ಕಲ್ಲಂಗಡಿ ಮತ್ತು ಸೌತೆಕಾಯಿಯಿಂದ ರೋಗ ನಿರೋಧ ಶಕ್ತಿ ವೃದ್ಧಿ| ಕಲ್ಲಂಗಡಿಯಿಂದ ಕೊರೋನಾ ಹರಡುತ್ತದೆ ಎಂಬುವುದು ಶುದ್ಧ ಸುಳ್ಳು: ಕೃಷಿ ಸಚಿವ ಬಿ.ಸಿ.ಪಾಟೀಲ| ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬಿತ್ತನೆ ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ|

ವಿಜಯಪುರ(ಏ.08): ಕಲ್ಲಂಗಡಿಯಿಂದ ಕೊರೋನಾ ಬರುವುದಿಲ್ಲ. ಕಲ್ಲಂಗಡಿಯಿಂದ ಕೊರೋನಾ ಹರಡುತ್ತದೆ ಎಂಬುವುದು ಶುದ್ಧ ಸುಳ್ಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ. ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಕಲ್ಲಂಗಡಿ ತಿಂದರೆ ಕೊರೋನಾ ಬರುತ್ತದೆ ಎಂಬ ಅಪಪ್ರಚಾರದಿಂದ ಕಲ್ಲಂಗಡಿ ಮಾರಾಟವಾಗುತ್ತಿಲ್ಲ ಎಂದು ದೂರುಗಳು ಬಂದಿವೆ. ವಾಸ್ತವವಾಗಿ ಕಲ್ಲಂಗಡಿ ತಿನ್ನುವುದರಿಂದ ಕೊರೋನಾ ಹರಡುವುದಿಲ್ಲ. ಇದನ್ನು ಪುಷ್ಟೀಕರಿಸಲು ಯಾವುದೇ ಪುರಾವೆ ಇಲ್ಲ ಎಂದರು.

ಕಲ್ಲಂಗಡಿ ಹಾಗೂ ಸವತೆಕಾಯಿ ತಿನ್ನುವುದರಿಂದ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಕಲ್ಲಂಗಡಿ ತಿನ್ನುವುದರಿಂದ ಕೊರೋನಾ ಬರುತ್ತದೆ ಎಂದು ಭಯಪಡುವ ಅಗತ್ಯವಿಲ್ಲ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬಿತ್ತನೆ ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ಮುಂಗಾರು ಬಿತ್ತನೆ ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೆ ಗೋವಾ ಕನ್ನಡಿಗರ ಪರದಾಟ, ಎಂ.ಬಿ ಪಾಟೀಲ್‌ ನೆರವು

ರೈತರಿಗೆ ಯಾವುದೇ ಅಧಿಕಾರಿಗಳು ತೊಂದರೆ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿರುವುದಾಗಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಕೆಲಸ. ರೈತರು ಆತ್ಮಹತ್ಯೆಯಂತಹ ಹೇಡಿ ಕೆಲಸಕ್ಕೆ ಕೈ ಹಾಕಬಾರದು. ರೈತರು ಧೈರ್ಯದಿಂದ ಬದುಕು ಎದುರಿಸಬೇಕು. ಸರ್ಕಾರ ತಮ್ಮ ಜೊತೆಗಿದೆ. ಹೆದರುವ ಅವಶ್ಯಕತೆ ಇಲ್ಲ ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

ಕೊರೋನಾ ಭೀತಿಯಿಂದ ರೈತರಿಗೆ ತಾತ್ಕಾಲಿಕ ಕಷ್ಟವಾಗಿರಬಹುದು. ಆದರೆ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಕೊರೋನಾ ಬಹುಬೇಗನೆ ತೊಲಗುತ್ತದೆ. ಆದ್ದರಿಂದ ರೈತರು ಧೈರ್ಯದಿಂದ ಬದುಕು ಎದುರಿಸಬೇಕು ಎಂದು ಸಲಹೆ ನೀಡಿದರು.