೇಶಗಳಲ್ಲಿ ಹಾಲು ವಿತರಣೆ ಮಾಡಲು ಮುಂದಾಗಿದೆ. ಹೀಗಾಗಿ ಆಹಾರ ಸಾಮಗ್ರಿಗಳು, ಹಾಲು ಫಲಾನುಭವಿಗಳಿಗೆ ತಲುಪಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಮೇಯರ್‌ ಗೌತಮ್‌ಕುಮಾರ್‌, ಉಪ ಮೇಯರ್‌ ರಾಮಮೋಹನ ರಾಜು, ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾನಾರಾಯಣ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಮತ್ತಿತರರಿದ್ದರು.